‘ನಾನು ಪ್ರೀತಿಯಿಂದ ಹೇಳಿದ್ದೇನೆ…ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲ…ನಾನು ಕ್ಷಮೆ ಕೇಳಲ್ಲ’: ‘ತಮಿಳು-ಕನ್ನಡ’ ಹೇಳಿಕೆಗೆ ಕಮಲ ಹಾಸನ್

ತಿರುವನಂತಪುರಂ: ಕನ್ನಡ ಭಾಷೆಯ ಮೂಲದ ಬಗ್ಗೆ ಇತ್ತೀಚೆಗೆ ತಾವು ನೀಡಿದ್ದ ಹೇಳಿಕೆಗಳ ಸುತ್ತಲಿನ ವಿವಾದಕ್ಕೆ ಬುಧವಾರ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಪ್ರತಿಕ್ರಿಯಿಸಿದ್ದಾರೆ. ಹಾಗೂ ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ನಾನು “ಪ್ರೀತಿಯಿಂದ” ಹಾಗೆ ಹೇಳಿದ್ದೇನೆಯೇ ಹೊರತು ಅದರಲ್ಲಿ ಬೇರೆ ಯಾವುದೇ ಅನ್ಯ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.
ಯಾರನ್ನೂ ನೋಯಿಸುವ ಉದ್ದೇಶವನ್ನು ನಾನು ಎಂದಿಗೂ ಹೊಂದಿಲ್ಲ ಮತ್ತು ನಾನು ಪ್ರೀತಿಯಿಂದ ಈ ಮಾತುಗಳನ್ನು ಹೇಳಿದ್ದರಿಂದ ತಮ್ಮ ಮಾತುಗಳಿಗೆ ಬದ್ಧರಾಗಿರುವುದಾಗಿ ಹೇಳಿದ್ದಾರೆ.
ಥಗ್‌ ಲೈಫ್‌ʼ ಜೂ. 5ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ವಿವಿಧ ರಾಜ್ಯಗಳಲ್ಲಿ, ನಗರಗಳಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದೆ. ಅದರಂತೆ ಬುಧವಾರ ಚಿತ್ರತಂಡ ಕೇರಳಕ್ಕೆ ತೆರಳಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್‌ ಹಾಸನ್‌ ಪ್ರೀತಿಯಿಂದ ಹಾಗೆ ಮಾತನಾಡಿದ್ದರಿಂದ ತಮ್ಮ ಹೇಳಿಕೆಗೆ ಕ್ಷಮೆ ಕೋರಲು ನಿರಾಕರಿಸಿದರು.

“ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಹಾಸನ್ ಹೇಳಿದರು. ಅನೇಕ ಇತಿಹಾಸಕಾರರು ನನಗೆ ಭಾಷಾ ಇತಿಹಾಸವನ್ನು ಕಲಿಸಿದ್ದಾರೆ. ನಾನು ಸಾಕಷ್ಟು ಪ್ರೀತಿಯಿಂದಲೇ ಆ ಮಾತನ್ನು ಹೇಳಿದ್ದೆ. ಅದರ ಹೊರತಾಗಿ ಇನ್ಯಾವುದೇ ಉದ್ದೇಶದಿಂದ ನಾನು ಆ ಮಾತನ್ನು ಹೇಳಿಲ್ಲʼʼ ಎಂದು ನುಡಿದಿದ್ದಾರೆ.ನಾನು ಪ್ರೀತಿಯಿಂದ ಹೇಳಿರುವ ಕಾರಣಕ್ಕೆ ಕ್ಷಮೆಯಾಚಿಸುವುದಿಲ್ಲ. ಯಾಕೆಂದರೆ ಪ್ರೀತಿ ಯಾವಾಗಲೂ ಕ್ಷಮೆ ಕೇಳುವುದಿಲ್ಲ” ಎಂದು ಕಮಲ ಹಾಸನ್ ಹೇಳಿದ್ದಾರೆ. “ರಾಜಕಾರಣಿಗಳು ಭಾಷಾ ವಿಷಯಗಳ ಬಗ್ಗೆ ಮಾತನಾಡಲು ಅರ್ಹರಲ್ಲ, ಮತ್ತು ಅದರಲ್ಲಿ ನಾನು ಕೂಡ ಸೇರಿದ್ದೇನೆ ಎಂದು ಹೇಳಿದ್ದಾರೆ.
ತಮಿಳುನಾಡು ರಾಜ್ಯವು ಒಳಗೊಳ್ಳುವಿಕೆಯ ದೀರ್ಘ ಇತಿಹಾಸವನ್ನು ಹೊಂದಿದೆ ಎಂದು ಅವರು ಹೇಳಿದರು. ” ತಮಿಳುನಾಡಿನಲ್ಲಿ ಮೆನನ್ ಮುಖ್ಯಮಂತ್ರಿಯಾಗಿದ್ದರು, ರೆಡ್ಡಿ ಮುಖ್ಯಮಂತ್ರಿಯಾಗಿದ್ದರಯ ಮತ್ತು ಕನ್ನಡಿಗರು ಕೂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿರುವ ಅಪರೂಪದ ರಾಜ್ಯ ಇದು ಎಂದು ಹೇಳಿದರು.

ಪ್ರೀತಿ ಪೂರ್ವಕವಾಗಿ ನಾನು ನೀಡಿದ ಹೇಳಿಕೆಯನ್ನು ಟೀಕೆ ಮಾಡಲಾಗಿದೆ. ಅವರ ಕೋನದಿಂದ ನೋಡಿದರೆ ಅವರು ಹೇಳಿದ್ದು ಸರಿ ಎನಿಸಬಹುದು, ನನ್ನ ದೃಷ್ಟಿಕೋನದಿಂದ ನೋಡಿದರೆ ನಾನು ಹೇಳಿದ್ದು ಸರಿ ಎನಿಸಬಹುದು. ಆದರೆ ಇದಕ್ಕೆ ಮೂರನೇ ಕೋನವೊಂದಿದೆ. ಇತಿಹಾಸತಜ್ಞರು, ಭಾಷಾ ಪಂಡಿತರು ಯಾವುದು ಸರಿ ಎನ್ನುವುದನ್ನು ಹೇಳಬೇಕು. ಇದು ಪ್ರಜಾಪ್ರಭುತ್ವ ರಾಷ್ಟ್ರ. ಈಗ ನಾನು ನೀಡಿರುವುದು ಸ್ಪಷ್ಟನೆ. ಕ್ಷಮೆ ಅಲ್ಲ. ಪ್ರೀತಿ ಎಂದಿಗೂ ಕ್ಷಮೆ ಕೇಳುವುದಿಲ್ಲʼʼ ಎಂದು ಹೇಳಿದ್ದಾರೆ.
ಚೆನ್ನೈನಲ್ಲಿ ಕಠಿಣ ಸಮಯದಲ್ಲಿದ್ದಾಗ ಕರ್ನಾಟಕದಿಂದ ಪಡೆದ ಬೆಂಬಲವನ್ನು ಅವರು ನೆನಪಿಸಿಕೊಂಡರು. “ಚೆನ್ನೈನಲ್ಲಿ ನಾನು ಸಮಸ್ಯೆಗಳನ್ನು ಎದುರಿಸಿದಾಗ ಕರ್ನಾಟಕ ನನ್ನೊಂದಿಗೆ ನಿಂತಿತು” ಎಂದು ಅವರು ಹೇಳಿದರು.
ಚೆನ್ನೈನಲ್ಲಿ ನಡೆದ ಕಮಲ್ ಹಾಸನ್ ಅವರ ಮುಂಬರುವ ಚಿತ್ರ ಥಗ್ ಲೈಫ್‌ನ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ವಿವಾದ ಪ್ರಾರಂಭವಾಯಿತು, ಅಲ್ಲಿ ನಟ “ತಮಿಳು ಕನ್ನಡಕ್ಕೆ ಜನ್ಮ ನೀಡಿತು” ಎಂದು ಹೇಳಿದ್ದರು.
ಕಮಲ ಹಾಸನ್‌ ಹೇಳಿಕೆಗಳು ಕರ್ನಾಟಕದ ಕನ್ನಡ ಪರ ಸಂಘಟನೆಗಳು ಸೇರಿದಂತೆ ಅನೇಕರಿಂದ ತೀವ್ರ ಟೀಕೆಗೆ ಗುರಿಯಾಗಿದೆ. ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಕರ್ನಾಟಕದಲ್ಲಿ ಅವರ ಬಿಡುಗಡೆಯಾಗಲಿರುವ ಥಗ್‌ ಲೈಪ್‌ ಸಿನೆಮಾ ಬ್ಯಾನ್‌ ಮಾಡುವಂತೆ ಒತ್ತಾಯಿಸಲಾಗುತ್ತಿದೆ.

ಪ್ರಮುಖ ಸುದ್ದಿ :-   ಹಳೆ ಪಿಂಚಣಿ ಯೋಜನೆ ಬೇಕೆನ್ನುವ ಸರ್ಕಾರಿ ನೌಕರರಿಗೆ ಒಳ್ಳೆಯ ಸುದ್ದಿ ; ರಾಜ್ಯ ಸರ್ಕಾರದಿಂದ ಒಪಿಎಸ್‌ ಪ್ರಸ್ತಾವನೆ ಪರಿಶೀಲನೆಗೆ 3 ತಂಡ ರಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement