ರೈಲಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: 20 ಗಂಟೆಯೊಳಗೆ ಭಟ್ಕಳದಲ್ಲಿ ಆರೋಪಿ ಬಂಧನ

ಉಡುಪಿ: ಬೆಂಗಳೂರು-ಮುರುಡೇಶ್ವರ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಮಣಿಪಾಲ ಪೊಲೀಸರು ಭಟ್ಕಳ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸಂತ್ರಸ್ತೆ ನೀಡಿದ ಫೋಟೋ ಆಧರಿಸಿ ಅಪರಾಧ ನಡೆದ ೨೦ ಗಂಟೆಯೊಳಗೆ ಬಂಧಿಸಿದ್ದಾರೆ.
ಭಟ್ಕಳದ ಶುರೈಮ್‌ (22) ಬಂಧಿತ ವ್ಯಕ್ತಿ. ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉಡುಪಿ ಮೂಲದ ಯುವತಿ ಎರಡು ದಿನಗಳ ಹಿಂದೆ ಬೆಂಗಳೂರಿನಿಂದ ರೈಲಿನಲ್ಲಿ ಉಡುಪಿಗೆ ತೆರಳುತ್ತಿದ್ದಳು. ರೈಲು ಮುಲ್ಕಿ ತಲುಪುತ್ತಿದ್ದಂತೆ ಮಹಿಳೆಯೊಂದಿಗೆ ಭಟ್ಕಳದ ಶುರೈಂ ಎಂಬಾತ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ಆಕ್ಷೇಪ ವ್ಯಕ್ತಪಡಿಸಿದಾಗ ಆತ ಆಕೆಯಲ್ಲಿ ಕ್ಷಮೆಯಾಚಿಸಿದ್ದ. ನಂತರ ಆರೋಪಿಯ ಚಿತ್ರವನ್ನು ಕ್ಲಿಕ್ಕಿಸಿದ ಯುವತಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಬಳಿಕ ಮಣಿಪಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂತ್ರಸ್ತೆ  ಬೆಂಗಳೂರಿನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಆಗಸ್ಟ್ ೨೪ ರಂದು ಬೆಂಗಳೂರಿನಿಂದ ಮುರುಡೇಶ್ವರಕ್ಕೆ ಹೊರಡುವ ರೈಲು ಹತ್ತಿದ್ದಳು. ಆಗಸ್ಟ್ ೨೫ ರಂದು ರೈಲು ಮುಲ್ಕಿ ದಾಟುತ್ತಿದ್ದಂತೆ ಆರೋಪಿ ಶುರೈಮ್ ಸಂತ್ರಸ್ತೆಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ. ವಾಗ್ವಾದದ ನಂತರ, ಆರೋಪಿ ಕ್ಷಮೆಯಾಚಿಸಿದ್ದಾನೆ. ಬಳಿಕ ಸಂತ್ರಸ್ತೆ ಉಡುಪಿ ರೈಲ್ವೆ ನಿಲ್ದಾಣ ತಲುಪಿದ ಬಳಿಕ ರೈಲ್ವೇ ಪೊಲೀಸರಿಗೆ ದೂರು ನೀಡಿದ್ದಾಳೆ. ರೈಲ್ವೆ ಪೊಲೀಸರು ಪ್ರಕರಣವನ್ನು ಮಣಿಪಾಲ ಪೊಲೀಸರಿಗೆ ಹಸ್ತಾಂತರಿಸಿದ್ದರು. ರೈಲ್ವೆ ಆ್ಯಪ್‌ನಲ್ಲಿ ದೂರು ದಾಖಲಾಗಿದ್ದರಿಂದ ಉನ್ನತ ಅಧಿಕಾರಿಗಳು ಉಡುಪಿ ಎಸ್ಪಿ ಗಮನಕ್ಕೆ ತಂದಿದ್ದಾರೆ. ಮಣಿಪಾಲ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾದರು.

ಪ್ರಮುಖ ಸುದ್ದಿ :-   ಸಾಹಿತಿ ದೊಡ್ಡರಂಗೇಗೌಡರ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು

ಸುಳಿವು ನೀಡಿದ ಸಂತ್ರಸ್ತೆ ತೆಗೆದ ಫೋಟೊ:
ತನಿಖೆ ಆರಂಭಿಸಿದ ಮಣಿಪಾಲ ಪೊಲೀಸರು ಅಂದು ಬೆಂಗಳೂರು – ಮುರುಡೇಶ್ವರ ರೈಲಿನಲ್ಲಿ ಪ್ರಯಾಣಿಸಿದ ೧೨೦೦ ಜನರ ಪಟ್ಟಿ ಪಡೆದರು. ಮುಖದ ಲಕ್ಷಣಗಳು ಮತ್ತು ಬಟ್ಟೆಯ ಆಧಾರದ ಮೇಲೆ ತಮ್ಮ ತನಿಖೆ ಪ್ರಾರಂಭಿಸಿದರು. ಸಿಎನ್ಆರ್ ಸಂಖ್ಯೆಗಳನ್ನು ಪಡೆದ ನಂತರ, ಪೊಲೀಸರು ಎಲ್ಲಾ ಪ್ರಯಾಣಿಕರ ಮೊಬೈಲ್ ಸಂಖ್ಯೆಗಳ ಮೇಲೆ ತನಿಖೆ ಕೈಗೊಂಡರು. ಈ ಸಂದರ್ಭದಲ್ಲಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಸಿಸಿಟಿವಿಯಲ್ಲಿ ಆರೋಪಿಯ ಚಲನವಲನಗಳನ್ನು ಪತ್ತೆ ಹಚ್ಚಿದ ಪೊಲೀಸರಿಗೆ ಆರೋಪಿ ಭಟ್ಕಳ ನಿವಾಸಿ ಎಂಬುದು ಪತ್ತೆಯಾಗಿದೆ. ನಂತರ ಪೊಲೀಸರು ಭಟ್ಕಳಕ್ಕೆ ತೆರಳಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿ ಶುರೈಮ್‌ ಭಟ್ಕಳದ ವಿದ್ಯಾರ್ಥಿಯಾಗಿದ್ದಾನೆ. ಮೈಸೂರು ಜಮಾತ್‌ನಲ್ಲಿ ೧೦ ದಿನಗಳ ಕೋರ್ಸ್ ಮುಗಿಸಿ ಹಿಂತಿರುಗುತ್ತಿದ್ದ. ಆತನನ್ನು ಉಡುಪಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಡುಪಿ ಎಸ್ಪಿ ಡಾ.ಕೆ.ಅರುಣ ನೇತೃತ್ವದಲ್ಲಿ ಮಣಿಪಾಲ ಪಿಐ ದೇವರಾಜ ಟಿ.ವಿ., ಪಿಎಸ್ ಐ ರಾಘವೇಂದ್ರ, ಎಎಸ್ ಐ ವಿವೇಕ, ಸಿಬ್ಬಂದಿ ಇಮ್ರಾನ್, ರಘು, ವಿದ್ಯಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement