ನವದೆಹಲಿ: ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶುಕ್ರವಾರ ಮತ್ತೊಬ್ಬ ಆರೋಪಿಯನ್ನು ಹುಬ್ಬಳ್ಳಿಯಲ್ಲಿ ಬಂಧಿಸಿದೆ. ಇದರಿಂದಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಬಂಧಿತರ ಸಂಖ್ಯೆ ಈಗ ಐದಕ್ಕೇರಿದೆ.
ಬಂಧಿತ ಹುಬ್ಬಳ್ಳಿಯ ಶಂಕಿತ ಉಗ್ರನನ್ನು ಶೋಯೆಬ್ ಅಹ್ಮದ್ ಮಿರ್ಜಾ ಅಲಿಯಾಸ್ ಚೋಟು ಎಂದು ಹೇಳಲಾಗಿದೆ. ಈ ಶಂಕಿತ ಹುಬ್ಬಳ್ಳಿ ನಿವಾಸಿ, ಲಷ್ಕರ್-ಎ- ತಯ್ಯಬಾ ಉಗ್ರ ಚಟುವಟಿಕೆ ಸಂಚಿನ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಎಂದು ಎನ್ಐಎ ಹೇಳಿದೆ. ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ 4 ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಶುಕ್ರವಾರ ಮತ್ತೂಬ್ಬ ಆರೋಪಿಯನ್ನು ಬಂಧಿಸ ಲಾಗಿದೆ ಎಂದು ತಿಳಿಸಲಾಗಿದೆ.
2018ರಲ್ಲಿ ಜೈಲಿನಿಂದ ಹೊರಬಂದ ಬಳಿಕ ಮತೀನ್ ಸ್ನೇಹ ಬೆಳೆಸಿದ್ದ. ಬಳಿಕ ವಿದೇಶದಲ್ಲಿರುವ ಶಂಕಿತ ಆನ್ಲೈನ್ ಹ್ಯಾಂಡ್ಲರ್ಗೆ ಅಬ್ದುಲ್ ಮತೀನ್ನನ್ನು ಶೋಹೆಬ್ ಅಹ್ಮದ್ ಪರಿಚಯ ಮಾಡಿದ್ದ. ಹ್ಯಾಂಡ್ಲರ್ ಹಾಗೂ ಅಬ್ದುಲ್ ಮತೀನಾ ನಡುವಿನ ಸಂವಹನಕ್ಕಾಗಿ ಐಡಿ ಸಹ ನೀಡಿದ್ದ. ಎನ್ಕ್ರಿಪ್ಟ್ ಸಂವಹನಕ್ಕಾಗಿ ಶೋಹೆಬ್ ಇ-ಮೇಲ್ ಐಡಿ ನೀಡಿದ್ದ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಕಳೆದ 3 ದಿನಗಳ ಹಿಂದಷ್ಟೇ ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಹುಬ್ಬಳ್ಳಿಯಲ್ಲೂ ದಾಳಿ ನಡೆಸಿದ್ದ ಎನ್ಐಎ ಶೋಹೆಬ್ ಮತ್ತು ಸಹೋದರನನ್ನ ವಶಕ್ಕೆ ಪಡೆದಿತ್ತು. ತೀವ್ರ ವಿಚಾರಣೆಯ ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಹೆಬ್ ಮಿರ್ಜಾನನ್ನು ಬಂಧಿಸಿದೆ. ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಆರೋಪಿ ಮುಸಾವೀರ್ ಹುಸೇನ್ ಶಜೀಬ್ ಜತೆಗೆ ಅಬ್ದುಲ್ ಮತೀನಾ ತಾಹಾನನ್ನು ಎನ್ಐಎಯು ಏಪ್ರಿಲ್ 12ರಂದು ಕೋಲ್ಕತಾದಲ್ಲಿ ಬಂಧಿಸಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ