ಮುಡಾ ಹಗರಣ: ಸಿದ್ದರಾಮಯ್ಯ ಕುಟುಂಬಕ್ಕೆ ಸೈಟ್ ; ನಕಲಿ ನಿರ್ಣಯದ ಆಧಾರದ ಮೇಲೆ ನಿವೇಶನ ಹಂಚಿಕೆ-ಬಿಜೆಪಿ ಆರೋಪ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ ಅವರಿಗೆ ಬದಲಿ ನಿವೇಶನ ನೀಡುವ ನಿರ್ಣಯವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತ ಮಂಡಳಿ ತೆಗೆದುಕೊಂಡಿಲ್ಲ. ಆದರೂ ನಿಯಮಬಾಹಿರವಾಗಿ 14 ನಿವೇಶನಗಳನ್ನು ಪಡೆಯಲಾಗಿದೆ ಎಂದು ಬಿಜೆಪಿಯ ವಿಧಾನಪರಿಷತ್‌ ಸದಸ್ಯ ರವಿಕುಮಾರ ಗಂಭೀರ ಆರೋಪ ಮಾಡಿದ್ದಾರೆ ಹಾಗೂ ಆಡಿಯೋ ದಾಖಲೆಯನ್ನು ಬಿಡುಗಡೆ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರವಿಕುಮಾರ ಅವರು, 2020ರಲ್ಲಿ ಮುಡಾ ಸಭೆಯಲ್ಲಿನ ನಡಾವಳಿ ಮತ್ತು ಆಡಿಯೋ ದಾಖಲೆ ಬಿಡುಗಡೆ ಮಾಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಡಾದಲ್ಲಿ ಬಿಜೆಪಿಯವರು ಅಧ್ಯಕ್ಷರಾಗಿದ್ದಾಗ ತಮಗೆ ನಿವೇಶನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿದ್ದರಾಮಯ್ಯ ವಾದಿಸುತ್ತಿದ್ದಾರೆ. ಇದು ಅಪ್ಪಟ ಸುಳ್ಳು. ಜಂಟಿ ಸಹಭಾಗಿತ್ವದಲ್ಲಿ ನಿವೇಶನಗಳ ಅಭಿವೃದ್ಧಿಗೆ 2009 ರಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದಕ್ಕೆ ಭೂಪರಿವರ್ತನೆಯಾದ ನಿವೇಶನ ಹಂಚಿಕೆಯ ಪ್ರಮಾಣ 60:40 ರಷ್ಟಿತ್ತು ಎಂದು ರವಿಕುಮಾರ ಹೇಳಿದರು.

ಇದಕ್ಕೆ ಜಮೀನು ನೀಡಲು ರೈತರು ಮುಂದೆ ಬರಲಿಲ್ಲ, ಅಧಿಕಾರಿಗಳೂ ಉತ್ಸಾಹ ತೋರಲಿಲ್ಲ. ಹೀಗಾಗಿ 2015 ರಲ್ಲಿ ಈ ಪ್ರಮಾಣವನ್ನು 50:50 ರ ಅನುಪಾತಕ್ಕೆ ಮುಡಾ ಹೆಚ್ಚಿಸಿದೆ. ಆದರೆ ಈ ನಿರ್ಣಯಕ್ಕೆ ರಾಜ್ಯ ಸರ್ಕಾರದ ಅನುಮತಿ ದೊರೆಯಲಿಲ್ಲ. ಹೀಗಾಗಿ 2020ರಲ್ಲೇ ಇದನ್ನು ರದ್ದುಗೊಳಿಸಲಾಗಿದೆ. ಈ ನಿರ್ಣಯ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ. ಯಾವುದೇ ಭೂಸ್ವಾಧೀನ ಪ್ರಕ್ರಿಯೆಗಳು ನಡೆಯದೆ ಅನಧಿಕೃತವಾಗಿ ಭೂಮಿ ಬಳಸಿಕೊಂಡು ಬಡಾವಣೆ ನಿರ್ಮಿಸಿದ ಪ್ರಕರಣಗಳಲ್ಲಿ 50:50 ರ ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಬೇಕು ಎಂಬ ನಿರ್ಣಯವಾಗಿಲ್ಲ.ಇದನ್ನು ಬಳಸಿಕೊಂಡು ಸಿದ್ದರಾಮಯ್ಯನವರು ನಿವೇಶನ ಪಡೆದಿದ್ದಾರೆ. ನಕಲಿ ನಿರ್ಣಯವನ್ನು ಬಳಕೆ ಮಾಡಿರುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದರು. ಸಭೆಯಲ್ಲಿ ನಡೆದಿರುವ ಚರ್ಚೆಯ ಆಡಿಯೊವನ್ನು ಬಿಡುಗಡೆ ಮಾಡಿದ ಬಿಜೆಪಿ ನಾಯಕರು ಸಭೆಯಲ್ಲಿ ನಿರ್ಣಯವಾಗದಿದ್ದರೂ ನಿರ್ಣಯ ಆಗಿದೆ ಎಂದು ಅಂದಿನ ಮುಡಾ ಅಧ್ಯಕ್ಷರು ಮತ್ತು ಅಂದಿನ ಆಯುಕ್ತರು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.

ಪ್ರಮುಖ ಸುದ್ದಿ :-   ಆನ್‍ಲೈನ್ ಗೇಮ್‍ನಲ್ಲಿ 18 ಲಕ್ಷ ರೂ. ಕಳೆದುಕೊಂಡ ಯುವಕ; ವೀಡಿಯೊ ಮಾಡಿಟ್ಟು ಆತ್ಮಹತ್ಯೆ

ಈ ನಕಲಿ ನಿರ್ಣಯವನ್ನಿಟ್ಟುಕೊಂಡು ಸುಮಾರು 13 ಸಾವಿರಕ್ಕೂ ಹೆಚ್ಚಿನ ನಿವೇಶನಗಳ ಅಕ್ರಮ ಹಂಚಿಕೆಯಾಗಿದ್ದು, ಇದು ಸುಮಾರು 10 ಸಾವಿರ ಕೋಟಿ ರೂ.ಗಳ ಹಗರಣವಾಗಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರು ಪಡೆದಿರುವ 14 ನಿವೇಶನಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿವೇಶನಗಳನ್ನು ಹಂಚಿಕೆ ಮಾಡಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಅಧಿಕಾರದಲ್ಲಿದ್ದಾರೆ ಹಾಗೂ ಸ್ವತಂತ್ರರಿದ್ದಾರೆ. ಅವರನ್ನು ತಡೆದವರು ಯಾರು ಎಂದು ರವಿಕುಮಾರ ಪ್ರಶ್ನಿಸಿದರು.

ಕೆಲವು ದಸ್ತಾವೇಜುಗಳನ್ನು ಬಿಡುಗಡೆ ಮಾಡಿದ ಅವರು ನಕಲಿ ಆದೇಶಕ್ಕೆ ಮುಡಾ ಆಯುಕ್ತರು ಮತ್ತು ಅಧ್ಯಕ್ಷರು ಮಾತ್ರ ಸಹಿ ಹಾಕಿದ್ದಾರೆ. ಅವರಿಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನಾವಿಂದು ಸಭೆಯಲ್ಲಿ ನಡೆದ ನಡಾವಳಿಗಳು, ಚರ್ಚೆಯ ಆಡಿಯೊ ಬಿಡುಗಡೆ ಮಾಡಿದ್ದೇವೆ ಎಂದು ತಮ್ಮನ್ನು ಪ್ರಾಮಾಣಿಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಅವರ ಮತ್ತೊಂದು ಮುಖ ಅನಾವರಣಗೊಂಡಿದೆ. ಸಿದ್ದರಾಮಯ್ಯ ತಕ್ಷಣವೇ ರಾಜೀನಾಮೆ ನೀಡಲೇಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮುಡಾ ಹಗರಣದ ತನಿಖೆಗೆ ತಾಂತ್ರಿಕ ಸಮಿತಿಯನ್ನು ರಚಿಸಿದ್ದರು. ಅದರ ವರದಿ ಸರ್ಕಾರದ ಬಳಿಯಿದ್ದು, ಅದನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

ಪ್ರಮುಖ ಸುದ್ದಿ :-   ಮುಖ್ಯ ಕಾರ್ಯದರ್ಶಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಎಂಎಲ್‌ಸಿ ಎನ್‌.ರವಿಕುಮಾರ ವಿರುದ್ಧ ಎಫ್‌ಐಆರ್‌ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement