ನವದೆಹಲಿ: ನೀಟ್-ಯುಜಿ (NEET-UG) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಾವರು ರಾಜೀನಾಮೆ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಕಾಕ್ರೋಚ್ ಜನತಾ ಪಾರ್ಟಿ (CJP) ಬ್ಯಾನರ್ ಅಡಿಯಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ತೆರೆ ಎಳೆಯುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ಸಂಬಂಧ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಸಿಜೆಪಿ ಪ್ರತಿನಿಧಿಗಳಾದ ಸೌರವ ದಾಸ್ ಮತ್ತು ಅಶುತೋಷ ರಾಂಕಾ ಅವರ ಜೊತೆ ಸಭೆ ನಡೆಸಿದರು.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ನಡ್ಡಾ, “ಇಂದು (ಸೋಮವಾರ) ಬೆಳಿಗ್ಗೆ ಮೊದಲ ಬಾರಿಗೆ ಪ್ರತಿಭಟನಾಕಾರರ ಕಡೆಯಿಂದ ಸರ್ಕಾರದ ಜೊತೆ ಮಾತುಕತೆ ನಡೆಸುವ ಪ್ರಸ್ತಾಪ ಬಂದಿತ್ತು. ಬೆಳಿಗ್ಗೆ 11:50 ಗಂಟೆಯಿಂದ ಮಾತುಕತೆ ಪ್ರಾರಂಭವಾಗಿದ್ದು, ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಅವರ ನಿಯೋಗದ ಜೊತೆ ಆರಂಭಿಕ ಹಂತದ ಸುದೀರ್ಘ ಮೌಖಿಕ ಚರ್ಚೆ ನಡೆಸಲಾಯಿತು. ಬಳಿಕ ಮಧ್ಯಾಹ್ನ 4 ಗಂಟೆ ಸುಮಾರಿಗೆ ಅವರು ತಮ್ಮ ಲಿಖಿತ ಮನವಿಯನ್ನು ನನಗೆ ಸಲ್ಲಿಸಿದರು” ಎಂದು ತಿಳಿಸಿದ್ದಾರೆ.
“ಎಲ್ಲ ಪ್ರತಿಭಟನಾಕಾರರು ತಮ್ಮ ಧರಣಿಯನ್ನು ಅಂತ್ಯಗೊಳಿಸಿ, ನಗರದಲ್ಲಿ ಸಾಮಾನ್ಯ ಸ್ಥಿತಿ ಮರುಸ್ಥಾಪನೆಗೊಳ್ಳಲು ಆಡಳಿತಕ್ಕೆ ಸಹಕರಿಸಬೇಕು ಎಂದು ನಾನು ಮನವಿ ಮಾಡಿದ್ದೇನೆ” ಎಂದು ನಡ್ಡಾ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕೂಡ ಪ್ರತಿಭಟನಾಕಾರರಿಗೆ ಶಾಂತಿ ಕಾಪಾಡುವಂತೆ, ಸಂಯಮದಿಂದ ವರ್ತಿಸುವಂತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಯಾವುದೇ ಸಾಮಾಜಿಕ ವೇದಿಕೆಯಲ್ಲಿ ಹರಡುವ ವದಂತಿಗಳು, ತಪ್ಪು ಮಾಹಿತಿ ಅಥವಾ ಪರಿಶೀಲಿಸದ ಮಾಹಿತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಸಿಜೆಪಿ ವಕ್ತಾರ ಸೌರವ್ ದಾಸ್ ಕೂಡ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿ, ತಾನು ಹಾಗೂ ಮತ್ತೋರ್ವ ವಕ್ತಾರ ಅಶುತೋಷ ರಾಂಕಾ ಅವರು ನಡ್ಡಾ ಅವರ ನಿವಾಸದಲ್ಲಿ ಸುಮಾರು 10 ನಿಮಿಷಗಳ ಕಾಲ ಭೇಟಿಯಾಗಿ ಬೇಡಿಕೆಗಳ ಪತ್ರವನ್ನು ಸಲ್ಲಿಸಿದ್ದಾಗಿ ತಿಳಿಸಿದ್ದಾರೆ. “ನಾವು ನಮ್ಮ ಬೇಡಿಕೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿದ್ದೇವೆ. ಸಚಿವರು ಈ ವಿಷಯವನ್ನು ಆಂತರಿಕ ಮಟ್ಟದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಆ ಪ್ರಕ್ರಿಯೆ ನಡೆಯುತ್ತಿದೆ,” ಎಂದು ದಾಸ್ ಹೇಳಿದ್ದಾರೆ.
“ಸಚಿವರು ಈ ವಿಷಯವನ್ನು ಸೂಕ್ತ ಮಟ್ಟದಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ. ಆದರೆ ಇದುವರೆಗೆ ಯಾವುದೇ ಸ್ಪಷ್ಟ ಭರವಸೆ ಅಥವಾ ಬದ್ಧತೆಯನ್ನು ನೀಡಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಶಾಂತಿಯುತ ಪ್ರತಿಭಟನೆ ಮುಂದುವರಿಯಲಿದೆ” ಎಂದು ಅವರು ತಿಳಿಸಿದ್ದಾರೆ. ತಮ್ಮ ಬೇಡಿಕೆಗಳ ಪತ್ರದ ಪ್ರತಿಯನ್ನೂ ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಸಿಜೆಪಿ ಸಲ್ಲಿಸಿರುವ ಪತ್ರದಲ್ಲಿ, “ನೀಟ್ 2026 ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಹಲವು ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ, ಇತ್ತೀಚಿನ ಸಿಬಿಎಸ್ಇ 12ನೇ ತರಗತಿ ಪೋರ್ಟಲ್ ಗೊಂದಲ ಹಾಗೂ ಸಿಯುಇಟಿ (CUET) ಪರೀಕ್ಷೆ ವಿಳಂಬ ಸೇರಿದಂತೆ ಹಲವು ಪರೀಕ್ಷಾ ಅವ್ಯವಸ್ಥೆಗಳಿಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ನೇರ ಹೊಣೆಗಾರರು” ಎಂದು ಆರೋಪಿಸಲಾಗಿದೆ.
ಇದಲ್ಲದೆ, “ಈವರೆಗೆ ಯಾವುದೇ ವ್ಯವಸ್ಥಾತ್ಮಕ ಸುಧಾರಣೆ ಅಥವಾ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಶಿಕ್ಷಣ ಸಚಿವರಾಗಿ ಅವರ ತೀವ್ರ ಅಸಮರ್ಥತೆಯನ್ನು ತೋರಿಸುತ್ತದೆ” ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇದಕ್ಕೂ ಮೊದಲು, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ನೂರಾರು ಮಂದಿ ದೆಹಲಿಯ ಅತ್ಯಂತ ಭದ್ರತಾ ವಲಯವಾದ ಕೇಂದ್ರ ದೆಹಲಿ ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು.
https://x.com/SauravDassss/status/2079155844982432196/photo/1?ref_src=twsrc%5Etfw%7Ctwcamp%5Etweetembed%7Ctwterm%5E2079155844982432196%7Ctwgr%5E5a4de36de3c4c1ad1345e8e5f3f5569024ff55b3%7Ctwcon%5Es1_&ref_url=https%3A%2F%2Fwww.ndtv.com%2Findia-news%2Fcjp-protest-end-sit-in-centres-appeal-after-cordial-meeting-with-cjp-leaders-11796059
ಪ್ರತಿಭಟನಾಕಾರರು ಸಂಸತ್ ಭವನದತ್ತ ಮೆರವಣಿಗೆ ನಡೆಸಲು ಯತ್ನಿಸಿದ ವೇಳೆ, ಪೊಲೀಸರು ಮಧ್ಯಪ್ರವೇಶಿಸಿದರು. ಭಾನುವಾರದಿಂದಲೇ ಆ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ದೊಡ್ಡ ಪ್ರಮಾಣದ ಜನಸಮೂಹ ಸೇರುವುದಕ್ಕೆ ನಿರ್ಬಂಧ ವಿಧಿಸಲಾಗಿತ್ತು.
ಇದೇ ವೇಳೆ, ಜಂತರ್ ಮಂತರ್ ಪ್ರದೇಶದಿಂದ ಪ್ರತಿಭಟನಾಕಾರರನ್ನು ಬಲವಂತವಾಗಿ ತೆರವುಗೊಳಿಸಲಾಗಿದೆ ಎಂಬ ವರದಿಗಳು ಸುಳ್ಳು ಎಂದು ಮೂಲಗಳು ಸ್ಪಷ್ಟಪಡಿಸಿವೆ. ಯಾವುದೇ ಬಲಪ್ರಯೋಗದ ತೆರವು ಕಾರ್ಯಾಚರಣೆ ನಡೆದಿಲ್ಲ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ವಿಡಂಬನೆಯ (Political Satire) ರೂಪದಲ್ಲಿ ಮೊದಲು ಕಾಣಿಸಿಕೊಂಡಿದ್ದ ʼಕಾಕ್ರೋಚ್ ಜನತಾ ಪಾರ್ಟಿ (CJP)ಯನ್ನು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ (Public Relations) ಪದವಿ ಪಡೆದ ಅಭಿಜೀತ ದಿಪ್ಕೆ ಸ್ಥಾಪಿಸಿದ್ದಾರೆ. ಅವರು ಈ ಹಿಂದೆ ಆಮ್ ಆದ್ಮಿ ಪಕ್ಷದ (AAP) ಸಾಮಾಜಿಕ ಜಾಲತಾಣ ತಂಡದಲ್ಲಿ ಕೆಲಸ ಮಾಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ