ಬೆಂಗಳೂರು : ಯಕ್ಷಗಾನವು ಭರತಮುನಿಯ ನಾಟ್ಯಶಾಸ್ತ್ರದ ಜೀವಂತ ಪ್ರಯೋಗವಾದುದರಿಂದ ಇದು ಭಾರತೀಯ ಸಾಂಸ್ಕೃತಿಕತೆಯ ಉನ್ನತ ಪ್ರದರ್ಶನವಾಗಿದೆ ಎಂದು ಸಂಶೋಧಕ ಹಾಗೂ ಹಿರಿಯ ಪತ್ರಕರ್ತ ಅಶೋಕ ಹಾಸ್ಯಗಾರ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಕೋರಮಂಗಲದ ಇಂಡಿಯನ್ ಹೆರಿಟೇಜ್ ಅಕಾಡೆಮಿಯು ಮೇ ೮, ೨೦೨೬ ರಂದು ಕಶ್ಯಪ ಸಭಾಂಗಣದಲ್ಲಿ ಏರ್ಪಡಿಸಿದ್ದ “ಭಾರತೀಯ ಸಾಂಸ್ಕೃತಿಕತೆ, ನಾಟ್ಯಶಾಸ್ತ್ರ ಮತ್ತು ಯಕ್ಷಗಾನ” ಎಂಬ ವಿಷಯದ ಮೇಲೆ ಉಪನ್ಯಾಸ ನೀಡಿದರು. ನಾಟ್ಯಶಾಸ್ತ್ರದ ಕುರಿತು ಮಾತನಾಡುವುದೆಂದರೆ, ಅಥವಾ ಯಕ್ಷಗಾನದ ಮೇಲೆ ಮಾತನಾಡುವುದೆಂದರೆ ಅದು ಭಾರತೀಯ ಸಾಂಸ್ಕೃತಿಕತೆಯ ಕುರಿತೇ ಉಪನ್ಯಾಸ ಮಾಡಿದಂತಾಗುತ್ತದೆ ಎಂದು ಹೇಳಿದ ಅವರು, ನಾಟ್ಯಶಾಸ್ತ್ರವು ಭಾರತದಲ್ಲಿರುವ ಎಲ್ಲ ಪ್ರಕಾರದ ಕಲೆಗಳಿಗೆ ಸಂವಿಧಾನ ಮಾತ್ರವಲ್ಲ, ಅತ್ಯಂತ ಪ್ರಾಚೀನ ದಾಖಲೆಯೂ ಹೌದು ಎಂದು ಪ್ರತಿಪಾದಿಸಿದರು.
ನಾಟ್ಯಶಾಸ್ತ್ರದ ಮೂಲಕ ಭಾರತದ ಸಂಗೀತ, ಸಾಹಿತ್ಯ, ನೃತ್ಯ, ನಾಟಕ, ಚಿತ್ರ, ಶಿಲ್ಪ ಎಂಬ ಪ್ರಧಾನ ಕಲಾ ಪ್ರಕಾರಗಳ ಸಂಪನ್ನತೆಯನ್ನು, ಸಮೃದ್ಧತೆಯನ್ನು ತೋರ್ಪಡಿಸುವುದರಿಂದ ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಗೆ ವಿಶ್ವದಲ್ಲಿಯೇ ಅತ್ಯಂತ ಪ್ರಾಚೀನತೆ ಇರುವುದನ್ನು ಗುರುತಿಸಲು ಸಹ ದಾಖಲೆಯಾಗುತ್ತದೆ. ನಾಟ್ಯಶಾಸ್ತ್ರದ ಅಂಗವಾಗಿರದ ಯಾವುದೇ ಜ್ಞಾನ, ಕಲೆ, ಶಿಲ್ಪ, ವಿದ್ಯೆ, ಯೋಗ ಹಾಗೂ ಕರ್ಮವಿಲ್ಲ ಎಂಬುದಾಗಿ ನಾಟ್ಯಶಾಸ್ತ್ರದಲ್ಲಿ ಭರತ ವಾಕ್ಯವೇ ಇದೆ. ಅಂದರೆ ಭಾರತೀಯ ಸಂಪೂರ್ಣ ಸಾಂಸ್ಕೃತಿಕ ವ್ಯವಹಾರವೇ ನಾಟ್ಯಶಾಸ್ತ್ರದಲ್ಲಿ ಹುದುಗಿದೆ ಎಂಬುದಾಗಿ ಇದರ ಧನ್ಯರ್ಥವಾಗಿದೆ. ನಾಟ್ಯಶಾಸ್ತ್ರವು ಸಾಮಾನ್ಯ ಶಕವರ್ಷ ಪೂರ್ವ ೧ನೇ ಶತಮಾನದಿಂದ ಸಾಮಾನ್ಯ ಶಕವರ್ಷ ೨ನೇ ಶತಮಾನದ ಅವಧಿಯಲ್ಲಿ ರಚಿತವಾಗಿದೆಯೆಂದು ಸದ್ಯಕ್ಕೆ ನಿರ್ಣಯಿಸಲಾಗಿದೆ ಎಂದರು.
ಪ್ರಸ್ತುತ ಯಕ್ಷಗಾನವು ನಾಟ್ಯಶಾಸ್ತ್ರದ ಜೀವಂತ ಪ್ರಯೋಗ ಪ್ರದರ್ಶನವಾಗಿರುವುದರಿಂದ ಅದು ಭಾರತೀಯ ಸಾಂಸ್ಕೃತಿಕ ಪರಂಪರೆಯ ವಾರಸುದಾರಿಕೆಯಾಗಿ ಇಂದಿಗೂ ನಮ್ಮ ನಡುವೆ ಉಳಿದುಕೊಂಡಿದೆ. ಆದ್ದರಿಂದ ಭಾರತೀಯ ಸಾಂಸ್ಕೃತಿಕತೆಯನ್ನು ನೋಡಬೇಕೆಂದರೆ, ಯಕ್ಷಗಾನದ ಶುದ್ಧ ಪ್ರಯೋಗವನ್ನು ವೀಕ್ಷಿಸಬೇಕು. ಅದರ ಅಧ್ಯಯನದ ಮೂಲಕ ಭಾರತದ ಎಲ್ಲ ಮಾದರಿಯ ಕಲಾ ಪ್ರಕಾರಗಳನ್ನೂ ಸಹ ತಿಳಿಯಲು ಸಾಧ್ಯವಿದೆ ಎಂದರು.
ನನ್ನ “ದಶರೂಪಕಗಳ ದಶಾವತಾರ” ಗ್ರಂಥವು ನಾಟ್ಯಶಾಸ್ತ್ರ, ಯಕ್ಷಗಾನ ಮತ್ತು ಭಾರತೀಯ ಸಾಂಸ್ಕೃತಿಕತೆಯ ಸಮನ್ವಯ ಕೃತಿಯಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಈ ಹೆರಿಟೇಜ್ ಅಕಾಡೆಮಿಯು ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುವುದರ ಮೂಲಕ ನನ್ನ ಉಪನ್ಯಾಸದ ಅಂತರಾರ್ಥವನ್ನು ಮನದಟ್ಟು ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನಾಟ್ಯಶಾಸ್ತ್ರದ ಅಧ್ಯಾಯಗಳ ಅವಲೋಕನ ಮಾಡಿದರಲ್ಲದೇ ಯಕ್ಷಗಾನ ಪ್ರದರ್ಶನದಲ್ಲಿರುವ ಅವುಗಳ ಅನ್ವಿತಿಯನ್ನು ವಿವರಿಸಿದರು. ಸಾವಿರಾರು ವರ್ಷಗಳ ಅಂತರದಲ್ಲಿ ಕಲೆಯ ಹರಿವು ಹೇಗೆ ಆಯಾಮಗಳನ್ನು ಪಡೆದುಕೊಂಡಿದೆಯೆನ್ನುವುದರ ಬಗ್ಗೆ ಸಹ ಮಾತನಾಡಿದರು.
ಉಪನ್ಯಾಸದ ನಂತರ ಸಂವಾದ ನಡೆಯಿತು. ಆರಂಭದಲ್ಲಿ ಇಂಡಿಯನ್ ಹೆರಿಟೇಜ್ ಅಕಾಡೆಮಿಯ ಮುಖ್ಯಸ್ಥರಾದ ಮಂಜುನಾಥ ಎಸ್.ವಿ. ಸ್ವಾಗತಿಸಿ ಅಕಾಡೆಮಿಯ ಕುರಿತಾದ ಮಾಹಿತಿ ನೀಡಿದರು. ಅಜೀಮ್ ಪ್ರೇಮಜಿ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಹೇರ್ಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಬಳಿಕ ಅಕಾಡೆಮಿಯ ವತಿಯಿಂದ ಅಶೋಕ ಹಾಸ್ಯಗಾರರನ್ನು ಗೌರವಿಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ