ಮೂಡುಬಿದಿರೆ : ವಕೀಲಿ ವೃತ್ತಿ ಮಾಡುವವರು ಹೆಚ್ಚಿನ ಜ್ಞಾನ ಬೆಳೆಸಿಕೊಳ್ಳಬೇಕು. ಹೀಗಾಗಿ ಓದುವ ಹವ್ಯಾಸ ನಿರಂತರವಾಗಿ ಇರಬೇಕು. ಹೊಸ ಹೊಸ ತಂತ್ರಜ್ಞಾನಗಳನ್ನೂ ಅರಿತುಕೊಳ್ಳಬೇಕು ಎಂದು ಆಂಧ್ರಪ್ರದೇಶದ ರಾಜ್ಯಪಾಲ ಹಾಗೂ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬೆಳುವಾಯಿ ಎಸ್. ಅಬ್ದುಲ್ ನಜೀರ್ ಹೇಳಿದ್ದಾರೆ.
ಶನಿವಾರ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಶಿರ್ತಾಡಿಯ ಭುವನ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ಕಾನೂನಿನ ಪಾಲನೆ ಎನ್ನುವುದು ನಮ್ಮ ಮನೆಯಿಂದಲೇ ಆರಂಭವಾಗಬೇಕು. ದೇಶದಲ್ಲಿ 5 ಕೋಟಿಗೂ ಹೆಚ್ಚು ವ್ಯಾಜ್ಯಗಳು ಬಾಕಿ ಉಳಿದಿವೆ. ಉತ್ತರ ಭಾರತದಲ್ಲಿ ಕ್ರಿಮಿನಲ್ ವ್ಯಾಜ್ಯಗಳು ಹೆಚ್ಚಾಗಿದ್ದು ದಕ್ಷಿಣ ಭಾರತದಲ್ಲಿ ಸಿವಿಲ್ ವ್ಯಾಜ್ಯಗಳು ಅಧಿಕವಾಗಿವೆ. 25 ಕೋಟಿ ಜನರ ಮೇಲೆ ಇವು ಪರಿಣಾಮ ಬೀರುತ್ತಿದ್ದು ಇದು ನ್ಯಾಯದಾನದ ವಿಳಂಬವನ್ನು ಸೂಚಿಸುತ್ತದೆ. ಸಿವಿಲ್ ವ್ಯಾಜ್ಯಗಳ ಬಗ್ಗೆ ತುಂಬಾ ಗಂಭೀರ ಚಿಂತನೆ ಅಗತ್ಯವಿದೆ. ಕಾನೂನಿನ ಮೂಲಕ ನ್ಯಾಯಕೋರಿ ಬರುವ ಸಂತ್ರಸ್ತರಿಗೆ ಸಮರ್ಪಕ ನ್ಯಾಯ ಸಿಗುವಂತಾಗಬೇಕು ಎಂದು ಅವರು ಸಲಹೆ ನೀಡಿದರು. ಕಾನೂನು ದೇಶ ಕಟ್ಟುವಲ್ಲಿ ಉತ್ತಮ ವ್ಯವಸ್ಥೆಯಾಗಿದೆ. ಪ್ರತಿಯೊಬ್ಬರೂ ಕಾನೂನು ತಿಳಿವಳಿಕೆಯನ್ನು ಹೊಂದುವಂತಾಗಬೇಕು ಎಂದು ಅವರು ಆಶಯ ವ್ಯಕ್ತಪಡಿಸಿದರು.
ದೇಶದಲ್ಲಿರುವ ಗಂಡಿರಲಿ ಹೆಣ್ಣಿರಲಿ ಎಲ್ಲರಿಗೂ ಸರಿ ಸಮಾನವಾದ ಅವಕಾಶ ಕಾನೂನಿನಡಿಯಲ್ಲಿ ಇದೆ. ಅವಿಭಕ್ತ ಕುಟುಂಬ ಪದ್ಧತಿಯನ್ನು ಅಳವಡಿಸಿಕೊಂಡು ಬೆಳೆದಲ್ಲಿ ಭಾರತೀಯ ಸಂಸ್ಕೃತಿ ಉಳಿದು ಬೆಳೆಯಲು ಹಾಗೂ ಕಾನೂನಾತ್ಮಕವಾಗಿ ಸಮರ್ಪಕವಾಗಿ ಜಾರಿಗೊಳ್ಳಲು ಸಾಧ್ಯವಿದೆ. ಪ್ರಪಂಚದ ಎಲ್ಲಾ ನೇತಾರರು ಕಾನೂನಿನ ಹಿನ್ನೆಲೆಯಿಂದಲೇ ಬಂದವರು. ಹೀಗಾಗಿ ವಿದ್ಯೆ ರಹಿತವಾದಂತಹ ಯಾವುದೂ ಈ ಪ್ರಪಂಚದಲ್ಲಿ ಅಭಿವೃದ್ಧಿಗೆ ದಾರಿ ಮಾಡುವುದಿಲ್ಲ. ಇಂದಿನ ಕೃತಕ ಬುದ್ಧಿಮತ್ತೆ, ಕಂಪ್ಯೂಟರ್ಗಳು, ಉಪಕರಣಗಳು, ಎಲ್ಲವೂ ಕಾನೂನಿಗೆ ಪೂರಕವಾದ ವಿಷಯಗಳನ್ನು, ಮಾಹಿತಿಗಳನ್ನು ನೀಡಿ ಉಪಕರಿಸುತ್ತಿವೆ. ಹೀಗಾಗಿ ನ್ಯಾಯಾಧೀಶರು ಸಮರ್ಪಕವಾಗಿ ನ್ಯಾಯವನ್ನು ನೀಡಲು ಅವೆಲ್ಲವೂ ಪೂರಕವಾಗಿವೆ. ನ್ಯಾಯವಾದಿ ಎಲ್ಲವನ್ನೂ ತಿಳಿದು ಅರ್ಥೈಸಿಕೊಂಡು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಹರಡುವುದಕ್ಕೆ ಸದಾ ಪ್ರಯತ್ನಿಸುತ್ತಿರಬೇಕು. ಅದಕ್ಕಾಗಿ ಹೆಚ್ಚಿನ ತಿಳಿವಳಿಕೆ ಪಡೆಯಲು ಸದಾ ಜ್ಞಾನ ಪಿಪಾಸು ಆಗಿರಬೇಕು ಎಂದು ಅವರು ಹೇಳಿದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮಾತನಾಡಿ, ಜ್ಞಾನದಿಂದ ಜೀವನ ದರ್ಶನ ಸಾಧ್ಯವಿದೆ. ಜ್ಞಾನಕ್ಕೆ ಸಮನಾದ ಶಿಕ್ಷಣ ಇನ್ನೊಂದಿಲ್ಲ ಎನ್ನುತ್ತಾನೆ ಶ್ರೀ ಕೃಷ್ಣ ಪರಮಾತ್ಮ. ಜ್ಞಾನ ಬೆಳಕನ್ನು ಅರಸುವ ನಾಡು ಭಾರತ. ನಮ್ಮ ದೇಶದಲ್ಲಿ ಪ್ರಮುಖವಾಗಿ 24 ವಿಶ್ವವಿದ್ಯಾಲಯಗಳು ಪುರಾತನ ಕಾಲದಲ್ಲೇ ಇದ್ದಿದ್ದವು. ಸಂವಿಧಾನ ರಚನೆಯಲ್ಲಿ ನಮ್ಮ ಮಣ್ಣಿನ ಗುಣ ಅಡಕವಾಗಿದೆ. ಹೀಗಾಗಿ ನಮ್ಮ ಸಂವಿಧಾನ ಅತ್ಯಂತ ಸದೃಢವಾಗಿದೆ. ಈ ಮೂಲಕ ದೇಶವನ್ನು ಬಲಿಷ್ಠವಾಗಿ ಕಟ್ಟಲು ಅನುಕೂಲವಾಗಿದೆ ಎಂದರು.
ಜ್ಞಾನ ಸಜೀವ ನದಿಯಾಗಿ ಈ ದೇಶದಲ್ಲಿ ಹರಿಯುತ್ತಿರುವುದರಿಂದ ಸಂವಿಧಾನದ ರಚನೆ ಸದೃಢವಾಗಿ ಜ್ಞಾನವೆತ್ತ ರೀತಿಯಲ್ಲಿ ಜ್ಞಾನಮಾರ್ಗದಲ್ಲಿ ಎಲ್ಲವನ್ನೂ ಈ ದೇಶದಲ್ಲಿ ನಡೆಸುತ್ತಿದೆ. ಕಾನೂನು ಮನೆಯಿಂದಲೇ ಪ್ರಾರಂಭವಾಗಬೇಕು. ಹಾಗಾದರೆ ಮಾತ್ರ ಎಲ್ಲವೂ ಸಮರ್ಪಕವಾಗಿ ನಡೆಯುವುದಕ್ಕೆ ಸಾಧ್ಯವಿದೆ. ಶಿಕ್ಷಣವನ್ನು ಅರಸಿಕೊಂಡು ಹೋಗು. ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿ ಅಭಿವೃದ್ಧಿ ಮಾಡಲು ಪ್ರಯತ್ನಿಸು ಎಂದು ಸಾಕ್ರಟೀಸ್ ಹೇಳಿದಂತೆ ಪ್ರತಿಯೊಂದು ಹಳ್ಳಿಗಳಲ್ಲಿ ಕಾನೂನು ಶಿಕ್ಷಣ ಅಭಿವೃದ್ಧಿಯಾಗಿ ಪ್ರತಿಯೊಬ್ಬರು ಕಾನೂನು ಅರಿವು ಹೊಂದುವಂತಾಗಬೇಕು. ಕಾನೂನಿನ ತಿಳಿವಳಿಕೆ ಪಡೆದಾಗ ಜ್ಞಾನದ ಬೆಳಕು ಎಲ್ಲೆಡೆ ಪಸರಿಸುತ್ತದೆ ಎಂದರು.
ಹುಬ್ಬಳ್ಳಿ ಕರ್ನಾಟಕ ರಾಜ್ಯ ಕಾನೂನು ಕಾಲೇಜಿನ ವಿಶ್ವವಿದ್ಯಾಲಯದ ಕುಲಪತಿ ಡಾ.ಸಿ.ಬಸವರಾಜು ಮಾತನಾಡಿ, ರಾಜ್ಯದಲ್ಲಿ 143 ಕಾನೂನು ಕಾಲೇಜುಗಳಿವೆ. ಕಾನೂನಿನ ಅವಶ್ಯಕತೆಗೆ ಸ್ಪಂದಿಸುತ್ತಿವೆ. ದೀನ ದಲಿತರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಕಾನೂನು ನೆರವು ಸಿಗುವಂತಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಕಡಿಮೆ ಕಲಿಕೆ ಅನರ್ಥಕ್ಕೆ ದಾರಿ ಮಾಡಿ ಕೊಡುತ್ತದೆ. ಆದ್ದರಿಂದ ಸಮಾಜದಲ್ಲಿ ಮೌಲ್ಯಗಳನ್ನು ಹೆಚ್ಚಿಸಲು ಕಲಿಕೆ ಪ್ರತಿಯೊಬ್ಬರಿಗೂ ಅಗತ್ಯವಿದೆ. ಪ್ರತಿಯೊಬ್ಬ ನ್ಯಾಯವಾದಿ ತಾನಿರುವ ಪರಿಸರದ ಎಲ್ಲರನ್ನೂ, ಎಲ್ಲರಲ್ಲೂ ಕಾನೂನಿನ ತಿಳಿವಳಿಕೆಯನ್ನು ಮೂಡಿಸಬೇಕು ಎಂದರು.
ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ಅಧ್ಯಕ್ಷ ವಿಶಾಲ ರಘು ಮಾತನಾಡಿ, ಐವರು ವಿದ್ಯಾವಂತರು ಸೇರಿ ಕಟ್ಟಿದ ಈ ಭುವನ ಜ್ಯೋತಿ ಕಾನೂನು ಮಹಾವಿದ್ಯಾಲಯ ಭವಿಷ್ಯದಲ್ಲಿ ಶ್ರೇಷ್ಠ ಮಹಾವಿದ್ಯಾಲಯವಾಗಿ ಹೊರಹೊಮ್ಮಲಿ ಎಂದು ಆಶಯ ವ್ಯಕ್ತಪಡಿಸಿದರು. ಭುವನಕ್ಕೆ ಜ್ಯೋತಿಯಾಗಿ ಬೆಳಗುವ ಕಾನೂನು ವಿದ್ಯಾಲಯವನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿ ಮುಂದುವರಿಯುತ್ತಿರುವುದು ಬಹಳ ಉತ್ತಮ ಬೆಳವಣಿಗೆ. ಶಿರ, ಹಸ್ತ, ಹೃದಯಗಳನ್ನು ಸೇರಿ ವಿದ್ಯೆ ಮುಂದುವರಿದರೆ ಅಭಿವೃದ್ಧಿ ಶತಸಿದ್ಧ ಎಂದು ಇವರು ತೋರಿಸಿಕೊಟ್ಟಿದ್ದಾರೆ ಎಂದರು.
ದಕ್ಷಿಣ ಕನ್ನಡ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಜೋಶಿ ಅವರು ಶುಭ ಹಾರೈಸಿ ಮಾತನಾಡಿ, ನ್ಯಾಯವಾದಿಗಳು ಎಲ್ಲವನ್ನು ಅರ್ಥೈಸಿಕೊಂಡು ಬೆಳವಣಿಗೆ ಆದಲ್ಲಿ ಮಾತ್ರ ಕಾನೂನು ಉತ್ತಮ ರೀತಿಯಲ್ಲಿ ಜಾರಿಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು
ಭುವನ ಜ್ಯೋತಿ ಕಾನೂನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರಾಘವೇಂದ್ರ ಪ್ರಭು, ಖಜಾಂಚಿ ಲತಾ, ಶರಣಪ್ಪ ಬಾವಿ, ಸದಸ್ಯರಾದ ಸುಬ್ರಹ್ಮಣ್ಯಕುಮಾರ, ಕೆ ತಿರುಮಲೇಶ್ವರ ಭಟ್, ಪವನಕುಮಾರ, ಮಯೂರ ಕೀರ್ತಿ, ಸೋಮನಾಥ ಹೆಗ್ಡೆ ಉಪಸ್ಥಿತರಿದ್ದರು. ಪ್ರಾಚಾರ್ಯ ಪ್ರಶಾಂತ ಎಂ.ಡಿ. ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಧ್ಯೇಯ ಹಾಗೂ ಉದ್ದೇಶಗಳನ್ನು ವಿವರಿಸಿದರು. ಕಾರ್ಯದರ್ಶಿ ಪ್ರಶಾಂತ ಡಿಸೋಜಾ ಸ್ವಾಗತಿಸಿದರು. ಸಂಚಾಲಕ ಪ್ರಶಾಂತ ಎಸ್. ವಂದಿಸಿದರು ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ