ಸಿಖ್ ವಿರೋಧಿ ದಂಗೆ: ಕೊಲೆ ಪ್ರಕರಣದಲ್ಲಿ ಸಜ್ಜನಕುಮಾರಗೆ ಜೀವಾವಧಿ ಶಿಕ್ಷೆ

ನವದೆಹಲಿ: ದೆಹಲಿಯಲ್ಲಿ 1984ರಲ್ಲಿ ಸಂಭವಿಸಿದ್ದ ಸಿಖ್ ವಿರೋಧಿ ದಂಗೆ ವೇಳೆ ನಡೆದ ತಂದೆ-ಮಗನ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.
ಫೆಬ್ರವರಿ 12 ರಂದು ಸಜ್ಜನಕುಮಾರ ಅವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರು ಮಂಗಳವಾರ ಶಿಕ್ಷೆಯ ಆದೇಶ ಪ್ರಕಟಿಸಿದರು.
ಸಜ್ಜನಕುಮಾರ ಮಾಡಿದ ಅಪರಾಧಗಳು ಕ್ರೂರ ಮತ್ತು ಖಂಡನೀಯ ಎಂದು ನ್ಯಾಯಾಲಯ ತಿಳಿಸಿತು. ಮರಣದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್ ಮತ್ತು ದೂರುದಾರರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.

ಮರಣದಂಡನೆ ಬದಲು ಜೀವಾವಧಿ ಶಿಕ್ಷೆ ವಿಧಿಸಲು ಕಾರಣವಾಗುವ ಕೆಲವು ಅಂಶಗಳಿವೆ ಎಂದ ಅದು ಅಪರಾಧಿಯ ನಡೆ ತೃಪ್ತಿಕರ ಎಂದು ಜೈಲು ಅಧಿಕಾರಿ ನೀಡಿರುವ ವರದಿ, ಆತ ಕಾಯಿಲೆಯಿಂದ ಬಳಲುತ್ತಿರುವುದು, ವಯಸ್ಸು, ಆತನಿಗೆ ಸುಧಾರಣೆಗೆ ಅವಕಾಶ ಇರುವುದನ್ನು ಗಮನಿಸಿ ತಾನು ಜೀವಾವಧಿ ಸಜೆ ವಿಧಿಸುತ್ತಿರುವುದಾಗಿ ತಿಳಿಸಿತು.
ಲಾಠಿ ಮತ್ತು ಕಬ್ಬಿಣದ ಸರಳುಗಳಿಂದ ದಾಳಿ ನಡೆಸಿದ್ದ ಗುಂಪನ್ನು ಸಜ್ಜನಕುಮಾರ ಪ್ರಚೋದಿಸಿದ್ದರು ಎಂದು ನ್ಯಾಯಾಲಯ ಈ ಹಿಂದೆ ತಿಳಿಸಿತ್ತು.
ಸಜ್ಜನಕುಮಾರ ಕಾನೂನು ಬಾಹಿರ ಸಭೆಯಲ್ಲಿ ಭಾಗಿಯಾಗಿದ್ದು 01.11.1984ರಲ್ಲಿ ನಡೆದಿದ್ದ ಗಲಭೆ ವೇಳೆ ದೂರುದಾರರ ಪತಿ ಎಸ್ ಜಸ್ವಂತ್ ಸಿಂಗ್ ಮತ್ತು ಮಗ ಎಸ್ ತರುಣ್‌ ದೀಪ ಸಿಂಗ್ ಅವರ ಕೊಲೆಗೆ ಕಾರಣವಾಗಿದ್ದಾನೆ ಎಂದು ನ್ಯಾಯಾಲಯ ಫೆಬ್ರವರಿ 12ರಂದು ನೀಡಿದ ತೀರ್ಪಿನಲ್ಲಿ ತಿಳಿಸಿತ್ತು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

ನವೆಂಬರ್ 1, 1984 ರಂದು, ಪಶ್ಚಿಮ ದೆಹಲಿಯ ನಿವಾಸಿಗಳಾದ ಎಸ್ ಜಸ್ವಂತ ಸಿಂಗ್ ಮತ್ತು ಅವರ ಪುತ್ರನನ್ನು ಸಜ್ಜನಕುಮಾರ ನೇತೃತ್ವದ ಗುಂಪು ಕೊಂದಿತ್ತು ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
1984ರ ಗಲಭೆಗಳ ಪ್ರಕರಣಗಳನ್ನು ಮರುತನಿಖೆ ಮಾಡುವುದಕ್ಕಾಗಿ ಗೃಹ ಸಚಿವಾಲಯ 2015ರಲ್ಲಿ ರಚಿಸಿದ್ದ ವಿಶೇಷ ತನಿಖಾ ತಂಡದೆದುರು ದೂರುದಾರರು ನವೆಂಬರ್ 23, 2016ರಂದು ಹೇಳಿಕೆ ದಾಖಲಿಸಿದ್ದರು.
ಗಲಭೆಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ತಿಹಾರ್ ಜೈಲಿನಲ್ಲಿದ್ದ ಸಜ್ಜನಕುಮಾರ ಅವರನ್ನು ಏಪ್ರಿಲ್ 6, 2021ರಂದು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement