ಪೋಶೆ ಕಾರು ಅಪಘಾತ ಪ್ರಕರಣ : ಅಪ್ರಾಪ್ತನನ್ನು ತಕ್ಷಣವೇ ಬಿಡುಗಡೆ ಮಾಡಲು ಬಾಂಬೆ ಹೈಕೋರ್ಟ್ ಆದೇಶ

ಮುಂಬೈ: ಪುಣೆಯ ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಆರೋಪಿಯಾಗಿರುವ 17 ವರ್ಷದ ಬಾಲಕನನ್ನು ನಿರೀಕ್ಷಣಾ ಮಂದಿರದಿಂದ ಕೂಡಲೇ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ (ಜೂನ್‌ 25) ಆದೇಶಿಸಿದೆ.
ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಹಾಗೂ ಮಂಜೂಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠವು, ಬಾಲ ನ್ಯಾಯ ಮಂಡಳಿ (ಜೆಜೆಬಿ) ಹೊರಡಿಸಿದ ಆದೇಶವನ್ನು ರದ್ದುಗೊಳಿಸಿದೆ.
ಬಾಲ ನ್ಯಾಯ ಮಂಡಳಿಯ ರಿಮ್ಯಾಂಡ್‌ ಆದೇಶವು ಕಾನೂನುಬಾಹಿರವಾಗಿದೆ. ಕಾನೂನು ಸಂಘರ್ಷದಲ್ಲಿರುವ ಬಾಲಕನ ವಯಸ್ಸನ್ನು ಪರಿಗಣಿಸಬೇಕಾಗಿದೆ. ಬಾಲಕನನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಾನೂನು ಸಂಘರ್ಷದಲ್ಲಿರುವ ಬಾಲಕನು ಅರ್ಜಿದಾರರ (ತಂದೆಯ ಚಿಕ್ಕಮ್ಮ) ಆರೈಕೆಯಲ್ಲಿರುತ್ತಾನೆ ಎಂದು ನ್ಯಾಯಪೀಠ ಹೇಳಿದೆ.

ಮೇ 19ರಂದು ಪುಣೆಯ ಕಲ್ಯಾಣಿನಗರದಲ್ಲಿ ಅತಿ ವೇಗದಲ್ಲಿದ್ದ ಪೋಶೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತಕ್ಕೀಡಾದ ಕಾರನ್ನು ಪಾನಮತ್ತ ಸ್ಥಿತಿಯಲ್ಲಿದ್ದ ಬಾಲಕ ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದರು.
ಅಪಘಾತ ಸಂಭವಿಸಿದ್ದ ಕೆಲವೇ ಗಂಟೆಗಳಲ್ಲಿ ಬಾಲಕನಿಗೆ ಜಾಮೀನು ನೀಡಿದ್ದರೂ ಆತನನ್ನು ಪುನಃ ಕಸ್ಟಡಿಗೆ ತೆಗೆದುಕೊಂಡು, ನಿರೀಕ್ಷಣಾ ಮಂದಿರದಲ್ಲಿ ಇರಿಸಲಾಗಿತ್ತು. ಪ್ರಕರಣ ಸಂಬಂಧ ಜೂನ್ 21ರಂದು ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್, ಇದು ಆತನನ್ನು ಬಂಧನಕ್ಕೆ ಒಳಪಡಿಸಿದಂತೆ ಆಗುವುದಿಲ್ಲವೇ ಎಂದು ಪ್ರಶ್ನಿಸಿತ್ತು.
‘ಈ ಅಪಘಾತ ದುರದೃಷ್ಟಕರ, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಬಾಲಕನೂ ಸೇರಿದಂತೆ ಹಲವರಿಗೆ ಮಾನಸಿಕ ಆಘಾತವಾಗಿದೆ’ ಎಂದು ಹೇಳಿತ್ತು. ಬಾಲ ಆರೋಪಿಗೆ ನೀಡಿರುವ ಜಾಮೀನನ್ನು ಕಾನೂನಿನ ಯಾವ ಅವಕಾಶದಡಿ ತಿದ್ದುಪಡಿ ಮಾಡಲಾಗಿದೆ ಹಾಗೂ ಆತನನ್ನು ಬಂಧನದಲ್ಲಿ ಇರಿಸಲಾಗಿದೆ’ ಎಂದು ಪೀಠವು ಪೊಲೀಸರನ್ನು ಪ್ರಶ್ನಿಸಿತ್ತು.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement