ಬೆಳಗಾವಿ : ವೈದ್ಯಕೀಯ ಸೀಟ್‌ ವಂಚನೆ ಜಾಲ ಪತ್ತೆ , ಪ್ರಮುಖ ಆರೋಪಿ ಬಂಧಿಸಿದ ಪೊಲೀಸರು

 ಬೆಳಗಾವಿ: ಸರ್ಕಾರಿ ಕಾಲೇಜುಗಳಲ್ಲಿ ವೈದ್ಯಕೀಯ ಸೀಟ್‌ ಕೊಡಿಸುವುದಾಗಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಜಾಲವೊಂದನ್ನು ಬೆಳಗಾವಿ ಪೊಲೀಸರು ಪತ್ತೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಕೋಚಿಂಗ್ ಸೆಂಟರ್ ಆರಂಭಿಸಿ ಯಾರು ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುತ್ತಾರೋ ಅಂಥವರನ್ನೇ ಗುರಿಯಾಗಿಸಿ ಅವರಿಗೆ ವೈದ್ಯಕೀಯ ಸೀಟ್‌ ಕೊಡಿಸುತ್ತೇನೆ ಎಂದು ಭರವಸೆ ನೀಡಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಬೆಳಗಾವಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜಾಲದ ಪ್ರಮುಖ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಿದ್ದು, ಅಕ್ರಮಕ್ಕೆ ಬಳಸಿದ ಸಲಕರಣೆ ಹಾಗೂ ₹12 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ.
ಮೂಲತಃ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಗಚ್ಚಿಭೌಳಿಯ ಅರಗೊಂಡ ಅರವಿಂದ ಅಲಿಯಾಸ್‌ ಅರುಣಕುಮಾರ ಅರಗೊಂಡ ಪ್ರಕಾಶಂ (47) ಬಂಧಿತ ಆರೋಪಿ. 1.30 ಕೋಟಿ ರೂ.ಗಳನ್ನು ಈತ ವಿವಿಧ ಆಕಾಂಕ್ಷಿಗಳಿಂದ ಪಡೆದು ವಂಚಿಸಿದ್ದ ಎಂಬುದು ಪೋಲಿಸ್ ತನಿಖೆ ವೇಳೆ ಬಯಲಾಗಿದೆ. ನೀಟ್ ಪರೀಕ್ಷೆಯಲ್ಲಿ ಯಾವ ಅಭ್ಯರ್ಥಿಗಳು ಕಡಿಮೆ ಅಂಕ ಪಡೆದುಕೊಂಡಿರುತ್ತಾರೋ ಅವರನ್ನು ಸಂಪರ್ಕಿಸುತ್ತಿದ್ದ. ನನಗೆ ಬಹಳಷ್ಟು ಪ್ರಭಾವಿಗಳ ಪರಿಚಯವಿದೆ, ನಿಮಗೆ ಸೀಟ್ ಕೊಡಿಸುವುದಾಗಿ ನಂಬಿಸಿ ಹತ್ತಕ್ಕೂ ಹೆಚ್ಚು ಜನರಿಗೆ ಮೋಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

ಬೆಳಗಾವಿಯಲ್ಲಿ ಡಿಸಿಪಿ ರೋಹನ್ ಜಗದೀಶ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಸೋಮವಾರ ಮಾಹಿತಿ ನೀಡಿದ್ದಾರೆ.
ಉನ್ನತ ಶಿಕ್ಷಣ ಪಡೆದುಕೊಂಡಿದ್ದ ಈತ ಎಂಬಿಎ ನಲ್ಲಿ ಡಿಸ್ಟಿಂಗ್ಶನ್ ಪಡೆದಿದ್ದ. ಈ ಹಿಂದೆ ಹೈದರಾಬಾದಿನಲ್ಲಿ 2016ರಲ್ಲಿ ಒಮ್ಮೆ ಬಂಧಿತನಾಗಿದ್ದ. ಆದರೆ, ತನ್ನ ಚಾಳಿ ಬಿಡದ ಈತ ಬೆಳಗಾವಿ, ಭೋಪಾಲ್, ಬೆಂಗಳೂರು, ತೆಲಂಗಾಣ ಮುಂತಾದ ಪ್ರದೇಶಗಳಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುತ್ತಿದ್ದವರನ್ನೇ ಗುರಿಯಾಗಿಸಿಕೊಂಡು ಅವರಿಂದ ಹಣ ಕೀಳುವ ದಂಧೆ ನಡೆಸುತ್ತಿದ್ದ.
2023ರಲ್ಲಿ ಬೆಳಗಾವಿಯಲ್ಲಿ ನೀಟ್‌ ಮಾರ್ಗದರ್ಶನ ಕೇಂದ್ರ ತೆರೆದಿದ್ದ ಆರೋಪಿ, ಎಂಬಿಬಿಎಸ್‌ ಸೀಟ್‌ ಕೊಡಿಸುವುದಾಗಿ ಸುಮಾರು 10 ವಿದ್ಯಾರ್ಥಿಗಳಿಂದ ಒಟ್ಟು ₹ 1.30 ಕೋಟಿ ಹಣ ಪಡೆದು ಪರಾರಿಯಾಗಿದ್ದ. ‘ನೀಟ್‌’ ತರಬೇತಿ ನೀಡುವುದಾಗಿ ನಂಬಿಸಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ ಹಾಗೂ ಕೆಲವು ಸಿಬ್ಬಂದಿಯನ್ನು ಕೆಲಸಕ್ಕೆ ಇಟ್ಟುಕೊಂಡು ಅವ್ಯವಹಾರ ನಡೆಸುತ್ತಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ.

2023 ರಲ್ಲಿ ಬೆಳಗಾವಿ ನಗರದಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಬೆಳಗಾವಿ ಪೊಲೀಸರು ಆರು ತಿಂಗಳಿಂದ ಅರೋಪಿಯ ಬಂಧನಕ್ಕೆ ಕಾರ್ಯಾಚರಣೆ ನಡೆಸಿದ್ದರು.ಬೆಳಗಾವಿಯಲ್ಲಿ ಈತ ಕೋಚಿಂಗ್ ಆರಂಭಿಸುವಾಗ ನೀಡಿದ್ದ ಬ್ಯಾಂಕ್ ಅಕೌಂಟ್, ಆಧಾರ್ ಎಲ್ಲವೂ ನಕಲಿಯಾಗಿದೆ. ಬೆಳಗಾವಿಯಲ್ಲಿ ದೂರು ದಾಖಲಾದ ನಂತರ ಪೊಲೀಸರು ಈತನ ಪತ್ತೆಗೆ ಭಾರೀ ಪ್ರಯತ್ನ ನಡೆಸಿದ್ದಾರೆ. ಈತ ಪದೇಪದೇ ತನ್ನ ಮೊಬೈಲ್ ಸಂಖ್ಯೆ ಬದಲಾಯಿಸುತ್ತಿದ್ದ. ಕೊನೆಗೂ ಬೆಳಗಾವಿ ಪೊಲೀಸರು ಈತನನ್ನು ಪತ್ತೆಹಚ್ಚಲು ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈತನ ಬಳಿಯಿದ್ದ 15 ಕಂಪ್ಯೂಟರ್ ಲ್ಯಾಪ್ಟಾಪ್‌, ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆತ ನೀಟ್ ಪರೀಕ್ಷೆ ಬರೆದ ಅಭ್ಯರ್ಥಿಗಳಿಂದ ವಸೂಲಿ ಮಾಡಿದ್ದ ಹಣವನ್ನು ಮೋಸ ಹೋದ ಅಭ್ಯರ್ಥಿಗಳಿಗೆ ಪರಳಿ ಕೊಡಿಸಲು ಕೋರ್ಟ್ ಮೂಲಕ ಪ್ರಯತ್ನ ನಡೆಸಲಾಗುತ್ತದೆ ಎಂದು ಡಿಸಿಪಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಭಾರಿ ಮಳೆ ; ಉತ್ತರ ಕನ್ನಡ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ಇಂದು (ಜೂ.25) ರಜೆ ಘೋಷಣೆ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement