ಕನಕಪುರ | ಮಗುವಿಗೆ ಬರೆ ಹಾಕಿ ಡೈಪರ್ ಗೆ ಖಾರದಪುಡಿ ತುಂಬಿದ ಅಂಗನವಾಡಿ ಸಹಾಯಕಿ…!

ಕನಕಪುರ: ಅಂಗನವಾಡಿ ಸಹಾಯಕಿಯೊಬ್ಬಳು ಎರಡೂವರೆ ವರ್ಷದ ಮಗುವಿಗೆ ಚಾಕುವಿನಿಂದ ಬರೆ ಹಾಕಿ ಡೈಪರ್ ಗೆ ಖಾರದಪುಡಿ ಹಾಕಿ ಕ್ರೌರ್ಯ ಮೆರೆಯಲಾಗಿದೆ ಎಂದು ಆರೋಪಿಸಲಾಗಿದೆ.
ನಗರದ ಮಹಾರಾಜರಕಟ್ಟೆಯ ಅಂಗನವಾಡಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಜ್ಯೋತಿ ಮತ್ತು ರಮೇಶ ನಾಯ್ಕ್ ಎಂಬವರ ಎರಡೂವರೆ ವರ್ಷದ ಮಗ ದೀಕ್ಷಿತ್ ಸಂತ್ರಸ್ತ ಬಾಲಕ.
ಮಂಗಳವಾರ ಅಂಗನವಾಡಿ ಮುಗಿದ ಮೇಲೆ ಮಗನನ್ನು ಕರೆ ತರಲು ದೀಕ್ಷಿತ್ ತಾಯಿ ಚೈತ್ರಬಾಯಿ ಅಂಗನವಾಡಿ ಬಳಿ ಹೋದಾಗ ಮಗು ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ, ಕೈ ಮೇಲೆ ಬರೆ ಹಾಕಿರುವುದು ಹಾಗೂ ಡೈಪರ್‌ಗೆ ಖಾರದಪುಡಿ ತುಂಬಿರುವುದು ಕಂಡು ಬಂದಿದೆ ಎನ್ನಲಾಗಿದೆ.  ಸಹಾಯಕಿ ಚಂದ್ರಮ್ಮ ಮಗುವಿನ ಎಡಗೈ ಮೇಲೆ ಬರೆ ಹಾಕಿದ್ದಲ್ಲದೆ ಡೈಪರ್ ಒಳಗೆ ಕಾರದ ಪುಡಿ ಹಾಕಿ ಹಿಂಸಿಸಿರುವ ಘಟನೆ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೋಷಕರು ಸಿಡಿಪಿಒ ತಾಲೂಕು ಅಧಿಕಾರಿ ನಾರಾಯಣ್ ಅವರಿಗೆ ದೂರು ಸಲ್ಲಿಸಿದ್ದಾರೆ.
ಕೃತ್ಯ ಎಸಗಿದ ಅಂಗನವಾಡಿ ಸಹಾಯಕಿ ಮೇಲೆ ಶಿಸ್ತು ಕ್ರಮಕೈಗೊಳ್ಳುವಂತೆ ಮೇಲಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಸಿಡಿಪಿಒ ವಿ.ನಾರಾಯಣ ತಿಳಿಸಿದ್ದಾರೆ. ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಚಂದ್ರಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement