ಜಿಂಬಾಬ್ವೆ T20 ಸರಣಿಗೆ ಭಾರತದ ತಂಡ ಪ್ರಕಟ ; ಗಿಲ್ ಗೆ ನಾಯಕತ್ವ, ಹಿರಿಯರಿಗೆ ವಿಶ್ರಾಂತಿ, ಯುವ ಆಟಗಾರರಿಗೆ ಮಣೆ

ನವದೆಹಲಿ: ಜುಲೈ 6ರಿಂದ ಮತ್ತು 14 ರ ವರೆಗೆ ನಡೆಯಲಿರುವ ಜಿಂಬಾಬ್ವೆ ವಿರುದ್ಧದ 5 ಪಂದ್ಯಗಳ T20 ಸರಣಿಗೆ ಭಾರತದ ತಂಡ ಪ್ರಕಟಿಸಲಾಗಿದ್ದು, ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ತಂಡದ ನಾಯಕನಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಲಾಗಿದೆ.
ಅಲ್ಲದೆ, ಯುವ ಆಟಗಾರರಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ ಮತ್ತು ನಿತೀಶ್ ರೆಡ್ಡಿ ಅವರು ಐಪಿಎಲ್‌ನಲ್ಲಿ ತೋರಿದ ಅದ್ಭುತ ಪ್ರದಶರ್ನಕ್ಕೆ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಮೂಲಕ ‘ಪುರಸ್ಕಾರ’ ನೀಡಲಾಗಿದೆ. ಅವರು ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಂಜಾಬ್‌ನ ಅಭಿಷೇಕ ಅವರು ಸನ್‌ರೈಸರ್ಸ್‌ ಹೈದರಾಬಾದ್ ಪರ ಕಳೆದ ಐಪಿಎಲ್‌ ಋತುವಿನಲ್ಲಿ 484 ರನ್ ಗಳಿಸಿದ್ದರು. ಅಸ್ಸಾಂನ ಪರಾಗ್ ಅವರು ರಾಜಸ್ಥಾನ ರಾಯಲ್ಸ್ ಪರ 573 ರನ್ ಕಲೆಹಾಕಿದ್ದರು.

ಭಾರತ ತಂಡಕ್ಕೆ ಮುಂದೆ ಬಿಡುವಿಲ್ಲದ ವೇಳಾಪಟ್ಟಿ ಇರುವ ಕಾರಣ, ಹಾಲಿ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿರುವ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ ಯಾದವ್, ರವೀಂದ್ರ ಜಡೇಜ ಮತ್ತು ಜಸ್‌ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ಐದು ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ಜುಲೈ 6ರಂದು ಮೊದಲ ಪಂದ್ಯ ನಡೆಯಲಿದೆ. ಜುಲೈ 7, 10, 13, 14ರಂದು ಉಳಿದ ಪಂದ್ಯಗಳು ನಡೆಯಲಿವೆ.
ತುಷಾರ್ ದೇಶಪಾಂಡೆ, ಹರ್ಷಿತ್ ರಾಣಾ, ಆವೇಶ್ ಖಾನ್ ಮತ್ತು ರಿಂಕು ಸಿಂಗ್ ಅವರೂ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತದ ತಂಡ : ಶುಭಮನ್ ಗಿಲ್‌ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ ಗಾಯಕವಾಡ, ಅಭಿಷೇಕ ಶರ್ಮಾ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್‌), ಧ್ರುವ್ ಜುರೇಲ್ (ವಿಕೆಟ್‌ ಕೀಪರ್‌), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ, ರವಿ ಬಿಷ್ಣೋಯಿ, ಆವೇಶ್‌ ಖಾನ್‌, ಖಲೀಲ್ ಅಹ್ಮದ್, ಮುಕೇಶಕುಮಾರ ಮತ್ತು ತುಷಾರ ದೇಶಪಾಂಡೆ

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement