ಕೋಲ್ಕತ್ತಾ : ಇಲ್ಲಿನ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೊತೆ ನಂಟು ಹೊಂದಿರುವ ವ್ಯಕ್ತಿಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿದೆ.
ಟಿಎಂಸಿ ಯುವ ಮುಖಂಡ ಆಶಿಶ್ ಪಾಂಡೆ ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಡಾ.ಸಂದೀಪ ಘೋಷ್ ಅವರಿಗೆ ನೆರವು ನೀಡಿದ ಆರೋಪ ಎದುರಿಸುತ್ತಿದ್ದು, ಈ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದವರ ಸಂಖ್ಯೆ ಐದಕ್ಕೆ ಏರಿದೆ.
ಅಧಿಕಾರಿಗಳ ಪ್ರಕಾರ, ಆಶಿಶ್ ಪಾಂಡೆ ಮಾಜಿ ಪ್ರಾಂಶುಪಾಲರಾದ ಘೋಷ್ಗೆ ನಿಕಟರಾಗಿದ್ದರು ಮತ್ತು ಸಂಸ್ಥೆಯಲ್ಲಿ ಹಣಕಾಸಿನ ಅಕ್ರಮಗಳನ್ನು ನಡೆಸಲು ಸಹಾಯ ಮಾಡಿದ್ದಾರೆ. ಆತ ಸಿಬಿಐನ ಸ್ಕ್ಯಾನರ್ ಅಡಿಯಲ್ಲಿದ್ದರು ಮತ್ತು ಕಳೆದ ತಿಂಗಳು ಕೇಂದ್ರ ಸಂಸ್ಥೆಯಿಂದ ಹಲವಾರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.
ಆಶಿಶ್ ಪಾಂಡೆ ಆರ್ಜಿ ಕರ್ ವೈದ್ಯಕೀಯ ಕಾಲೇಜಿನ ಸಿಬ್ಬಂದಿಯೂ ಹೌದು. ಈ ಕಾಲೇಜಿನಲ್ಲಿ ಆಗಸ್ಟ್ನಲ್ಲಿ ಕರ್ತವ್ಯದ ವೇಳೆ ಸ್ನಾತಕೋತ್ತರ ತರಬೇತಿ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಲಾಗಿದೆ.
ಘೋಷ್ ಅವರನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಸೆಪ್ಟೆಂಬರ್ 2 ರಂದು ಬಂಧಿಸಲಾಯಿತು. ನಂತರ, ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣದಲ್ಲಿಯೂ ಸಂಸ್ಥೆಯು ಅವರನ್ನು ಕಸ್ಟಡಿಗೆ ತೆಗೆದುಕೊಂಡಿದೆ.
ಕಲ್ಕತ್ತಾ ಹೈಕೋರ್ಟಿನ ನಿರ್ದೇಶನದಡಿಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಸಿಬಿಐ, ಸಂದೀಪ ಘೋಷ್ ಮತ್ತು ಮೂರು ಕೋಲ್ಕತ್ತಾ ಮೂಲದ ಖಾಸಗಿ ಸಂಸ್ಥೆಗಳ ಮೇಲೆ ಆರೋಪ ಹೊರಿಸಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 420 (ವಂಚನೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಘೋಷ್ ಮತ್ತು ಖಾಸಗಿ ಘಟಕಗಳ ವಿರುದ್ಧ ಸಂಸ್ಥೆ ಎಫ್ಐಆರ್ ದಾಖಲಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ