ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್ ಅಗ್ನಿಗಾಹುತಿಯಾದ ಘಟನೆ ಇಂದು, ಮಂಗಳವಾರ ಬೆಳಿಗ್ಗೆ ಎಂ.ಜಿ.ರಸ್ತೆಯ ಅನಿಲ ಕುಂಬ್ಳೆ ಸರ್ಕಲ್ ಸಮೀಪ ನಡೆದಿದೆ. ಕೂಡಲೇ ಎಚ್ಚೆತ್ತ ಬಸ್ ಚಾಲಕ ಹಾಗೂ ನಿರ್ವಾಹಕ ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ. ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಇಡೀ ಬಸ್ ಅನ್ನು ಆವರಿಸಿಕೊಂಡಿತು.
ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಎಚ್ಚೆತ್ತ ಚಾಲಕ ಕಾರ್ಯಾಚರಣೆಗೆ ಧಾವಿಸಿ ತಕ್ಷಣವೇ ಬಸ್ ಅನ್ನು ಖಾಲಿ ಮಾಡಿದರು, ಘಟನೆಯಲ್ಲಿ ಯಾರಿಗೂ ಗಾಯವಾಗಲಿಲ್ಲ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೂಲಗಳು ತಿಳಿಸಿವೆ.
ಬಸ್ ಕೋರಮಂಗಲ ಡಿಪೋಗೆ ಸೇರಿದೆ. ಎಂ.ಜಿ.ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ಹತೋಟಿಗೆ ತಂದರು. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಎಂಜಿ ರಸ್ತೆಯಲ್ಲಿ ಚಾಲಕ ಇಗ್ನಿಷನ್ ಆನ್ ಮಾಡಿದಾಗ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ.
ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಬಸ್ನಲ್ಲಿ 30 ಪ್ರಯಾಣಿಕರಿದ್ದರು, ಆದರೆ ಎಚ್ಚೆತ್ತ ಚಾಲಕ ಅವರನ್ನು ಸಕಾಲದಲ್ಲಿ ಸ್ಥಳಾಂತರಿಸಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಬಿಎಂಟಿಸಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯ ಹಿಂದಿನ ಕಾರಣವನ್ನು ಪರಿಶೀಲಿಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ