ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ವಿರುದ್ಧ ಅವಾಚ್ಯ ಶಬ್ದ ಬಳಕೆ ಆರೋಪದ ಪ್ರಕರಣ :ಸಿ.ಟಿ.ರವಿಗೆ ಸದ್ಯಕ್ಕೆ ರಿಲೀಫ್‌ ನೀಡಿದ ಹೈಕೋರ್ಟ್‌

ಬೆಂಗಳೂರು : ವಿಧಾನ ಪರಿಷತ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ವಿರುದ್ಧ ಯಾವುದೇ ಆತುರದ ಕ್ರಮಕೈಗೊಳ್ಳಬಾರದು ಎಂದು ಹೈಕೋರ್ಟ್‌ ಗುರುವಾರ ರಾಜ್ಯ ಸರ್ಕಾರಕ್ಕೆ ಮಧ್ಯಂತರ ಆದೇಶ ಮಾಡಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಪರಿಷತ್‌ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಬೆಳಗಾವಿಯ ಬಾಗೇವಾಡಿ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ಸಿ ಟಿ ರವಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
“ಪ್ರಕರಣದಲ್ಲಿ ವಿಚಾರಣಾ ವ್ಯಾಪ್ತಿಯ ವಿಚಾರವಿದ್ದು, ಸಭಾಧ್ಯಕ್ಷರು ಪ್ರಕ್ರಿಯೆ ಮುಕ್ತಾಯಗೊಳಿಸಬಹುದೇ ಅಥವಾ ತನಿಖಾ ಸಂಸ್ಥೆಯು ತನಿಖೆ ನಡೆಸಬೇಕೆ ಎಂಬುದಕ್ಕೆ ಉತ್ತರಕಂಡುಕೊಳ್ಳಬೇಕಿದೆ. ಹೀಗಾಗಿ, ಅರ್ಜಿಯನ್ನು ಜನವರಿ 30ಕ್ಕೆ ನಿಗದಿಗೊಳಿಸಲಾಗಿದೆ. ಅಲ್ಲಿಯವರೆಗೆ ರಾಜ್ಯ ಸರ್ಕಾರವು ಅರ್ಜಿದಾರರ ವಿರುದ್ಧ ಆತುರದ ನಿರ್ಧಾರ ಕೈಗೊಳ್ಳಬಾರದು” ಎಂದು ನ್ಯಾಯಾಲಯ ಸೂಚನೆ ನೀಡಿದೆ.

ಸಿ.ಟಿ.ರವಿ ಪರ ಹಿರಿಯ ವಕೀಲ ಸಿ.ವಿ. ನಾಗೇಶ “ವಿಧಾನ ಪರಿಷತ್‌ನಲ್ಲಿ ರವಿ ನೀಡಿರುವ ಹೇಳಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ರವಿ ಹೇಳಿಕೆ ಆಧರಿಸಿ 19-12-24 ರಂದು ದೂರು ದಾಖಲಿಸಲಾಗಿದೆ. ಈ ದೂರು ದಾಖಲಾಗುವುದಕ್ಕೂ ಮುನ್ನವೇ ಪರಿಷತ್‌ ಸಭಾಧ್ಯಕ್ಷರು ಪ್ರಕರಣ ಇತ್ಯರ್ಥಪಡಿಸಿದ್ದಾರೆ. ಸೀತಾ ಸೊರೇನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಏಳು ಸದಸ್ಯರ ಪೀಠವು ನೀಡಿರುವ ತೀರ್ಪು ನಮ್ಮ ಮುಂದಿದೆ. ಸದನದಲ್ಲಿ ಶಾಸಕರ ನಡುವಿನ ವಾಗ್ವಾದವು ವಿಶೇಷ ಹಕ್ಕಾಗಿದ್ದು, ಇದಕ್ಕೆ ವಿನಾಯಿತಿ ಇರುತ್ತದೆ” ಎಂದು ವಾದಿಸಿದರು. ಈ ವೇಳೆ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು “ಸದನದೊಳಗೆ ನಡೆಯುವ ಎಲ್ಲಾ ಕ್ರಿಮಿನಲ್‌ ಚಟುವಟಿಕೆಗಳಿಗೆ ವಿನಾಯಿತಿ ಇರುವುದಿಲ್ಲ. ಅಪರಾಧ ಪ್ರಕರಣವನ್ನು ತನಿಖೆ ನಡೆಸಬೇಕಾಗುತ್ತದೆ” ಎಂದು ವಾದಿಸಿದರು.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

ಇದಕ್ಕೂ ಮುನ್ನ, ಸಿ ವಿ ನಾಗೇಶ ಅವರು “ಶಾಸಕಾಂಗದ ವ್ಯಾಪ್ತಿಗೆ ಕಾರ್ಯಾಂಗ ಕಾಲಿರಿಸಬಹುದೇ ಎಂಬುದನ್ನು ನ್ಯಾಯಾಲಯವು ಪರಿಗಣಿಸಬೇಕಿದೆ” ಎಂದರು. ಆಗ ಪೀಠವು “ಘಟನೆಯು ಸದನದ ಒಳಗೆ ನಡೆದಿತ್ತೇ?” ಎಂದು ಪ್ರಶ್ನಿಸಿದಾಗ ನಾಗೇಶ ಹೌದು ಎಂದರು. ಅದಕ್ಕೆ ಬೆಳ್ಳಿಯಪ್ಪ ಅವರು “ಘಟನೆ ನಡೆದಾಗ ಸದನ ಮುಂದೂಡಲಾಗಿತ್ತು” ಎಂದು ಪ್ರಯಿಕ್ರಿಯಿಸಿದರು.
ಈ ವೇಳೆ ಪೀಠವು ನಾಗೇಶ ಅವರನ್ನು ಕುರಿತು “ಸದನದ ಒಳಗೆ ಸದಸ್ಯರು ಏನೇ ಮಾತನಾಡಿದರೂ ಅವರಿಗೆ ವಿನಾಯಿತಿ ಇರುತ್ತದೆ ಎಂಬುದು ನಿಮ್ಮ ಸಲಹೆಯಾಗಿದೆ. ಸದನ ನಡೆಯುತ್ತಿತ್ತೇ, ಇಲ್ಲವೇ?” ಎಂದಿತು. ಅದಕ್ಕೆ ನಾಗೇಶ್‌ ಅವರು “ಸದನದ ಒಳಗೆ ಏನೇ ಮಾತನಾಡಿದರೂ ವಿನಾಯಿತಿ ಅನ್ವಯಿಸಲಿದೆ” ಎಂದರು.

“ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ರವಿ ನಿಂದಿಸಿದ್ದಾರೆ ಎಂಬುದಕ್ಕೆ ಸಂಬಂಧಿಸಿದಂತೆ ಸಭಾಧ್ಯಕ್ಷರು ಏನೂ ನಡೆದಿಲ್ಲ ಎಂದು ರೂಲಿಂಗ್‌ ನೀಡಿದ್ದಾರೆ.ಸಭಾಧ್ಯಕ್ಷರು ಪ್ರಕರಣ ಮುಕ್ತಾಯಗೊಳಿಸಿದ್ದಾರೆ ಎಂದರು.
ಆಗ ಬೆಳ್ಳಿಯಪ್ಪ ಅವರು “ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದರಿಂದ ಅಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಸದನವನ್ನು ಮುಂದೂಡಲಾಗಿತ್ತು. ಆ ಸಂದರ್ಭದಲ್ಲಿ ಸಭಾಧ್ಯಕ್ಷರು ಪೀಠದಲ್ಲಿ ಇರಲಿಲ್ಲ. ನಮ್ಮಲ್ಲಿರುವ ಸಿಸಿಟಿವಿ ತುಣುಕಿನಲ್ಲಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಎಫ್‌ಎಸ್‌ಎಲ್‌ ವರದಿಗಾಗಿ ಕಾಯುತ್ತಿದ್ದೇವೆ. ಸಭಾಧ್ಯಕ್ಷರು ಪೀಠದಲ್ಲಿ ಇರದಿದ್ದರಿಂದ ತನಿಖೆ ನಡೆಸುವ ವ್ಯಾಪ್ತಿ ಅವರಿಗೆ ಇಲ್ಲ” ಎಂದು ವಾದಿಸಿದರು.
ಇದಕ್ಕೆ ಪೀಠವು “ಪ್ರಕರಣದ ವ್ಯಾಪ್ತಿಯನ್ನು ನಿರ್ಧರಿಸಬೇಕಿದೆ” ಎಂದು ವಿಚಾರಣೆ ಮುಂದೂಡಿತು.

ಪ್ರಮುಖ ಸುದ್ದಿ :-   ಯಲ್ಲಾಪುರ | ಅರೆಬೈಲ್‌ ಘಟ್ಟದ ಪ್ರಪಾತದ ಬಳಿ ಖಾಸಗಿ ಬಸ್ ಪಲ್ಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement