ಅಯೋಧ್ಯೆ : ಮಳೆಗೆ ಗುಂಡಿ ಬಿದ್ದ ರಾಮಪಥ ; 6 ಅಧಿಕಾರಿಗಳು ಅಮಾನತು

ಅಯೋಧ್ಯೆ: ಹೊಸದಾಗಿ ನಿರ್ಮಿಸಲಾದ ರಾಮಪಥದಲ್ಲಿ ಮೊದಲನೇ ಮಳೆಗೆ ಗುಂಡಿ ಬಿದ್ದ ಹಾಗೂ ಅಯೋಧ್ಯೆ ಜಲಾವೃತಗೊಂಡ ಪ್ರಕರಣಕ್ಕೆ ಸಂಬಂಧ ಪಾಲಿಕೆಯ ಆರು ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿದೆ.
ಜೂನ್ 23 ಹಾಗೂ 26ರಂದು ಸುರಿದ ಮಳೆಗೆ ರಾಮಪಥವು ಜಲಾವೃತಗೊಂಡಿತ್ತು. ಹಾಗೂ ನೀರು ಅಕ್ಕಪಕ್ಕದ ಮನೆಗಳಿಗೂ ನುಗ್ಗಿತ್ತು. ರಾಮ ಮಂದಿರಕ್ಕೆ ಸಂ‍ಪರ್ಕ ಕಲ್ಪಿಸುವ 14 ಕಿಮೀ ಉದ್ದದ ಈ ರಸ್ತೆಯಲ್ಲಿ 12ಕ್ಕೂ ಹೆಚ್ಚು ಕಡೆಗಳಲ್ಲಿ ಗುಂಡಿ ಬಿದ್ದಿತ್ತು.
ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಧ್ರುವ್ ಅಗರ್ವಾಲ್, ಸಹಾಯಕ ಎಂಜಿನಿಯರ್ ಅನುಜ್ ದೇಶ್ವಾಲ್, ಕಿರಿಯ ಎಂಜಿನಿಯರ್ ಪ್ರಭಾತ್ ಪಾಂಡೆ ಮತ್ತು ಉತ್ತರ ಪ್ರದೇಶ ಜಲ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಆನಂದಕುಮಾರ ದುಬೆ, ಸಹಾಯಕ ಎಂಜಿನಿಯರ್ ರಾಜೇಂದ್ರಕುಮಾರ ಯಾದವ್ ಹಾಗೂ ಕಿರಿಯ ಎಂಜಿನಿಯರ್‌ ಶಾಹಿದ್ ಮೊಹಮ್ಮದ್ ಾವರನ್ನು ಅಮಾನತುಗೊಳಿಸಲಾಗಿದೆ.

ವಿಶೇಷ ಕಾರ್ಯದರ್ಶಿ ವಿನೋದಕುಮಾರ ಅವರ ಆದೇಶದ ಮೇರೆಗೆ ಅಗರ್ವಾಲ್ ಮತ್ತು ದೇಶ್ವಾಲ್ ಅವರನ್ನು ಅಮಾನತುಗೊಳಿಸಲಾಗಿದೆ. ಪಾಂಡೆ ಅವರ ಅಮಾನತು ಆದೇಶವನ್ನು ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ವಿಕೆ ಶ್ರೀವಾಸ್ತವ ಆದೇಶದ ಮೇರೆಗೆ ಮಾಡಲಾಗಿದೆ.
ಅಲ್ಲದೆ, ಉತ್ತರ ಪ್ರದೇಶದ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಕೇಶಕುಮಾರ ಮಿಶ್ರಾ ಅವರು ಮೂವರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೇ ಘಟನೆ ಸಂಬಂಧ ಅಹಮದಾಬಾದ್ ಮೂಲದ ಗುತ್ತಿಗೆದಾರ ಭುವನ್ ಇನ್‌ಫ್ರಾಕಾಮ್ ಪ್ರೈವೇಟ್ ಲಿಮಿಟೆಡ್‌ಗೆ ರಾಜ್ಯ ಸರ್ಕಾರ ನೋಟಿಸ್ ಜಾರಿ ಮಾಡಿದೆ.
ರಾಮಪಥ ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಅದರ ಮೇಲಿನ ಪದರವು ಹಾನಿಗೊಳಗಾಗಿದೆ. ಉತ್ತರ ಪ್ರದೇಶ ಸರ್ಕಾರ ಆದ್ಯತೆಯಡಿಯಲ್ಲಿ ಮಾಡಿದ ಕೆಲಸಗಳಲ್ಲಿ ಲೋಪ ಉಂಟಾಗಿದೆ. ಇದರಿಂದ ರಾಜ್ಯ ಸರ್ಕಾರದ ‍ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಎಂದು ಲೋಕೋಪಯೋಗಿ ಇಲಾಖೆಯ ಆದೇಶದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ಕಳೆದ ಶನಿವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಅಯೋಧ್ಯ ರಾಮ ಮಂದಿರದಲ್ಲಿಯೂ ಸೋರಿಕೆ ಉಂಟಾಗಿತ್ತು ಎಂದು ರಾಮಮಂದಿರದ ಮುಖ್ಯ ಅರ್ಚಕರು ಹೇಳಿದ್ದಾರೆ. ಸೋಮವಾರ ದೇವಾಲಯದ ಮೇಲ್ಛಾವಣಿಯಿಂದ ಸೋರುತ್ತಿರುವ ಮಳೆನೀರು ಸಂಕೀರ್ಣದೊಳಗೆ ಸಂಗ್ರಹವಾಗುತ್ತಿದೆ. ದೇವಸ್ಥಾನದ ಆವರಣದಲ್ಲಿರುವ ಮಳೆ ನೀರನ್ನು ಹೊರ ಹಾಕಲು ಯಾವುದೇ ವ್ಯವಸ್ಥೆ ಇಲ್ಲ ಎಂದು ಅವರು ಆರೋಪಿಸಿದ್ದರು.
ಆದರೆ ಈ ಆರೋಪ ನಿರಾಕರಿಸಿರುವ ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್‌ ಅವರು, ಛಾವಣಿಯಿಂದ “ಒಂದು ಹನಿ ನೀರು ಗರ್ಭಗುಡಿಗೆ ಪ್ರವೇಶಿಸಿಲ್ಲ ಎಂದು ಹೇಳಿದ್ದಾರೆ. ದೇವಸ್ಥಾನದಲ್ಲಿ ಮಳೆ ನೀರು ಹರಿದು ಹೋಗಲು ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ ಎಂದು ಕಂಡುಬಂದರೂ, ದೇವಾಲಯದ ಮೊದಲ ಮಹಡಿಯಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯಿಂದಾಗಿ ಕೊಳವೆ ಪೈಪ್‌ನಿಂದ ನೀರು ಬರುತ್ತಿದೆ ಎಂದು ಅವರು ಹೇಳಿದ್ದಾರೆ. ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ರಾಮಮಂದಿರದಲ್ಲಿ ನೀರು ಸೋರಿಕೆಯಾಗುವುದನ್ನು ನಿರೀಕ್ಷಿಸಲಾಗಿತ್ತು ಏಕೆಂದರೆ ಗುರು ಮಂಟಪವು ಆಕಾಶಕ್ಕೆ ತೆರೆದುಕೊಂಡಿದೆ, ಆದರೆ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದೆ. ಹೀಗಾಗಿ ಮಳೆ ತಂದ ತಕ್ಷಣ ನೀರು ಬರುತ್ತದೆ. ಆದರೆ ನೀರು ‘ಗರ್ಭ ಗೃಹ’ ಕ್ಕೆ ಬರಲಿಲ್ಲ ಎಂದು ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ರಾಮನ ಜನ್ಮಸ್ಥಳವೆಂದು ಪರಿಗಣಿಸಲ್ಪಟ್ಟಿರುವ ಅಯೋಧ್ಯೆಯ ರಾಮ ಮಂದಿರವು ಹಿಂದೂ ಧರ್ಮದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement