ನವದೆಹಲಿ: T20 ವಿಶ್ವಕಪ್ 2024ರ ನಂತರ ಭಾರತದ ತಂಡದ ಮುಖ್ಯ ತರಬೇತುದಾರರಾಗಿದ್ದ ರಾಹುಲ್ ದ್ರಾವಿಡ್ ಅವರ ಅವಧಿಯು ಮುಕ್ತಾಯವಾಗಿದ್ದು, ಮುಂದಿನ ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗಾಗಿ ಹುಡುಕಾಟ ನಡೆಯುತ್ತಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ನಂತರ ದ್ರಾವಿಡ್ ಅವರು ತಮ್ಮ ಮುಖ್ಯ ಕೋಚ್ ಹುದ್ದೆಗೆ ಅದ್ಭುತ ವಿದಾಯ ಹೇಳಿದರು. ಸದ್ಯ ಮುಖ್ಯ ಕೋಚ್ ಹುದ್ದೆಗೆ ಗೌತಮ ಗಂಭೀರ್ ಹಾಗೂ ಡಬ್ಲ್ಯುವಿ ರಾಮನ್ ಮುಂಚೂಣಿಯಲ್ಲಿದ್ದಾರೆ. ಆದರೆ ಅಭಿಮಾನಿಗಳು ಮತ್ತು ತಜ್ಞರು ದ್ರಾವಿಡ್ ಅವರು ಮುಖ್ಯ ತರಬೇತದಾರರಾಗಿ ಭಾರತದ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರೂ ಈ ಹುದ್ದೆಯಲ್ಲಿ ಮುಂದುವರಿಯಲು ಏಕೆ ಮರು ಅರ್ಜಿ ಸಲ್ಲಿಸಲಿಲ್ಲ ಎಂದು ಆಶ್ಚರ್ಯ ಪಟ್ಟಿದ್ದೂ ಹೌದು. ಆದರೆ ಈಗ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು ರಾಹುಲ್ ದ್ರಾವಿಡ್ ಅವರು ಮುಖ್ಯ ತರಬೇತುದಾರ ಹುದ್ದೆಯಲ್ಲಿ ಮುಂದುವರಿಯದೇ ಇರುವ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ ಮತ್ತು ಈ ವಿಷಯದಲ್ಲಿ ಕ್ರಿಕೆಟ್ ಮಂಡಳಿಯು ಅವರನ್ನು ಒತ್ತಾಯಿಸಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಕುಟುಂಬದ ಬದ್ಧತೆಗಳ ಕಾರಣದಿಂದಾಗಿ ಅವರು ಮುಖ್ಯ ಕೋಚ್ ಹುದ್ದೆಯನ್ನು ತ್ಯಜಿಸಲು ಬಯಸುತ್ತಾರೆ ಮತ್ತು ನಾವು ಅವರ ನಿರ್ಧಾರವನ್ನು ಗೌರವಿಸುವುದನ್ನು ಬಯಸಿರುವುದಾಗಿ ಅವರು ನನಗೆ ಹೇಳಿದರು.ಹೀಗಾಗಿ ನಾವು ಅವರು ತಮ್ಮ ಹುದ್ದೆಯ ಅವಧಿಯನ್ನು ವಿಸ್ತರಿಸುವಂತೆ ಒತ್ತಾಯಿಸಲು ಬಯಸಲಿಲ್ಲ ಎಂದು ಜಯ ಶಾ ಬಾರ್ಬಡೋಸ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದ್ರಾವಿಡ್ ಅವರು ಭಾರತೀಯ ಕ್ರಿಕೆಟ್ಗೆ ನೀಡಿದ ಕೊಡುಗೆಗಾಗಿ ಅವರನ್ನು ಶ್ಲಾಘಿಸಿದ ಜಯ ಶಾ, ಮೊದಲು ಕ್ರಿಕೆಟಿಗನಾಗಿ ಮತ್ತು ನಂತರ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾಗಿ ಅವರು ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ರಾಹುಲ್ ದ್ರಾವಿಡ್ ಅವರು ಕಳೆದ ಐದೂವರೆ ವರ್ಷಗಳಿಂದ ಭಾರತೀಯ ಕ್ರಿಕೆಟ್ಗೆ ಸೇವೆ ಸಲ್ಲಿಸಿದ್ದಾರೆ. ಅವರು ಮೂರು ವರ್ಷಗಳ ಕಾಲ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದರು ಮತ್ತು ನಂತರ ಕಳೆದ ಎರಡೂವರೆ ವರ್ಷಗಳಿಂದ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ ಎಂದು ಶಾ ಹೇಳಿದರು.
ಈ ಟಿ20 ವಿಶ್ವಕಪ್ ಪ್ರಶಸ್ತಿ ಜಯದಲ್ಲಿ ರೋಹಿತ್ ಶರ್ಮಾ ಪಾತ್ರದಷ್ಟೇ ರಾಹುಲ್ ದ್ರಾವಿಡ್ ಪಾತ್ರವೂ ಮಹತ್ವದ್ದಾಗಿದೆ. ಅವರು 2023 ರ ಏಕದಿನದ ವಿಶ್ವಕಪ್ ಪಂದ್ಯಾವಳಿಯ ಫೈನಲ್ಗೆ ತಂಡವನ್ನು ಕೊಂಡೊಯ್ದ ವ್ಯಕ್ತಿ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ