ಬಹುಮುಖ ಪ್ರತಿಭೆಯ ಪತ್ರಕರ್ತ-ಬರಹಗಾರ ಅರುಣಕುಮಾರ ಹಬ್ಬು ; ಜೂನ್‌ 29ಕ್ಕೆ ʼಬೊಗಸೆ ನೀರುʼ ಆತ್ಮಕಥನ ಲೋಕಾರ್ಪಣೆ

(29-06-2025ರಂದು 11:00 ಗಂಟೆಗೆ ಹುಬ್ಬಳ್ಳಿ ನಗರದ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಪತ್ರಕರ್ತ ಅರುಣಕುಮಾರ ಹಬ್ಬು ಅವರ 368 ಪುಟಗಳ ʼಬೊಗಸೆ ನೀರುʼ ಆತ್ಮಕಥನ ಲೋಕಾರ್ಪಣೆಗೊಳ್ಳಲಿದೆ, ಈ ನಿಮಿತ್ತ ಲೇಖನ)
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗವು ಜನಸಾಮಾನ್ಯರಿಗೆ ದೇಶ- ವಿದೇಶಗಳಲ್ಲಿ ಆಗು-ಹೋಗುವ ಘಟನೆಗಳ ಮಾಹಿತಿಯನ್ನು ನೀಡುತ್ತದೆ. ಈ ರೀತಿಯ ಮಾಹಿತಿಗಳನ್ನು ಅಚ್ಚುಕಟ್ಟಾಗಿ ಶಬ್ದರೂಪದಲ್ಲಿ ಕಟ್ಟಿಕೊಡುವ ಪತ್ರಕರ್ತರ ಸಂಖ್ಯೆ ವಿರಳ. ಅಂತಹ ಸವ್ಯಸಾಚಿ ಪತ್ರಕರ್ತರಲ್ಲಿ ಅರುಣಕುಮಾರ ಹಬ್ಬು ಕೂಡ ಒಬ್ಬರು.
76 ವರ್ಷದ (ಜನನ: 4-5-1949) ಅರುಣಕುಮಾರ ಹಬ್ಬು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕಡಲ ತಡಿಯ ಕಾರವಾರದವರು. ಅವರು ಕರ್ಮಭೂಮಿಯನ್ನಾಗಿ ಮಾಡಿಕೊಂಡಿದ್ದು ಹುಬ್ಬಳ್ಳಿಯನ್ನು. ಶಾನುಭೋಗರಾಗಿದ್ದ ತಂದೆ ಸಗುಣ ಹಬ್ಬು ಅವರ ಬಡ ಕುಟುಂಬದಲ್ಲಿ ಐದನೆಯವರಾಗಿ ಜನಿಸಿದ ಅರುಣಕುಮಾರ ತಮ್ಮ ಸ್ವಂತ ಬಲದಿಂದ ಮೇಲೆದ್ದು ಬಂದವರು. ತಂದೆಯವರು ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡಲಾಗದೆ ಕೊನೆಯುಸಿರೆಳೆದಾಗ ಎಲ್ಲ ಆರು ಗಂಡುಮಕ್ಕಳು ವಸ್ತುಶಃ ಅನಾಥರಾಗಿದ್ದರು. ಆದರೆ ಸುತ್ತಲಿನ ಸಮಾಜದ ಸಹಕಾರ ಹಾಗೂ ಸ್ವಂತ ಪರಿಶ್ರಮದಿಂದ ಆರು ಸಹೋದರರು ಉನ್ನತ ಶಿಕ್ಷಣ ಪಡೆದು ಇಂದು ಎತ್ತರಕ್ಕೆ ಏರಿದ್ದಾರೆ.
ಅರುಣಕುಮಾರ ಹಬ್ಬು ಅವರ ಹಿರಿಯ ಸಹೋದರ ಸುಭಾಶ್ಚಂದ್ರ ಅವರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನಾಲ್ಕು ದಶಕಗಳವರೆಗೆ ಕಾರ್ನಿರ್ವಹಿಸಿ ನಿವೃತ್ತರಾಗಿದ್ದರು. ಅವರು ಇಂದು ಕಾಲವಾಗಿದ್ದಾರೆ. ಮೋಹನ ಹಬ್ಬು ಅಂಕೋಲಾ ಕಾಲೇಜಿನ ಪ್ರಾಚಾರ‍್ಯರಾಗಿ ನಿವೃತ್ತರಾಗಿದ್ದಾರೆ. ಇವರು ಸಾಹಿತಿಯಾಗಿಯೂ ಖ್ಯಾತರಾಗಿದ್ದಾರೆ. ಇನ್ನೊಬ್ಬ ಸೋದರ ರಾಮಚಂದ್ರ ಅವರು ಕಾರವಾರದ ಕಾಲೇಜಿನ ಪ್ರಾಚಾರ‍್ಯರಾಗಿ ನಿವೃತ್ತರಾಗಿದ್ದಾರೆ, ಉದಯಕುಮಾರ ಅವರು ದಕ್ಷಿಣ ಕನ್ನಡದ ಮುಂಡ್ಕೂರಿನ ಕಾಲೇಜಿನ ಪ್ರಾಚಾರ‍್ಯರಾಗಿ ನಿವೃತ್ತರಾಗಿದ್ದಾರೆ. ಅವರ ಕುಟುಂಬದ ಕೊನೆಯವರಾದ ಜಯಪ್ರಕಾಶ ಕೃಷಿ ಹಾಗೂ ಉದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿ ಶಿರಸಿ ಸಮೀಪ ವಾಸಿಸುತ್ತಿದ್ದಾರೆ. ಇವರೆಲ್ಲರ ಒಂದು ವಿಶೇಷವೆಂದರೆ ಎಲ್ಲರೂ ಬರಹಗಾರರು. ಇವರ ತಂದೆಯವರ ‘ಅನಾಮಿಕನ ಉಲುಹು’ ಎಂಬ ಕೃತಿಯೂ ಪ್ರಕಟವಾಗಿದೆ. ಆದ್ದರಿಂದ ಹಬ್ಬು ಕುಟುಂಬ ಈ ಸಾಧನೆಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ.
ಅರುಣಕುಮಾರ ಹಬ್ಬು ಅವರು ಪ್ರೌಢಶಿಕ್ಷಣವನ್ನು ಯಲ್ಲಾಪುರ ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ಪೂರೈಸಿ, ಪದವಿ ಪೂರ್ವ ಶಿಕ್ಷಣವನ್ನು ಧಾರವಾಡದ ಜೆ.ಎಸ್.ಎಸ್. ಮಹಾವಿದ್ಯಾಲಯದಲ್ಲಿ ಪೂರೈಸಿದರು. ನಂತರ ಸ್ನಾತಕ ಪದವಿಯನ್ನು ಕರ್ನಾಟಕ ಮಹಾವಿದ್ಯಾಲಯ ಧಾರವಾಡದಿಂದ ಪಡೆದರು. ಕರ್ನಾಟಕ ವಿಶ್ವವಿದ್ಯಾಲಯದಿಂದ 1972ರಲ್ಲಿ ಎಂ.ಎ. (ಇಂಗ್ಲಿಷ್) ಸ್ನಾತಕೋತ್ತರ ಪದವಿ ಪಡೆದರು. ತರುವಾಯ ಮಹಾರಾಷ್ಟ್ರದ ಕೊಲ್ಲಾಪುರಕ್ಕೆ ತೆರಳಿ ಅಲ್ಲಿನ ಶಿವಾಜಿ ವಿಶ್ವವಿದ್ಯಾಲಯದಿಂದ ರಾಜಕೀಯ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು.
ಮುಂದೆ 1972ರಿಂದ 1978ರ ವರೆಗೆ ಕಾರವಾರದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಮತ್ತು 1978ರಿಂದ 1984ರ ವರೆಗೆ ದಿವೇಕರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಪತ್ರಿಕಾರಂಗದತ್ತ ಆಕರ್ಷಿತರಾದ ಇವರು ಉಪನ್ಯಾಸಕ ಹುದ್ದೆಯಲ್ಲಿರುವಾಗಲೇ 1978ರಿಂದ 1984ರ ವರೆಗೆ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಉತ್ತರ ಕನ್ನಡ ಜಿಲ್ಲೆಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತ ಪತ್ರಿಕಾರಂಗ ಪ್ರವೇಶಿಸಿದರು. ನಂತರ ಅವರು ಬೆಂಗಳೂರಿಗೆ ವರ್ಗಾವಣೆಗೊಂಡು 1984ರಿಂದ 1988ರ ವರೆಗೆ ಬೆಂಗಳೂರು ಆವೃತ್ತಿಯ ಪ್ರಜಾವಾಣಿ ಉಪಸಂಪಾದಕ/ ವರದಿಗಾರರಾಗಿ ಕೆಲಸ ಮಾಡಿದರು.
1988ರಿಂದ 1995ರವರೆಗೆ ಬೀದರ ಜಿಲ್ಲೆಯ ಪ್ರಜಾವಾಣಿ ಹಿರಿಯ ವರದಿಗಾರರಾಗಿ ಕೆಲಸ ಮಾಡಿದ್ದಾರೆ. 1995ರಿಂದ 2000ದ ವರೆಗೆ ಹುಬ್ಬಳ್ಳಿಯಲ್ಲಿ ಪ್ರಜಾವಾಣಿ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದರು. 2000ದಿಂದ ಉದಯವಾಣಿ ಪತ್ರಿಕೆಗೆ ಮುಖ್ಯ ವರದಿಗಾರ ಮತ್ತು ಬ್ಯುರೋ ಮುಖ್ಯಸ್ಥರಾಗಿ ಸೇರಿ 2008ರವರೆಗೆ ಕಾರ್ಯನಿರ್ವಹಿಸಿದ್ದಾರೆ. 2009ರಲ್ಲಿ ಯುಎನ್‌ಐ ಸುದ್ದಿ ಸಂಸ್ಥೆಗೆ ಸೇರಿ 2023ರ ವರೆಗೆ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಹಲವಾರು ಜನಪರ, ಸಾಮಾಜಿಕ ಅಭಿವೃದ್ಧಿಪರ ಲೇಖನಗಳನ್ನು ಬರೆದು ಹೆಸರು ಗಳಿಸಿದ್ದಾರೆ. ಸುಧಾ ಮತ್ತು ತರಂಗ ವಾರಪತ್ರಿಕೆಗಳಲ್ಲಿ ಅವರ ಸಾಕಷ್ಟು ಲೇಖನಗಳು ಪ್ರಕಟವಾಗಿವೆ.
ಹುಬ್ಬಳ್ಳಿಯ ಕೆಎಲ್‌ಇ ಸಂಸ್ಥೆಯ ಶ್ರೀ ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಮಹಿಳಾ ವಿದ್ಯಾಪೀಠದ ಮಹಾವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸಗಳನ್ನು ನೀಡಿದ್ದಾರೆ.
ಪತ್ರಿಕಾರಂಗದಲ್ಲಿ ತಮ್ಮ ಸೇವಾ ಕಾಲದಲ್ಲಿ ತಾವು ಕಣ್ಣಾರೆ ಕಂಡ ಹಲವಾರು ಜ್ವಲಂತ ಸಮಸ್ಯೆ ಹಾಗೂ ಅನೇಕಾನೇಕ ಜನಪರ ಹೋರಾಟಗಳ ಕುರಿತಾಗಿ ವರದಿ ಮಾಡಿ, ಅವುಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಶ್ರಮಿಸಿದ್ದಾರೆ. ಶಿಕ್ಷಣ, ವಾಣಿಜ್ಯ, ಕೈಗಾರಿಕೆ, ಪ್ರವಾಸೋದ್ಯಮ, ಕಲೆ, ಸಾಹಿತ್ಯ, ಸಂಸ್ಕೃತಿ, ಗಡಿನಾಡ ಸಮಸ್ಯೆಗಳು, ಇತಿಹಾಸ ಮುಂತಾದ ವಿಷಯಗಳ ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ.
ಅರುಣಕುಮಾರ ಹಬ್ಬು ಉತ್ತಮ ಸಾಹಿತಿಗಳು ಹಾಗೂ ಅನುವಾದಕರೂ ಹೌದು. ಈವರೆಗೆ ಅವರು 11 ಕೃತಿಗಳು ಪ್ರಕಟವಾಗಿವೆ. `ನೀವು ಉತ್ತಮ ಸಂದರ್ಶಕರಾಗಬಯಸುವಿರಾ?’, `ಸುದ್ದಿ: ಜಗದಗಲ ಮುಗಿಲಗಲ’ ‘ದೃಷ್ಟಿ-ಸೃಷ್ಟಿ’, `ಮಹಿಳೆ ಮತ್ತು ಮಾಧ್ಯಮ’ ಕೃತಿಗಳನ್ನು ರಚಿಸಿದ್ದಾರೆ. ದಾರಾ ಶಿಕೋಹ್ ಎಂಬ ಇಂಗ್ಲಿಷ್ ಕಾದಂಬರಿ, ಸಾಹಿತಿ ಗೋಪಾಲಕೃಷ್ಣ ನಾಯಕರ ಜೀವನ ಚರಿತ್ರೆ, ಮಾಯಿ ಎಂಬ ಅನುವಾದ ಕೃತಿ, ಬುದ್ಧನ ತ್ರಿಪಿಟಕದ ಅಂಗುತ್ತರ ನಿಕಾಯದ ಆರು ನೂರು ಪುಟಗಳ ಕನ್ನಡಾನುವಾದ ಕೃತಿಗಳು ಅವರ ಅನುವಾದ ಮಾಡಿದ ಕೃತಿಗಳು. ವ್ಯಾಪಕ ಓದು, ನಿರಂತರ ಬರವಣಿಗೆ ಮತ್ತು ಜನಸಂಪರ್ಕದಿಂದಾಗಿ ಕೃತಿಗಳನ್ನು ರಚಿಸಲು ಸಾಧ್ಯವಾಗಿದೆ ಎಂದು ಹಬ್ಬು ಅವರು ಸೌಜನ್ಯದಿಂದಲೇ ಹೇಳುತ್ತಾರೆ.
46 ವರ್ಷಗಳ ಪತ್ರಿಕೋದ್ಯಮ ಸೇವೆಗೆ ಹಲವಾರು ಪ್ರಶಸ್ತಿಗಳು, ಸಮ್ಮಾನಗಳು ಅವರನ್ನು ಅರಸಿ ಬಂದಿವೆ. ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಜೀವಮಾನದ ಸಾಧನೆಗಾಗಿ ಪ್ರಶಸ್ತಿ, ಜಿ.ಆರ್. ಪಾಂಡೇಶ್ವರ ಪ್ರಶಸ್ತಿ, ಹುಬ್ಬಳ್ಳಿ- ಧಾರವಾಡ ಮಹಾನಗರದ ಧೀಮಂತ ನಾಗರಿಕ ಪ್ರಶಸ್ತಿ, ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಾಧನಾ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಡಾ.ಎಂ.ಎಂ ಕಲಬುರ್ಗಿ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಅನೇಕ ಸಂಘ- ಸಂಸ್ಥೆಗಳು ಅವರನ್ನು ಸಮ್ಮಾನಿಸಿವೆ.
ಅರುಣಕುಮಾರ ಹಬ್ಬು ಅವರು ಪತ್ರಿಕೋದ್ಯಮದ ಕಾರ್ಯಾಗಾರಗಳನ್ನು, ಸಮ್ಮೇಳನಗಳನ್ನು ಆಯೋಜಿಸಿದ್ದಾರೆ. ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶನ ಮಾಡಿದ ಶ್ರೇಯಸ್ಸು ಅವರದ್ದು. ಹುಬ್ಬಳ್ಳಿ-ಧಾರವಾಡ ಮಹಾನಗರದ ಹವ್ಯಕ ಸಮಾಜದ ಕ್ರೀಯಾಶೀಲ ಪದಾಧಿಕಾರಿಗಳಾಗಿದ್ದಾರಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತು ಮುಂತಾದ ಸಂಘ ಸಂಸ್ಥೆಗಳ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವೃತ್ತಿಗೌರವವನ್ನು ಕಾಯ್ದುಕೊಂಡು ಹೋಗುವ ವರ್ಗಕ್ಕೆ ಸೇರಿದ ವ್ಯಕ್ತಿಗಳಲ್ಲಿ ಅರುಣಕುಮಾರ ಹಬ್ಬು ಸಹ ಒಬ್ಬರು ಎಂದು ಹಿರಿಯ ಪತ್ರಕರ್ತರಾಗಿದ್ದ ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದ್ದಾರೆ. ಮಾಹಿತಿ ಮತ್ತು ಜ್ಞಾನ ಒದಗಿಸುವಲ್ಲಿ ಅರುಣಕುಮಾರ ಹಬ್ಬು ಅವರ ಕೃತಿಗಳು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವರದಾನವಾಗಿವೆ ಎನ್ನುತ್ತಾರೆ ಹುಬ್ಬಳ್ಳಿಯ ಆನಂದ ಚೇತನ ಸಂಸ್ಥೆಯ ಪ್ರಕಾಶಕರಾದ ಶಿವಯೋಗಿ ಮದನಬಾವಿ ಅವರು.
“ಪತ್ರಕರ್ತ ಪೂರ್ಣ ಚೈತನ್ಯದಿಂದ ಕೂಡಿರಬೇಕು. ಸತ್ಯವನ್ನು ಹೊರಗೆಳೆಯಲು ಬಲ್ಲವನಾಗಿರಬೇಕು. ಅಗತ್ಯವಾದರೆ ತ್ವರೆಯಿಂದ ನುಗ್ಗಬೇಕು. ಸಾಮಾಜಿಕ ಹೊಣೆಗಾರಿಕೆ ಪತ್ರಕರ್ತರ ಮೇಲಿದೆ” ಎಂಬ ಖ್ಯಾತ ಪತ್ರಕರ್ತ ಎಂ.ವಿ. ಕಾಮತ್ ಅವರ ನುಡಿಗಳನ್ನು ಪಾಲಿಸುತ್ತಾ ಬಂದವರು.
ವಾರ್ತಾಧಿಕಾರಿಗಳಾದ ಪಿ.ಎಸ್. ಪರ್ವತಿ, ಪಿ.ಎಸ್. ಹಿರೇಮಠ ಮತ್ತು ಸ್ನೇಹಿತರಾದ ಮನೋಹರ ಪರ್ವತಿ, ಪತ್ನಿ ಸುಮಾ, ಪುತ್ರ ಗಿರೀಶ, ಮಗಳು ಗೀತಾ ಹಾಗೂ ಸೊಸೆ ಲಾವಣ್ಯ, ಮೊಮ್ಮಕ್ಕಳಾದ ಧ್ರುವ, ಅನ್ವಿತ್ ಹಾಗೂ ಸಿದ್ಧಾಂತ ಅವರ ಸಹಕಾರವನ್ನು ಸದಾ ಸ್ಮರಿಸುತ್ತಾರೆ.
-ಡಾ. ಬಿ. ಎಸ್. ಮಾಳವಾಡ ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ.

ಪ್ರಮುಖ ಸುದ್ದಿ :-   ನೌಕರರ ಭವಿಷ್ಯ ನಿಧಿ : ಹೈಯರ್ ಪೆನ್ಷನ್ ಸಮಸ್ಯೆಗೆ ಶೀಘ್ರ ಪರಿಹಾರ ; ಸಚಿವೆ ಶೋಭಾ ಕರಂದ್ಲಾಜೆ ಭರವಸೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement