ಬೆಂಗಳೂರು: ಕರ್ನಾಟಕ ಕರಾವಳಿ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಉಷ್ಣ ಅಲೆ (ಬಿಸಿ ಗಾಳಿ) ಮುನ್ನೆಚ್ಚರಿಕೆ ನೀಡಿದ್ದು, ಜನರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ರಾಜ್ಯದಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ದಾಟಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹವಾಮಾನ ಇಲಾಖೆ ಮನವಿ ಮಾಡಿದೆ. ಬುಧವಾರ (ಫೆ 26) ಅಪರಾಹ್ನ ಬಿಡುಗಡೆ ಮಾಡಿದ ಹವಾಮಾನ ಮುನ್ಸೂಚನೆ ಪ್ರಕಾರ, ಬುಧವಾರ ಮತ್ತು ಇಂದು, ಗುರುವಾರ ಗರಿಷ್ಠ ತಾಪಮಾನ ಹೆಚ್ಚಳವಾಗಲಿದ್ದು, ತೇವಾಂಶ ಶೇಕಡ 40-50 ನಡುವೆ ಕುಸಿಯಲಿದೆ. ಹೀಗಾಗಿ ಕರಾವಳಿ ಜಿಲ್ಲೆಗಳಲ್ಲಿ ಉಷ್ಣದ ಅಲೆಗಳು ಅನುಭವಕ್ಕೆ ಬರಲಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನಗಳ ಕಾಲ ಉಷ್ಣ ಅಲೆ ಇರಲಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವೆ ಮುಂದವರಿಯಲಿದೆ.
ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ರವರೆಗೆ ಬಿಸಿಲಿನಲ್ಲಿ ಹೋಗುವುದನ್ನು ಕಡಿಮೆ ಮಾಡಿ ಎಂದು ಸೂಚಿಸಲಾಗಿದೆ. ಸಾಕಷ್ಟು ನೀರು ಕುಡಿಯಲು ಸಲಹೆ ನೀಡಲಾಗಿದೆ.
ಸಾಧ್ಯವಾದಷ್ಟು ಹಗುರವಾದ ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವಿರುವ ಹತ್ತಿ ಬಟ್ಟೆಗಳನ್ನು ಧರಿಸುವುದು ಉತ್ತಮ, ಬಿಸಿಲಿನಲ್ಲಿ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು ಛತ್ರಿ/ಟೋಪಿ ಬೂಟುಗಳು ಅಥವಾ ಚಪ್ಪಲ್ಗಳನ್ನು ಬಳಸಲು ಸೂಚಿಸಲಾಗಿದೆ. ಶ್ರಮದಾಯಕ ಕೆಲಸಗಳನ್ನು ಕಡಿಮೆ ಮಾಡಿ ಎಂದು ಸಲಹೆ ನೀಡಲಾಗಿದೆ. ನಿಲ್ಲಿಸಿದ ವಾಹನಗಳ ಒಳಗೆ ಮಕ್ಕಳನ್ನು ಅಥವಾ ಸಾಕುಪ್ರಾಣಿಗಳನ್ನು ಬಿಡಬೇಡಿ, ಯಾಕೆಂದರೆ ತೀವ್ರವಾದ ಉಷ್ಣಾಂಶದಿಂದ ಅಪಾಯಸಂಭವಿಸಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಒಆರ್ಎಸ್ (ORS), ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ ನಿಂಬೆ ನೀರು ಮಜ್ಜಿಗೆ ಇತ್ಯಾದಿಗಳನ್ನು ಬಳಸಬೇಕು. ಇದು ದೇಹದಲ್ಲಿ ನೀರಿನಾಂಶ ಹೆಚ್ಚು ಮಾಡಲು ಮತ್ತು ಡಿಹೈಡ್ರೇಷನ್ ತಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ. ಅನಾರೋಗ್ಯ ಹಾಗೂ ಸುಸ್ತು ಅನ್ನಿಸಿದರೆ, ತಕ್ಷಣ ವೈದ್ಯರನ್ನು ಭೇಟಿ ಮಾಡಲು ಸೂಚಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ