ಖಾನಾಪುರ: ದೇವರಾಯಿ ಗ್ರಾಮದ ಬಳಿ ದನ ಮೇಯಿಸಲು ಹೋದ ವ್ಯಕ್ತಿ ಮೇಲೆ ಕರಡಿ ದಾಳಿ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕು ದೇವರಾಯಿ ಗ್ರಾಮದ ರೈತ ನಾರಾಯಣ ಚೌರಿ (65) ಎಂಬವರ ಮೇಲೆ ಸೋಮವಾರ ಸಂಜೆ ಕರಡಿ ದಾಳಿ ನಡೆಸಿದೆ.
ಅವರು ತಮ್ಮ ದನಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ದಾಳಿ ನಡೆಸಿದ ಕರಡಿ ಅವರ ಬೆನ್ನು ಮತ್ತು ಮೈಮೇಲೆ ಪರಚಿದೆ. ಅವರ ಕೂಗಿಕೊಂಡಿದ್ದು, ಅವರ ಕೂಗು ಕೇಳಿದ ಗ್ರಾಮಸ್ಥರು ರಕ್ಷಣೆಗೆ ಧಾವಿಸಿದ್ದಾರೆ. ಗ್ರಾಮಸ್ಥರು ಬರುವುದನ್ನು ಗಮನಿಸಿದ ಕರಡಿ ಅರಣ್ಯದೊಳಕ್ಕೆ ಓಡಿ ಹೋಗಿ ಮರೆಯಾಗಿದೆ.
ಗಾಯಗೊಂಡ ನಾರಾಯಣ ಅವರನ್ನು ಗ್ರಾಮಸ್ಥರು ವಾಹನದಲ್ಲಿ ನಂದಗಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ. ಎಸಿಎಫ್ ಸುನಿತಾ ನಿಂಬರಗಿ, ಆರ್ ಎಫ್ ಒ ನಾಗರಾಜ ಬಾಳೆಹೊಸೂರು ನಂದಗಡ ಆಸ್ಪತ್ರೆಗೆ ತೆರಳಿ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದನ್ನು ಮನಗಂಡು ನಾರಾಯಣ ಅವರನ್ನು ಬೆಳಗಾವಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

3.5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement