ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲು ಸಾಧ್ಯವಿಲ್ಲ”: ಪ್ರತಿ ಶಾಸಕರಿಗೂ 5 ಟಿಕೆಟ್ ನೀಡಿ ; ಶಾಸಕ ಕಾಶಪ್ಪನವರ ಒತ್ತಾಯ

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳಿಗಾಗಿ ಪ್ರತಿ ಶಾಸಕರಿಗೆ ತಲಾ ಐದು ಟಿಕೆಟ್‌ಗಳನ್ನು ನೀಡಬೇಕು ಎಂದು ಕಾಂಗ್ರೆಸ್ ಶಾಸಕರೊಬ್ಬರು ಒತ್ತಾಯಿಸಿದ್ದಾರೆ.
ಶಾಸಕರು ವಿಐಪಿಗಳಾಗಿದ್ದು, ಅವರು “ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ. ಇದಲ್ಲದೆ, ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕು ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ. 2026ರ ಐಪಿಎಲ್ ಆವೃತ್ತಿಯು ಶನಿವಾರದಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, “ಈ ತಿಂಗಳ 28 ರಿಂದ ಐಪಿಎಲ್ ಪಂದ್ಯಗಳು ಪ್ರಾರಂಭವಾಗುತ್ತಿವೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಶಾಸಕರಿಗೆ, ಸಚಿವರಿಗೆ ಮತ್ತು ಅವರ ಕುಟುಂಬದವರಿಗೆ ಟಿಕೆಟ್ ನೀಡುತ್ತಿಲ್ಲ. ಅವರು ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಭದ್ರತೆ ಸೇರಿದಂತೆ ಎಲ್ಲವನ್ನೂ ಸರ್ಕಾರವೇ ನೀಡುತ್ತಿದೆ. ಆದರೆ ಅವರು ಶಾಸಕರಿಗೆ ಗೌರವ ನೀಡುತ್ತಿಲ್ಲ,” ಎಂದು ಅವರು ಹೇಳಿದ್ದಾರೆ.
ಆನ್‌ಲೈನ್ ಟಿಕೆಟ್ ಮಾರಾಟದಲ್ಲಿ ಕಾಳದಂಧೆ  ನಡೆಯುತ್ತಿದೆ ಎಂದು ಕಾಶಪ್ಪನವರ ಆರೋಪಿಸಿದ್ದಾರೆ. “ಹೀಗಾಗಿ ನಾವು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ವಿಪಕ್ಷದ ನಾಯಕರು ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರು. ನಾನು ಅದನ್ನು ಬೆಂಬಲಿಸಿದೆ ಮತ್ತು ಶಾಸಕರಿಗೆ ಕನಿಷ್ಠ 5 ಟಿಕೆಟ್‌ಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಾವು ಸ್ಪೀಕರ್ ಅವರಿಗೆ ವಿನಂತಿಸಿದ್ದೇವೆ,” ಎಂದರು.
ಶಾಸಕರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಬೇಕೆಂದು ಒತ್ತಾಯಿಸಿದ ಅವರು, “ನಾವು ವಿಐಪಿಗಳು. ನಾವು ಸರದಿ ಸಾಲಿನಲ್ಲಿ ಹೋಗಿ ನಿಲ್ಲಲು ಸಾಧ್ಯವಿಲ್ಲ. ಕಳೆದ ಬಾರಿ ನಾವು ಹೋಗಿದ್ದೆವು, ಆಗ ಸಾಲಿನಲ್ಲಿ ನಿಲ್ಲಬೇಕಾಯಿತು. ಅವರು ನಮ್ಮನ್ನು ಸಾರ್ವಜನಿಕರ ಗ್ಯಾಲರಿಗೆ ಕಳುಹಿಸುತ್ತಿದ್ದಾರೆ. ಇದು ನಡೆಯಬಾರದು,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾಲ್ಕು ಟಿಕೆಟ್‌ಗಳನ್ನು ನೀಡಬೇಕು; ಸ್ಪೀಕರ್‌ ಯು.ಟಿ.ಖಾದರ್‌
ಇದಕ್ಕೂ ಮೊದಲು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಬಿಜೆಪಿ ಮುಖಂಡ ಆರ್. ಅಶೋಕ ಅವರು ಕೆಎಸ್‌ಸಿಎ ವಿರುದ್ಧ ಕಿಡಿಕಾರಿದ್ದರು. “ನಾವು ಅವರಿಗೆ 16.32 ಎಕರೆ ಭೂಮಿಯನ್ನು ತಿಂಗಳಿಗೆ ಕೇವಲ 1,600 ರೂಪಾಯಿಗಳ ಸಾಂಕೇತಿಕ ದರದಲ್ಲಿ ನೀಡಿದ್ದೇವೆ. ಆದರೆ ಅವರು ಪಂದ್ಯದ ಟಿಕೆಟ್‌ಗಳಿಗೆ ನಮ್ಮಿಂದ ಸಾವಿರಾರು ರೂಪಾಯಿ ವಸೂಲಿ ಮಾಡುತ್ತಾರೆ. ಅವರ ಬಳಿ ಕೋಟ್ಯಂತರ ರೂಪಾಯಿ ಇದೆ ಮತ್ತು ಅವರು ನಮ್ಮನ್ನು ಲೂಟಿ ಮಾಡುತ್ತಿದ್ದಾರೆ. ಅಂತಹವರಿಗಾಗಿ ಸರ್ಕಾರ ಮತ್ತೊಂದು ಸ್ಟೇಡಿಯಂ ಕಟ್ಟಲು ಮುಂದಾಗಿದೆ. ಅವರಿಗೆ ತಕ್ಕ ಪಾಠ ಕಲಿಸಬೇಕು,” ಎಂದು ವಿಧಾನಸಭೆಯಲ್ಲಿ ಹೇಳಿದರು.
ಇದಕ್ಕೆ ಸ್ಪಂದಿಸಿದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಅವರು ಸಾಂಸ್ಥಿಕ ಮಧ್ಯಪ್ರವೇಶಕ್ಕೆ ಸಲಹೆ ನೀಡಿದರು. “ಶಾಸಕರು ಎತ್ತುತ್ತಿರುವ ಈ ಸಮಸ್ಯೆಯ ಬಗ್ಗೆ ಸರ್ಕಾರವು ಕೆಎಸ್‌ಸಿಎ ಜೊತೆ ಚರ್ಚೆ ನಡೆಸಬೇಕು. ಅವರು ಕೆಲವೊಮ್ಮೆ ಶಾಸಕರಿಗೆ ಕೇವಲ ಒಂದು ಟಿಕೆಟ್ ನೀಡುತ್ತಾರೆ. ಶಾಸಕರು ಹೋದಾಗ, ಶಾಸಕರು ಮತ್ತು ಅವರ ಕುಟುಂಬಕ್ಕೆ ಕನಿಷ್ಠ ನಾಲ್ಕು ಟಿಕೆಟ್ ನೀಡಬೇಕು ಎಂದು ಅವರಿಗೆ ತಿಳಿಸಬೇಕು,” ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ವಿಷಯವನ್ನು ಕೆಎಸ್‌ಸಿಎ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಸದನಕ್ಕೆ ಭರವಸೆ ನೀಡಿದರು. “ನಾನು ನಿಮ್ಮ ಹೆಸರನ್ನು ಬಳಸಿ, ಸರ್ಕಾರದ ಮೂಲಕ ಕೆಎಸ್‌ಸಿಎ ಅಧ್ಯಕ್ಷರೊಂದಿಗೆ ಮಾತನಾಡಿ ಇದನ್ನು ಬಗೆಹರಿಸುತ್ತೇನೆ. ನಾನು ಕೂಡ ಅಲ್ಲಿ ಸದಸ್ಯನಾಗಿದ್ದೇನೆ. ಕೇಳುವ ಹಕ್ಕು ಶಾಸಕರಿಗೆ ಇದೆ; ಅವರಿಗೆ ಸೌಲಭ್ಯ ಸಿಗಬೇಕು,” ಎಂದರು.
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement