ತುಮಕೂರು : ಭಾನುವಾರ ಗಣಪತಿ ವಿಸರ್ಜನೆ ವೇಳೆ ನೀರಲ್ಲಿ ಮುಳುಗಿ ತಂದೆ, ಮಗ ಸೇರಿ ಮೂವರು ನೀರು ಪಾಲಾದ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾರಸಂದ್ರ ಸಮೀಪದ ರಂಗನಹಟ್ಟಿ ಕೆರೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ರಂಗನಹಟ್ಟಿ ಗ್ರಾಮದ ರೇವಣ್ಣ (50), ಪುತ್ರ ಶರತ್ (26) ಮತ್ತು ದಯಾನಂದ(22) ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಊರಿನ ಯುವಕರು ಮೆರವಣಿಗೆ ನಡೆಸಿ, ಮಧ್ಯಾಹ್ನ ರಂಗನಕಟ್ಟೆಯಲ್ಲಿ ವಿಸರ್ಜನೆ ಮಾಡಲು ಹೋಗಿದ್ದರು. ಮೂರ್ತಿ ಹಿಡಿದು ಶರತ್ ಮತ್ತು ದಯಾನಂದ್ ನೀರಿಗೆ ಇಳಿದಿದ್ದರು. ಕೆರೆಯ ಕೆಸರಿನಲ್ಲಿ ಕಾಲು ಸಿಲುಕಿಕೊಂಡಿವೆ. ಈಜಲು ಸಾಧ್ಯವಾಗದೆ ದಡದಲ್ಲಿದ್ದವರ ಸಹಾಯಕ್ಕೆ ಕೂಗಿದ್ದಾರೆ. ತಕ್ಷಣ ಶರತ್ ಅವರ ತಂದೆ ರೇವಣ್ಣ ನೀರಿಗೆ ಧುಮಿಕಿದ್ದಾರೆ. ಈಜಲಾಗದೆ ಅವರು ಸಹ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಪೊಲೀಸರ ಸಹಾಯದೊಂದಿಗೆ ಮೃತದೇಹಗಳ ಪತ್ತೆಗೆ ಶೋಧಕಾರ್ಯ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ