ಮುಂಬೈ: ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆಯಾದ ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿದ್ದು, ಬಿಜೆಪಿ ಮತ್ತು ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಮೈತ್ರಿಕೂಟ (ಮಹಾಯುತಿ) ಸ್ಪಷ್ಟ ಬಹುಮತ ಪಡೆಯುವ ಸಾಧ್ಯತೆಯಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಬೃಹನ್ಮುಂಬೈ ಮಹಾನಗರ ಪಾಲಿಕೆ (BMC)ಯ ಒಟ್ಟು 227 ವಾರ್ಡ್ಗಳ ಪೈಕಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ.
ಜೆವಿಸಿ ಬಿಜೆಪಿ ಮೈತ್ರಿಕೂಟಕ್ಕೆ 138 ಸ್ಥಾನಗಳು ಮತ್ತು ಉದ್ಧವ್ ಠಾಕ್ರೆ ಅವರ ಶಿವಸೇನೆ ಮತ್ತು ರಾಜ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಗೆ 59 ಸ್ಥಾನಗಳು ಸಿಗುತ್ತವೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 23 ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಭವಿಷ್ಯ ನುಡಿದಿದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಗಳು ಬಿಜೆಪಿ ಮತ್ತು ಏಕನಾಥ ಶಿಂಧೆ ಶಿವಸೇನೆ 131-151 ಸ್ಥಾನಗಳನ್ನು ಪಡೆಯಲಿದೆ ಮತ್ತು ಸೇನಾ ಯುಬಿಟಿ 58-68 ಸ್ಥಾನಗಳನ್ನು ಪಡೆಯಲಿದೆ ಎಂದು ನಿರೀಕ್ಷಿಸಿದೆ.
ಸಕಾಳ ಪೋಲ್ ಬಿಜೆಪಿ ಮತ್ತು ಸೇನಾ 119 ಸ್ಥಾನಗಳನ್ನು ಮತ್ತು ಯುಬಿಟಿ 75 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 20 ಸ್ಥಾನಗಳಿಗಿಂತ ಹೆಚ್ಚು ಪಡೆಯುವುದಿಲ್ಲ ಎಂದು ಅದರ ಸಮೀಕ್ಷೆ ಹೇಳಿದೆ.
ನಾಲ್ಕನೇ ಮತಗಟ್ಟೆ ಸಮೀಕ್ಷೆ, ಜನಮತ, ಉದ್ಧವ್ ಮತ್ತು ರಾಜ್ ಠಾಕ್ರೆ ನೇತೃತ್ವದ ವಿಪಕ್ಷಗಳ ಮೈತ್ರಿಕೂಟಕ್ಕೆ 62 ಸ್ಥಾನಗಳು ಮತ್ತು ಏಕನಾಥ ಶಿಂಧೆ ಶಿವಸೇನೆ-ಬಿಜೆಪಿ 138 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಕಾಂಗ್ರೆಸ್ 20 ಸ್ಥಾನಗಳನ್ನು ಪಡೆಯಲಿದೆ ಎಂದು ಅದು ಹೇಳಿದೆ.
ಠಾಕ್ರೆ ಸಹೋದರರಿಗೆ ಹಿನ್ನಡೆ
ಸುಮಾರು 20 ವರ್ಷಗಳ ನಂತರ ಒಂದಾದ ಉದ್ಧವ ಠಾಕ್ರೆ ಮತ್ತು ರಾಜ ಠಾಕ್ರೆ ಅವರ ಮೈತ್ರಿ ನಿರೀಕ್ಷಿತ ಫಲ ನೀಡುವಲ್ಲಿ ವಿಫಲವಾಗಿದೆ. ಈ ಮೈತ್ರಿಗೆ ಕೇವಲ 58 ರಿಂದ 68 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಲಾಗಿದೆ.
ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ ಬಹುಜನ ಆಘಾಡಿ (VBA) ಜೊತೆ ಕೈಜೋಡಿಸಿರುವ ಕಾಂಗ್ರೆಸ್ಗೆ 12 ರಿಂದ 20 ಸ್ಥಾನಗಳು ಮಾತ್ರ ಸಿಗುವ ಸಾಧ್ಯತೆಯಿದೆ ಎಂದು ಸಮೀಕ್ಷೆಗಳು ಹೇಳಿವೆ.
ಮರಾಠಿ ಅಸ್ಮಿತೆ ಮತ್ತು ಬದಲಾದ ರಾಜಕೀಯ:
1985 ರಿಂದ (1992-96 ಹೊರತುಪಡಿಸಿ) ಬಿಎಂಸಿಯಲ್ಲಿ ಶಿವಸೇನೆಯೇ ಪ್ರಾಬಲ್ಯ ಸಾಧಿಸಿತ್ತು. ಆದರೆ, ಶಿವಸೇನೆ ಇಭಜನೆಯಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಉದ್ಧವ್ ಠಾಕ್ರೆ ಅವರ ಹಿಡಿತ ಸಡಿಲಗೊಂಡಿರುವುದು ಎಕ್ಸಿಟ್ ಪೋಲ್ಗಳಿಂದ ಸ್ಪಷ್ಟವಾಗುತ್ತಿದೆ. ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಜೋಡಿಯು ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
2017ರ ಚುನಾವಣೆಯಲ್ಲಿ ಶಿವಸೇನೆ 84 ಮತ್ತು ಬಿಜೆಪಿ 82 ಸ್ಥಾನಗಳನ್ನು ಗೆದ್ದಿದ್ದವು. ಆಗ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇತ್ತು. ಆದರೆ ಈ ಬಾರಿ ಉದ್ಧವ್ ಠಾಕ್ರೆ ಅವರು ‘ಮರಾಠಿ ಮಾನುಸ್’ ಭಾವನೆಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಿದರೂ, ಮತದಾರರು ಅಭಿವೃದ್ಧಿಯ ಮಂತ್ರ ಜಪಿಸಿದ ಮಹಾಯುತಿ ಪರ ಒಲವು ತೋರಿದ್ದಾರೆ ಎನ್ನಲಾಗಿದೆ. ಶುಕ್ರವಾರ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ.


ನಿಮ್ಮ ಕಾಮೆಂಟ್ ಬರೆಯಿರಿ