ಗೊಲ್ಲಪ್ರೋಲು : ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ ಕಲ್ಯಾಣ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ತಮ್ಮ ಸಂಬಳ ಮತ್ತು ಕಚೇರಿಗೆ ನೀಡುವ ಹೊಸ ಪೀಠೋಪಕರಣಗಳು ಸೇರಿದಂತೆ ಯಾವುದೇ ವಿಶೇಷ ಭತ್ಯೆಗಳನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಧಿಕಾರಿಗಳು ತಮ್ಮ ಕಚೇರಿ ನವೀಕರಣ ಕುರಿತು ಪವನ ಕಲ್ಯಾಣ ಅವರೊಂದಿಗೆ ಚರ್ಚಿಸಿದಾಗ ಅವರು ವಿಶೇಷ ಸೌಲಭ್ಯಗಳನ್ನು ತಿರಸ್ಕರಿಸಿದ್ದಾರೆ. ಅಲ್ಲದೆ, ತಮ್ಮ ಹುದ್ದೆಗೆ ನೀಡುವ ಸಂಬಳವನ್ನೂ ಅವರು ನಿರಾಕರಿಸಿದ್ದಾರೆ.
ಮೂರು ದಿನಗಳ ಕಾಲ ಸದನಕ್ಕೆ ಹಾಜರಾಗಿದ್ದಕ್ಕೆ ₹ 35,000 ಸಂಬಳಕ್ಕೆ ಸಂಬಂಧಿಸಿದ ದಾಖಲೆಗಳ ಮೇಲೆ ಸಹಿ ಪಡೆಯಲು ಸೆಕ್ರೆಟರಿಯೇಟ್ನ ಅಧಿಕಾರಿಗಳು ಬಂದಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ಆದರೆ, ಸಂಬಳ ಪಡೆಯುವುದಿಲ್ಲ ಎಂದು ಅವರು ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ಪವನ ಕಲ್ಯಾಣ ಅವರು ತಮ್ಮ ನೇತೃತ್ವದ ಪಂಚಾಯತ್ ರಾಜ್ ಇಲಾಖೆಗೆ ಸಾಕಷ್ಟು ಹಣದ ಕೊರತೆಯಿದೆ ಎಂದು ಹೇಳಿಕೊಂಡಿದ್ದಾರೆ. ಇದು ತಮ್ಮ ಸಂಬಳ ಹಾಗೂ ಸವಲತ್ತುಗಳನ್ನು ನಿರಾಕರಿಸಲು ಪ್ರೇರೇಪಿಸಿತು ಎಂದು ಹೇಳಿದ್ದಾರೆ. ತಮ್ಮ ಕಚೇರಿಗೆ ಅಗತ್ಯವಿದ್ದರೆ ಪೀಠೋಪಕರಣಗಳನ್ನು ಸ್ವಂತ ಖರ್ಚಿನಲ್ಲಿ ಭರಿಸುವುದಾಗಿ ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ