ರಾಷ್ಟ್ರೀಯ ಪರೀಕ್ಷಾ ಪ್ರಕ್ರಿಯೆ ಸುಧಾರಣೆ : ಇಸ್ರೋ ಮಾಜಿ ಮುಖ್ಯಸ್ಥ ರಾಧಾಕೃಷ್ಣನ್‌ ನೇತೃತ್ವದಲ್ಲಿ 7 ಮಂದಿ ಸಮಿತಿ ರಚನೆ

ನವದೆಹಲಿ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ನ್ಯಾಯೋಚಿತವಾಗಿ ನಡೆಸಲು ಹಾಗೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಕಾರ್ಯವಿಧಾನವನ್ನು ಸಮಗ್ರವಾಗಿ ರೂಪಿಸಲು ಕೇಂದ್ರ ಸರ್ಕಾರವು ಇಸ್ರೊ ಮಾಜಿ ಮುಖ್ಯಸ್ಥ ಕೆ. ರಾಧಾಕೃಷ್ಣನ್‌ ನೇತೃತ್ವದಲ್ಲಿ ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಿದೆ.
ದೆಹಲಿಯ ಏಮ್ಸ್‌ ಮಾಜಿ ನಿರ್ದೇಶಕ ರಣದೀಪ ಗುಲೇರಿಯಾ, ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಬಿ.ಜೆ.ರಾವ್‌, ಐಐಟಿ ಮದ್ರಾಸ್‌ನ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಕೆ. ರಾಮಮೂರ್ತಿ, ‘ಪೀಪಲ್‌ ಸ್ಟ್ರಾಂಗ್‌’ನ ಸಹ ಸಂಸ್ಥಾಪಕ ಮತ್ತು ಕರ್ಮಯೋಗಿ ಭಾರತ್‌ ಮಂಡಳಿಯ ಸದಸ್ಯ ಪಂಕಜ ಬನ್ಸಾಲ್‌, ಐಐಟಿ ದೆಹಲಿ ವಿದ್ಯಾರ್ಥಿ ವ್ಯವಹಾರಗಳ ಡೀನ್‌ ಆದಿತ್ಯ ಮಿತ್ತಲ್‌, ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ ಜೈಸ್ವಾಲ್‌ ಸಮಿತಿಯ ಸದಸ್ಯರಾಗಿದ್ದಾರೆ.

‘ಪಾರದರ್ಶಕ, ನಕಲು ರಹಿತ ಮತ್ತು ಲೋಪ ಮುಕ್ತ ಪರೀಕ್ಷೆಗಳನ್ನು ನಡೆಸಬೇಕು ಎಂಬುದು ನಮ್ಮ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ ಶಿಫಾರಸುಗಳನ್ನು ಮಾಡಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿನ ದಕ್ಷತೆಯನ್ನು ಹೆಚ್ಚಿಸಲು, ದತ್ತಾಂಶ ಭದ್ರತೆಯನ್ನು ಬಲಪಡಿಸಲು ಹಾಗೂ ಸಂಭವನೀಯ ನಕಲು ಹಾಗೂ ಸೋರಿಕೆ ತಡೆಯಲು ಸಮಿತಿ ಶಿಫಾರಸುಗಳನ್ನು ಮಾಡಲಿದೆ. ಅಲ್ಲದೆ, ಎನ್‌ಟಿಎ ಸುಧಾರಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಮಿತಿ ತಿಳಿಸಲಿದೆ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ತಿಳಿಸಿದ್ದಾರೆ.
ಸಮಿತಿ ರಚನೆಯ ಕುರಿತು ಪ್ರಧಾನ ಅವರು ಪ್ರಕಟಿಸಿದ ಎರಡು ದಿನಗಳ ಬಳಿಕ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದ್ದು, ಎರಡು ತಿಂಗಳೊಳಗೆ ಸಮಿತಿ ವರದಿ ನೀಡಬೇಕಿದೆ.

ಪ್ರಮುಖ ಸುದ್ದಿ :-   ಇಂದು ಕರ್ನಾಟಕದ 17ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಯಲ್ಲೋ ಅಲರ್ಟ್‌

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement