ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ ಕರ್ನಾಟಕದಲ್ಲಿನ ಹಿರಿಯ ಸಚಿವರು, ಶಾಸಕರು, ರಾಜಕೀಯ ನಾಯಕರು ಸೇರಿದಂತೆ 48 ಜನರನ್ನು ಹನಿ ಟ್ರ್ಯಾಪ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಲಾಗಿದೆ.
ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ ಖನ್ನಾ ಅವರೆದುರು ಸೋಮವಾರ ಉಲ್ಲೇಖಿಸಲಾಯಿತು. ಪ್ರಕರಣವನ್ನು ನಾಳೆ ಪಟ್ಟಿ ಮಾಡಲಾಗುವುದು ಎಂದು ಅವರು ಹೇಳಿದರು.
ಮಾರ್ಚ್ 20ರಂದು ರಾಜ್ಯ ವಿಧಾನಸಭೆಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಮ್ಮನ್ನು ಹನಿ ಟ್ರ್ಯಾಪ್ಗೆ ಸಿಲುಕಿಸಲು ಸಂಚು ನಡೆದಿತ್ತು ಎಂದು ಆರೋಪಿಸಿದ್ದರು. ಪಕ್ಷಾತೀತವಾಗಿ 47 ಜನರನ್ನು ಗುರಿಯಾಗಿಸಿಕೊಂಡ ಗ್ಯಾಂಗ್ ಒಂದು ತಮಗೂ ಹನಿ ಟ್ರ್ಯಾಪ್ ಮಾಡಲು ಬಲೆ ಬೀಸಿತ್ತು ಎಂದು ಅವರು ದೂರಿದ್ದರು.
ಈ ವಿಷಯ ಬಹಿರಂಗಗೊಂಡಿರುವುದು ರಾಜಕೀಯ ಕೋಲಾಹಲಕ್ಕೆ ಎಡೆಮಾಡಿಕೊಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಏತನ್ಮಧ್ಯೆ, ಹನಿ ಟ್ರ್ಯಾಪ್ ವಿರುದ್ಧ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆದು 18 ಬಿಜೆಪಿ ಶಾಸಕರನ್ನು ಅಮಾನತುಗೊಂಡಿದ್ದರು. ಕೃತ್ಯದ ತನಿಖೆಗೆ ಒತ್ತಾಯ ಕೇಳಿಬಂದಿರುವುದರ ನಡುವೆಯೇ ಸುಪ್ರೀಂ ಕೋರ್ಟ್ಗೆ ಪಿಐಎಲ್ ಸಲ್ಲಿಸುವ ಮೂಲಕ ಪ್ರಕರಣ ನ್ಯಾಯಾಲಯದ ಅಂಗಳ ತಲುಪಿದೆ.
ನಿಮ್ಮ ಕಾಮೆಂಟ್ ಬರೆಯಿರಿ