ಲೈಂಗಿಕ ದೌರ್ಜನ್ಯ ಪ್ರಕರಣ: ಎಚ್‌.ಡಿ.ರೇವಣ್ಣ ವಿರುದ್ಧ ಪ್ರಕ್ರಿಯೆ ದಾಖಲಿಸದಂತೆ ಅಧೀನ ನ್ಯಾಯಾಲಯಕ್ಕೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು : ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಅವರು ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುಂದಿನ ವಿಚಾರಣೆ ವರೆಗೆ ವಿಚಾರಣಾಧೀನ ನ್ಯಾಯಾಲಯವು ಯಾವುದೇ ವಿಚಾರಣಾ ಪ್ರಕ್ರಿಯೆ ದಾಖಲಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಎಚ್‌.ಡಿ. ರೇವಣ್ಣ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ರೇವಣ್ಣ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ. ವಿ. ನಾಗೇಶ “ದೂರಿನಲ್ಲಿ ಆಕ್ಷೇಪಿಸಿರುವ ಅಪರಾಧಕ್ಕೆ ಪ್ರಕರಣ ದಾಖಲಿಸಲಾಗುತ್ತದೆಯೇ ಹೊರತು ತನಿಖೆಯ ವೇಳೆ ಬಹಿರಂಗಗೊಳ್ಳುವಂತಹ ಅಪರಾಧಗಳಿಗೆ ಅಲ್ಲ ಎಂಬುದನ್ನು ನ್ಯಾಯಾಲಯ ಒಪ್ಪುತ್ತದೆ ಎಂದುಕೊಳ್ಳುತ್ತೇನೆ. ರೇವಣ್ಣ ವಿರುದ್ಧ ದಾಖಲಿಸಿರುವ ಐಪಿಸಿ 354ಎ ಅಡಿ ಅಪರಾಧಕ್ಕೆ ಗರಿಷ್ಠ ಶಿಕ್ಷೆ ಮೂರು ವರ್ಷ. ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತೆಯು ರೇವಣ್ಣ ಅವರ ಮನೆಯನ್ನು ತೊರೆದಿದ್ದಾರೆ. ಆದರೆ, 2024ರ ಏಪ್ರಿಲ್‌ 28ರಂದು ಐಪಿಸಿ ಸೆಕ್ಷನ್‌ 354ಎ ಮತ್ತು 354ಡಿ (ಹಿಂಬಾಲಿಸುವುದು) ಅಡಿ ಪ್ರಕರಣ ದಾಖಲಿಸಲಾಗಿದೆ. ಹಿಂಬಾಲಿಸುವ ಆರೋಪ ಎಲ್ಲಿದೆ? ಈ ಎರಡೂ ಅಪರಾಧಗಳಿಗೆ ಗರಿಷ್ಠ 3 ವರ್ಷ ಶಿಕ್ಷೆ ಇದೆ. ಐಪಿಸಿ ಸೆಕ್ಷನ್‌ಗಳನ್ನು ಅನ್ವಯಿಸಿದರೆ ಸಾಲದು, ಆರೋಪ ಇರಬೇಕಾಗುತ್ತದೆ” ಎಂದು ವಾದಿಸಿದರು. ಅಪರಾಧ ಪ್ರಕ್ರಿಯಾ ಸಂಹಿತೆಯ 468 ಅನ್ನು ಉಲ್ಲೇಖಿಸಿ ಕಾಲಮಿತಿಯೊಳಗೆ ದೂರುದಾಖಲಾಗಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ಸಹಮತಿ ವ್ಯಕ್ತಪಡಿಸಿದ ಪೀಠವು “468 ಸಂಜ್ಞೇ ತೆಗೆದುಕೊಳ್ಳಲು ಅನ್ವಯಿಸುವುದಿಲ್ಲ. ಬದಲಿಗೆ ದೂರು ದಾಖಲಿಸಲು ಮಾತ್ರವೇ ಅನ್ವಯಿಸುತ್ತದೆ. ಹತ್ತು ವರ್ಷದ ಬಳಿಕ ಬೇಕಾದರೆ ನ್ಯಾಯಾಲಯ ಸಂಜ್ಞೇ ಪರಿಗಣಿಸಬಹುದು. ಆದರೆ, ದೂರು ದಾಖಲಿಗೆ ಕಾಲಮಿತಿ ಇದೆ” ಎಂದು ಸ್ಪಷ್ಟಪಡಿಸಿತು.
ಈ ವೇಳೆ ಮಧ್ಯಪ್ರವೇಶಿಸಿದ, ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ. ರವಿವರ್ಮಕುಮಾರ ಅವರು “ಆಗಸ್ಟ್‌ 23ರಂದು ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಐಪಿಸಿ ಸೆಕ್ಷನ್‌ 354ಎ ಮಾತ್ರವೇ ಅಲ್ಲ, ಸೆಕ್ಷನ್‌ 506 (ಕ್ರಿಮಿನಲ್‌ ಬೆದರಿಕೆ), 509 (ಮಹಿಳೆಯ ಘನತೆಗೆ ಚ್ಯುತಿ) ಅಡಿಯೂ ಅಪರಾಧ ದಾಖಲಾಗಿದೆ. ಇಲ್ಲಿ ಎಸಗಿರುವ ಅಪರಾಧವು ಹೀನ ಕೃತ್ಯವಾಗಿದೆ” ಎಂದು ವಿವರಿಸಿದರು.

ಸಿ.ವಿ. ನಾಗೇಶ ಅವರು ಪ್ರಕರಣದ ವಿಚಾರಣಾರ್ಹತೆಯ ಮೇಲೆ ಚರ್ಚಿಸದೆ ಸೆಕ್ಷನ್‌ 354 (ಡಿ) ಪ್ರಕರಣದಲ್ಲಿ ಅನ್ವಯಿಸದೇ ಇರುವುದು, ದೂರು ದಾಖಲಿಸುವ ವಿಚಾರದಲ್ಲಿ ಕಾಲಮಿತಿ ಮೀರಿರುವುದು, ದೂರಿನಲ್ಲಿ ಅಡಕವಾಗಿಲ್ಲದೆ ಇರುವ ಆರೋಪಗಳಿಗೆ ಸಂಬಂಧಿಸಿದ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ದಾಖಲಿಸಿರುವ ಅಂಶಗಳ ಬಗ್ಗೆ ತಮ್ಮ ವಾದ ಮಂಡಿಸಿದರು. ಎಫ್‌ಐಆರ್‌ ರದ್ದುಪಡಿಸಲು ಈ ಅಂಶಗಳು ಸಾಕು ಎಂಬ ವಾದ ಮುಂದಿಟ್ಟರು.
ಪೀಠವು, ದೂರಿನಲ್ಲಿ ಮೆರಿಟ್‌ ಇದೆಯೋ ಇಲ್ಲವೋ ಎಂಬುದನ್ನು ನೋಡೋಣ. ಈಗಾಗಲೇ ಆರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ಅದನ್ನು ಪರಿಶೀಲಿಸಲಾಗುವುದು” ಎಂದು ತಿಳಿಸಿತು.
ಪೀಠವು ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಅವರನ್ನು ಕುರಿತು “ಅಧೀನ ನ್ಯಾಯಾಲಯ ಆರೋಪ ಪಟ್ಟಿಗೆ ಸಂಬಂಧಿಸಿದಂತೆ ಸಂಜ್ಞೇ ಪರಿಗಣಿಸಿರುವ ಆದೇಶ ಎಲ್ಲಿ” ಎಂದು ಕೇಳಿತು. ಆಗ ಎಸ್‌ಪಿಪಿ ಅವರು “ಅಧೀನ ನ್ಯಾಯಾಲಯ ಸಂಜ್ಞೇ ತೆಗೆದುಕೊಂಡಿಲ್ಲದಿರುವ ಆದೇಶವನ್ನು ಪ್ರಶ್ನಿಸಲಾಗುವುದು” ಎಂದರು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು ವಿಚಾರಣೆ ಮುಂದೂಡಿತು.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement