ಸೋನಿಪತ್: ಹರಿಯಾಣದ ಸೋನಿಪತ್ನ ಬಿಜೆಪಿ ಮುಖಂಡ ಸುರೇಂದ್ರ ಜವಾಹರ್ (42) ಅವರನ್ನು ನೆರೆಯವರು ಗುಂಡಿಕ್ಕಿ ಕೊಂದಿದ್ದಾರೆ. ಆರೋಪಿ ಮೋನು ಬಿಜೆಪಿ ನಾಯಕನ ಮೇಲೆ ಕನಿಷ್ಠ ಎರಡು ಗುಂಡುಗಳನ್ನು ಹಾರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆದಿದೆ ಎನ್ನಲಾಗಿದ್ದು, ರಾತ್ರಿ 9:30ರ ಸುಮಾರಿಗೆ ಈ ಘಟನೆ ನಡೆದಿದೆ.
ಮೋನು ಎಂಬಾತ ಜವಾಹರ್ ಅವರನ್ನು ಅಂಗಡಿಯೊಂದಕ್ಕೆ ತಳ್ಳುವುದು ಮತ್ತು ಅವರ ತಲೆಗೆ ಗುರಿಯಿಟ್ಟು ಬಂದೂಕು ತೋರಿಸುವುದನ್ನು ಸಿಸಿಟಿವಿ ಫೂಟೇಜ್ ತೋರಿಸುತ್ತದೆ. ಜವಾಹರ್ ಅವರು “ಮಾರ್ ದಿಯಾ ಮಾರ್ ದಿಯಾ” ಎಂದು ಕೂಗುವುದು ವೀಡಿಯೊದಲ್ಲಿ ಕೇಳಿಸಿದೆ. ಎರಡರಿಂದ ಮೂರು ಮಂದಿ ಆತನನ್ನು ಎಳೆದು ತರಲು ಯತ್ನಿಸಿದರಾದರೂ ಆತ ಬಿಜೆಪಿ ಮುಖಂಡನತ್ತ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಿಜೆಪಿ ಮುಖಂಡ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಶನಿವಾರ ಬೆಳಗ್ಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಜವಾಹರ್ ಅವರು ಮೋನು ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮನಿಂದ ಜಮೀನು ಖರೀದಿಸಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಂದಿನಿಂದ ಜಮೀನಿನ ವಿಚಾರದಲ್ಲಿ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಜಮೀನಿನ ಮೇಲೆ ಕಾಲಿಡದಂತೆ ಮೋನು ಜವಾಹರ್ ಅವರಿಗೆ ಎಚ್ಚರಿಕೆ ನೀಡಿದ್ದ. ಆದಾಗ್ಯೂ, ಜವಾಹರ್ ಜಮೀನಿಗೆ ಭೇಟಿ ನೀಡಿದಾಗ ಕೋಪಗೊಂಡ ಮೋನು ಅವರನ್ನು ಹಿಂಬಾಲಿಸಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ.
ಬಿಜೆಪಿ ಮುಖಂಡನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ