ಇಬ್ಬರೂ ವೃತ್ತಿಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ: ರೋಹಿಣಿ ಸಿಂಧೂರಿ–ರೂಪಾ ಜಗಳದ ಕುರಿತು ಸುಪ್ರೀಂ ಕೋರ್ಟ್‌

ನವದೆಹಲಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ನಡುವಿನ ಮಾನನಷ್ಟ ಮೊಕದ್ದಮೆಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಗೆ (Mediation) ಉಲ್ಲೇಖಿಸಿದೆ. ನಿರಂತರ ಕಾನೂನು ಹೋರಾಟದಿಂದ ಇಬ್ಬರೂ ಅಧಿಕಾರಿಗಳು ಪರಸ್ಪರರ ವೃತ್ತಿ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಈ ವಿವಾದವನ್ನು ಮಾತುಕತೆಯ ಮೂಲಕ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಸತೀಶಚಂದ್ರ ಶರ್ಮಾ ಮತ್ತು ಸಂಜೀವ ಸಚದೇವ ಅವರನ್ನೊಳಗೊಂಡ ಪೀಠವು ದೀರ್ಘಾವಧಿಯ ನ್ಯಾಯಾಲಯದ ಪ್ರಕ್ರಿಯೆಗಳಿಗಿಂತ ಮಧ್ಯಸ್ಥಿಕೆಯ ಮೂಲಕವೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ (Mediator) ನೇಮಿಸಿದೆ.
ವಿಚಾರಣೆ ವೇಳೆ ಮೌಖಿಕ ಟಿಪ್ಪಣಿ ಮಾಡಿದ ನ್ಯಾಯಮೂರ್ತಿ ಶರ್ಮಾ ಅವರು, “ಇಬ್ಬರೂ ಅಧಿಕಾರಿಗಳು ಪರಸ್ಪರರ ವೃತ್ತಿಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು. “ಪ್ರಸ್ತುತ ಪ್ರಕರಣದಲ್ಲಿ ಮಧ್ಯಸ್ಥಿಕೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಎಂದು ಈ ನ್ಯಾಯಾಲಯ ಭಾವಿಸುತ್ತದೆ. ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರನ್ನು ಮಧ್ಯಸ್ಥಿಕೆದಾರರನ್ನಾಗಿ ನೇಮಿಸಲಾಗಿದ್ದು, ಉಭಯ ಪಕ್ಷಕಾರರು ಅವರ ಮುಂದೆ ಹಾಜರಾಗಬೇಕಿದೆ. ಮಧ್ಯಂತರ ಪರಿಹಾರವಾಗಿ, ಇಬ್ಬರ ನಡುವೆ ಸದ್ಯ ಬಾಕಿ ಇರುವ ಎರಡೂ ಪ್ರಕರಣಗಳ ಮುಂದಿನ ಎಲ್ಲಾ ಕಾನೂನು ನಡಾವಳಿಗಳಿಗೆ ತಡೆಯಾಜ್ಞೆ ನೀಡಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಹೈಕೋರ್ಟ್ ತೀರ್ಪು:
2023ರಲ್ಲಿ ಇಬ್ಬರು ಅಧಿಕಾರಿಗಳು ಸಾರ್ವಜನಿಕವಾಗಿ ಪರಸ್ಪರರ ವಿರುದ್ಧ ಮಾಡಿದ್ದ ಆರೋಪ-ಪ್ರತ್ಯಾರೋಪಗಳಿಂದ ಈ ವಿವಾದ ಸೃಷ್ಟಿಯಾಗಿತ್ತು. ಇದಾದ ಬಳಿಕ ಇಬ್ಬರೂ ಪರಸ್ಪರ ಮಾನನಷ್ಟ ಮೊಕದ್ದಮೆಗಳನ್ನು ದಾಖಲಿಸಿದ್ದರು. ಡಿ. ರೂಪಾ ಮೌದ್ಗಿಲ್ ಅವರು ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗಷ್ಟೇ ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು. ಮೌದ್ಗಿಲ್ ಅವರ ದೂರಿನ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೈಗೊಂಡಿದ್ದ ಸಂಜ್ಞೇಯತೆಯನ್ನು (Cognizance) ಎತ್ತಿಹಿಡಿದಿದ್ದ ಹೈಕೋರ್ಟ್, ಕೆಳಹಂತದ ನ್ಯಾಯಾಲಯದ ಆದೇಶದಲ್ಲಿ ಸೂಕ್ತ ವಿವೇಚನೆ ಬಳಕೆಯಾಗಿದ್ದು, ಹೈಕೋರ್ಟ್‌ನ ಮಧ್ಯಪ್ರವೇಶದ ಅಗತ್ಯವಿಲ್ಲ ಎಂದು ಹೇಳಿತ್ತು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement