ರಾಂಚಿ: ಐದು ತಿಂಗಳ ನಂತರ ಮತ್ತೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ (JMM) ಕಾರ್ಯಕಾರಿ ಅಧ್ಯಕ್ಷ ಹೇಮಂತ ಸೊರೇನ್ ಅವರು ಗುರುವಾರ ಸಂಜೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಪ್ರಮಾಣ ವಚನ ಬೋಧಿಸಿದರು.
ಬಹುಕೋಟಿ ಮೌಲ್ಯದ ಭೂ ಹಗರಣ ಆರೋಪ ಹೊತ್ತಿದ್ದ ಕಾರಣ ಜನವರಿಯಲ್ಲಿ ಜಾರಿ ನಿರ್ದೇಶನಾಲಯ ಬಂಧಿಸುವ ಕೆಲವೇ ನಿಮಿಷಗಳ ಮೊದಲು ಹೇಮಂತ ಸೊರೇನ್ ರಾಜೀನಾಮೆ ನೀಡಿದ್ದರು. ಆಪಾದಿತ ಹಗರಣದಲ್ಲಿ ‘ನೇರ ಪಾಲ್ಗೊಳ್ಳುವಿಕೆ’ ಇಲ್ಲ ಎಂದು ಹೈಕೋರ್ಟ್ ಜಾಮೀನು ನೀಡಿದ ಬಳಿಕ ಮತ್ತೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸಮಾರಂಭದಲ್ಲಿ ಹೇಮಂತ್ ಅವರ ತಂದೆ, ಜೆಎಂಎಂ ಹಿರಿಯ ನಾಯಕ ಎರಡು ಬಾರಿಯ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್, ನಿಕಟಪೂರ್ವ ಮುಖ್ಯಮಂತ್ರಿ ಚಂಪೈ ಸೊರೇನ್ ಸೇರಿ ಪ್ರಮುಖರು ಹಾಜರಿದ್ದರು.
ಹಿರಿಯ ಜೆಎಂಎಂ ನಾಯಕ ಚಂಪೈ ಸೊರೇನ್ ಅವರು ಹೇಮಂತ್ ಸೊರೆನ್ ಬದಲಿಗೆ ಜಾರ್ಖಂಡ ಮುಖ್ಯಮಂತ್ರಿಯಾಗಿ ಆಗಿ ನೇಮಕವಾಗಿದ್ದರು. ಹುದ್ದೆಗೆ ರಾಜೀನಾಮೆ ನೀಡಿ ಮತ್ತೆ ಹೇಮಂತ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಜಾರ್ಖಂಡದಲ್ಲಿ ಜೆಎಂಎಂ, ಕಾಂಗ್ರೆಸ್, ಆರ್ ಜೆಡಿ ಮತ್ತು ಎಡ ಪಕ್ಷಗಳ ಮೈತ್ರಿಕೂಟದ ಸರ್ಕಾರವಿದೆ.
ನಿಮ್ಮ ಕಾಮೆಂಟ್ ಬರೆಯಿರಿ