ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

ಉಡುಪಿ : ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ಬುಧವಾರ ಕೊಲ್ಲೂರಿನ ಶ್ರೀ ಮೂಕಾಂಬಿಕೆ ದೇವಿಗೆ 4 ಕೋಟಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಬುಧವಾರ (ಸೆ.10) ಹರಕೆಯ ರೂಪದಲ್ಲಿ ಸಮರ್ಪಿಸಿದ್ದಾರೆ.
ಕೊಲ್ಲೂರು ಮೂಕಾಂಬಿಕೆ ಭಕ್ತರಾಗಿರುವ ಇಳಿಯರಾಜ ಅವರು ಕೊಲ್ಲೂರು ದೇವಸ್ಥಾನಕ್ಕೆ ಆಗಾಗ ಬರುತ್ತಿರುತ್ತಾರೆ. ಇದೀಗ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಶ್ರೀ ದೇವಿಗೆ ವಜ್ರ ಕಿರೀಟ ಸಹಿತ ಆಭರಣಗಳು ಹಾಗೂ ವೀರಭದ್ರ ಸ್ವಾಮಿಗೆ ರಜತ ಕಿರೀಟ ಸಹಿತ ಖಡ್ಗ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಹಾಜರಿದ್ದರು. ವಜ್ರ ಖಚಿತ ಕಿರೀಟವನ್ನು ಓಲಗ ಮಂಟಪದಿಂದ ಪುರ ಮೆರವಣಿಗೆಯಲ್ಲಿ ಶ್ರೀದೇವಿ ಸನ್ನಿಧಿಗೆ ತರಲಾಯಿತು. ಈ ಕಾರ್ಯಕ್ರಮದಲ್ಲಿ ಭಕ್ತರು, ಗ್ರಾಮಸ್ಥರು ಭಾಗವಹಿಸಿದ್ದರು.
ಪವಿತ್ರ ವಸ್ತುಗಳನ್ನು ಕೊಲ್ಲೂರು ಓಲಗಂ ಮಂಟಪದಿಂದ ರಥ ಬೀದಿಯ ಮೂಲಕ ಮುಖ್ಯ ದೇವಾಲಯಕ್ಕೆ ಸಾಂಪ್ರದಾಯಿಕ ಗೌರವದೊಂದಿಗೆ ಸಾಗಿಸಲಾಯಿತು. ಪಂಚವಾದ್ಯ ಸಂಗೀತದ ಮೂಲಕ “ಪೂರ್ಣ ಕುಂಭ”ದ ಮೂಲಕ ಮೆರವಣಿಗೆಯಲ್ಲಿ ತರಲಾಯಿತು.

ರೂಢಿಗತ ಪದ್ಧತಿಗಳನ್ನು ಅನುಸರಿಸಿ, ದೇವಾಲಯದ ಪುರೋಹಿತರು ಕಿರೀಟ ಮತ್ತು ಆಭರಣಗಳನ್ನು ದೇವರಿಗೆ ಔಪಚಾರಿಕವಾಗಿ ಅರ್ಪಿಸುವ ಮೊದಲು ಅನೇಕ ಆಚರಣೆಗಳನ್ನು ನಡೆಸಿದರು. ಅವರ ಉದಾರ ಕೊಡುಗೆಯನ್ನು ಗುರುತಿಸಿ ದೇವಾಲಯದ ಆಡಳಿತವು ಇಳಯರಾಜ ಅವರನ್ನು ಗೌರವಿಸಿತು.
ಮೂಕಾಂಬಿಕೆಯ ಪರಮ ಭಕ್ತರಾದ ಇಳಯರಾಜ ಅವರು, ಇದರಲ್ಲಿ ನನ್ನದೇನೂ ಇಲ್ಲ ಎಂದು ಹೇಳಿದ್ದಾರೆ. “ಇದೆಲ್ಲವೂ ದೈವಿಕ ತಾಯಿಯಾದ ಶ್ರೀ ಮೂಕಾಂಬಿಕಾ ಅವರ ಅನುಗ್ರಹ ಮತ್ತು ಆಶೀರ್ವಾದದಿಂದಾಗಿ ಇದು ಆಗಿದೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಇಳಯರಾಜ ಅವರ ಪುತ್ರ ಕಾರ್ತಿಕ್, ಮೊಮ್ಮಗ ಯತೀಶ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ (ತಗ್ಗರ್ಸೆ), ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಶೆಟ್ಟಿ, ಸಹಾಯಕ ಇಒ ತುಂಬಗಿ, ಅರ್ಚಕರಾದ ಶ್ರೀಧರ ಅಡಿಗ,ಗೋವಿಂದ ಅಡಿಗ, ವಿಘ್ನೇಶ್ವರ ಅಡಿಗ, ಎನ್.ಸುಬ್ರಹ್ಮಣ್ಯ ಅಡಿಗ, ಸುರೇಶ ಭಟ್, ಶಿವರಾಮ ಅಡಿಗ, ನರಸಿಂಹ ಭಟ್, ಸುದರ್ಶನ ಜೋಯಿಸರು, ಸಮಿತಿ ಸದಸ್ಯರಾದ ರಘುರಾಮ ದೇವಾಡಿಗ (ಆಲೂರು), ಮಹಾಲಿಂಗ ನಾಯ್ಕ, ಧನಾಕ್ಷಿ ವಿಶ್ವನಾಥ ಪೂಜಾರಿ, ಸುಧಾ ಕೆ.ಬೈಂದೂರು ಮೊದಲಾದವರಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement