ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ​ರಕ್ತದ ಮಾದರಿ ತಿರುಚಿದ ಆರೋಪದ ಮೇಲೆ ಇಬ್ಬರು ವೈದ್ಯರ ಬಂಧನ

ಪುಣೆ: ಮೇ 19 ರಂದು ಪುಣೆಯ ಕಲ್ಯಾಣಿ ನಗರದಲ್ಲಿ ಕಾರು ಅಪಘಾತಕ್ಕೀಡಾಗಿ ಮೋಟರ್‌ಬೈಕ್‌ನಲ್ಲಿದ್ದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಭಾಗಿಯಾಗಿದ್ದ 17 ವರ್ಷದ ಬಾಲಕನ ರಕ್ತದ ವರದಿಯನ್ನು ತಿರುಚಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಪುಣೆಯ ಸಸೂನ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
ಪೋರ್ಷೆ ಕಾರಿನ ಮಾರಣಾಂತಿಕ ಅಪಘಾತದ ನಂತರ ಕಾರು ಚಾಲನೆ ಮಾಡುತ್ತಿದ್ದ ಎನ್ನಲಾದ 17 ವರ್ಷದ ಬಾಲಕನ ವೈದ್ಯಕೀಯ ತಪಾಸಣೆಗಾಗಿ ಸಾಸೂನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಈಗ ಬಾಲಕನ ರಕ್ತದ ಮಾದರಿ ತಿರುಚಿದ ಆರೋಪದ ಮೇಲೆ ಪುಣೆಯ ಸಾಸೂನ್ ಜನರಲ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆರೋಪಿ ಅಪ್ರಾಪ್ತನ ರಕ್ತದ ಮಾದರಿಯ ಆಲ್ಕೋಹಾಲ್‌ ಪ್ರಮಾಣದ ವರದಿಯನ್ನು ನೆಗೆಟಿವ್‌ ಎಂದು ತೋರಿಸಲು ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯೊಂದಿಗೆ ಅದನ್ನು ಬದಲಾಯಿಸಲಾಗಿದೆ ಎಂಬುದು ಗೊತ್ತಾದ ನಂತರ ಇಬ್ಬರು ವೈದ್ಯರನ್ನು ಬಂಧಿಸಲಾಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಅಪ್ರಾಪ್ತ ವಯಸ್ಕನ ಮೊದಲ ರಕ್ತದ ಮಾದರಿಯ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ವರದಿಯು ಆತನ ದೇಹದಲ್ಲಿ ಆಲ್ಕೋಹಾಲ್ ಅನ್ನು ತೋರಿಸಲಿಲ್ಲ, ಆದರೆ ಎರಡನೇ ರಕ್ತದ ಮಾದರಿಯ ವರದಿಯ ಫಲಿತಾಂಶಗಳು ಇದಕ್ಕೆ ವಿರುದ್ಧವಾಗಿದ್ದು, ದೇಹದಲ್ಲಿ ಆಲ್ಕೋಹಾಲ್‌ ಇತ್ತು ಎಂದು ತೋರಿಸಿದೆ. ಹೀಗಾಗಿ ಮೊದಲ ವರದಿಯ ಸಿಂಧುತ್ವದ ಬಗ್ಗೆ ಅನುಮಾನ ಮೂಡಿಸುವಂತಾಯಿತು.
ನಂತರ ಎರಡೂ ರಕ್ತದ ಮಾದರಿಗಳ ಡಿಎನ್‌ಎ ಪರೀಕ್ಷೆಗಳನ್ನು ನಡೆಸಿದಾಗ ಈ ರಕ್ತದ ಮಾದರಿಗಳು ವಿಭಿನ್ನ ವ್ಯಕ್ತಿಗಳದ್ದು ಎಂದು ಪರೀಕ್ಷೆ ದೃಢಪಡಿಸಿತು. ಹೀಗಾಗಿ ಸಾಕ್ಷ್ಯಾಧಾರಗಳನ್ನು ಹಾಳುಮಾಡುವಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಪೊಲೀಸರು ಡಾ. ಶ್ರೀಹರಿ ಹಾರ್ನರ್ ಅವರೊಂದಿಗೆ ಸರ್ಕಾರಿ ಆಸ್ಪತ್ರೆಯ ಫೋರೆನ್ಸಿಕ್ ಲ್ಯಾಬ್‌ನ ಮುಖ್ಯಸ್ಥ ಡಾ ಅಜಯ ತಾವ್ರೆ ಅವರನ್ನೂ ಬಂಧಿಸಿದ್ದಾರೆ.
ಪುಣೆ ಪೋರ್ಷೆ ಅಪಘಾತ ಪ್ರಕರಣ ಮೊದಲಿನಿಂದಲೂ ವಿವಾದಗಳಿಂದ ಕೂಡಿದೆ. ವಾಹನ ಚಾಲನೆ ಮಾಡಿ ಇಬ್ಬರ ಸಾವಿಗೆ ಕಾರಣವಾದ ಅಪ್ರಾಪ್ತನಿಗೆ ಆರಂಭದಲ್ಲಿ ಜುವೆನೈಲ್ ಜಸ್ಟಿಸ್ ಬೋರ್ಡ್ ಜಾಮೀನು ನೀಡಿತು, ಅದು ರಸ್ತೆ ಅಪಘಾತಗಳ ಬಗ್ಗೆ ಪ್ರಬಂಧ ಬರೆಯುವಂತೆ ಸೂಚಿಸಿತು. ಆದರೆ ಸಾರ್ವಜನಿಕ ಆಕ್ರೋಶದ ನಂತರ ಮರುಪರಿಶೀಲನಾ ಅರ್ಜಿಯಲ್ಲಿ ಜೂನ್ 5 ರವರೆಗೆ ಅಪ್ರಾಪ್ತ ಆರೋಪಿಯನ್ನು ರಿಮಾಂಡ್‌ ಹೋಮ್‌ಗೆ ಕಳುಹಿಸಲಾಯಿತು.

ಪ್ರಮುಖ ಸುದ್ದಿ :-   ತನ್ನ ಬಿಟ್ಟು ಬೇರೊಬ್ಬಳನ್ನು ಮದುವೆಯಾದ ವ್ಯಕ್ತಿ ಸಿಲುಕಿಸಲು 21 ಸಲ ಬಾಂಬ್ ಬೆದರಿಕೆ ಹಾಕಿದ್ದ ಮಹಿಳಾ ರೊಬೊಟಿಕ್ಸ್ ಎಂಜಿನಿಯರ್ ಬಂಧನ...!

ಐಟಿ ಇಂಜಿನಿಯರ್‌ಗಳಾದ ಅಶ್ವಿನಿ ಕೋಷ್ಠಾ ಮತ್ತು ಅನೀಶ ಅವಧಿಯಾ ಅವರ ಸಾವಿಗೆ ಕಾರಣವಾದ ಅದೇ ಪೋರ್ಷೆ ಕಾರು ಅಪಘಾತ ಪ್ರಕರಣದಲ್ಲಿ ಅಗರ್ವಾಲ್ ಕುಟುಂಬದ ಮೂರು ತಲೆಮಾರಿನವರು ವಿವಿಧ ಆರೋಪಗಳ ಅಡಿಯಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ.
ಪ್ರಕರಣವು ಮಾಧ್ಯಮಗಳ ಗಮನ ಸೆಳೆದ ನಂತರ, ಪೊಲೀಸರು ಅಪಘಾತಕ್ಕೆ ಸಂಬಂಧಿಸಿದಂತೆ ಅಪ್ರಾಪ್ತನ ತಂದೆ, ರಿಯಲ್‌ ಎಸ್ಟೇಟ್‌ ಉದ್ಯಮಿ ವಿಶಾಲ ಅಗರ್ವಾಲ್ ಮತ್ತು ಅಜ್ಜ ಸುರೇಂದ್ರ ಅಗರ್ವಾಲ್ ಅವರನ್ನು ಬಂಧಿಸಿದ್ದಾರೆ.
ಡ್ರೈವಿಂಗ್ ಲೈಸೆನ್ಸ್ ಇಲ್ಲ ಎಂದು ತಿಳಿದಾಗ ಕಾರನ್ನು ಅಪ್ರಾಪ್ತ ಮಗನಿಗೆ ನೀಡುವ ಮೂಲಕ “ಮಗುವನ್ನು ಅಪಾಯಕ್ಕೆ ಒಡ್ಡಿದ್ದಕ್ಕಾಗಿ” ಬಾಲನ್ಯಾಯ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಆದರೆ ಅಜ್ಜನನ್ನು ಚಾಲಕನನ್ನು ‘ಅಕ್ರಮವಾಗಿ ಬಂಧನದಲ್ಲಿ ಇರಿಸಿದ್ದಕ್ಕಾಗಿ ಬಂಧಿಸಲಾಯಿತು.
ಪ್ರಕರಣದಲ್ಲಿ ವಿಳಂಬ ವರದಿ ಮತ್ತು ಕರ್ತವ್ಯಲೋಪಕ್ಕಾಗಿ ಯರವಾಡ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ ಇಬ್ಬರು ಪೊಲೀಸರನ್ನು ಪುಣೆ ಪೊಲೀಸರು ಶುಕ್ರವಾರ ಅಮಾನತುಗೊಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement