ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA) ಗುರುವಾರ ಕರ್ನಾಟಕದ ಆಕ್ಷೇಪವನ್ನು ತಳ್ಳಿಹಾಕಿದ್ದು, ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಶಿಫಾರಸನ್ನು ಎತ್ತಿಹಿಡಿದಿದೆ. ಹಾಗೂ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿದೆ.
ಒಟ್ಟು 4 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬೇಕು ಎಂದು ಅದು ಸ್ಪಷ್ಟಪಡಿಸಿದೆ.
ಕರ್ನಾಟಕವು ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಶಿಫಾರಸಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಬಗ್ಗೆ ಸಿಡಬ್ಲ್ಯೂಎಂಎ (CWMA) ತುರ್ತು ಸಭೆ ನಡೆಸಿದ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ.
ಮಳೆ ಕೊರತೆ, ಜಲಾಶಯಗಳಲ್ಲಿ ನೀರಿನ ಅಭಾವ: ಕರ್ನಾಟಕದ ವಾದ
ಸಭೆಯಲ್ಲಿ ಕರ್ನಾಟಕವು, ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಸಮರ್ಪಕ ಮಳೆಯಾಗಿಲ್ಲ ಮತ್ತು ಜಲಾಶಯಗಳಲ್ಲಿ ನೀರಿನ ಸಂಗ್ರಹಣೆಯೂ ತೀವ್ರವಾಗಿ ಕುಸಿದಿರುವುದರಿಂದ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂದು ಪ್ರಾಧಿಕಾರದ ಮುಂದೆ ವಾದ ಮಂಡಿಸಿತು.
ರಾಜ್ಯದ ಅಧಿಕಾರಿಗಳ ಪ್ರಕಾರ, ಈ ವರ್ಷ ಇದುವರೆಗೆ ಬಿಳಿಗುಂಡ್ಲು ಬಳಿ ಕೇವಲ 178 ಕ್ಯೂಸೆಕ್ ನೀರಿನ ಹರಿವು ಮಾತ್ರ ದಾಖಲಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 30,748 ಕ್ಯೂಸೆಕ್ ಹರಿವು ದಾಖಲಾಗಿತ್ತು.
ಇದೇ ರೀತಿ, ಈ ವರ್ಷದ ಜೂನ್ ಹಾಗೂ ಜುಲೈ ತಿಂಗಳಲ್ಲಿ ಒಟ್ಟು 3.55 ಟಿಎಂಸಿ ನೀರು ಮಾತ್ರ ಹರಿದಿದ್ದು, 2025ರ ಇದೇ ಅವಧಿಯಲ್ಲಿ 116.92 ಟಿಎಂಸಿ ನೀರು ಹರಿದಿತ್ತು ಎಂದು ಕರ್ನಾಟಕ ತಿಳಿಸಿದೆ.
ಅಧಿಕಾರಿಗಳ ಮಾಹಿತಿಯಂತೆ, ಕಾವೇರಿ ಜಲಾನಯನ ಪ್ರದೇಶದ ಕರ್ನಾಟಕದ ಜಲಾಶಯಗಳಲ್ಲಿ ಪ್ರಸ್ತುತ 36.69 ಟಿಎಂಸಿ ನೀರು ಮಾತ್ರ ಸಂಗ್ರಹವಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಇದು 99 ಟಿಎಂಸಿ ಇತ್ತು.
ಸಾಮಾನ್ಯವಾಗಿ ಮುಂಗಾರು ಈ ಹಂತಕ್ಕೆ ತಲುಪುವ ವೇಳೆಗೆ ಸುಮಾರು 40 ಟಿಎಂಸಿ ನೀರು ಕೆಳಹರಿವಿನತ್ತ ಹರಿದಿರಬೇಕಾಗಿತ್ತು. ಆದರೆ ಈ ವರ್ಷ ತೀವ್ರ ಬರ ಪರಿಸ್ಥಿತಿಯ ಪರಿಣಾಮ ಕೇವಲ 3.5 ಟಿಎಂಸಿ ನೀರು ಮಾತ್ರ ಹರಿದಿದೆ ಎಂದು ರಾಜ್ಯ ಪ್ರಾಧಿಕಾರಕ್ಕೆ ತಿಳಿಸಿದೆ.
ಮುಂದಿನ ತಿಂಗಳುಗಳಲ್ಲಿ ಕುಡಿಯುವ ನೀರು ಹಾಗೂ ಇತರೆ ಅಗತ್ಯಗಳಿಗೆ ಜಲಾಶಯಗಳಲ್ಲಿರುವ ನೀರನ್ನು ಬಳಸಬೇಕಿರುವುದರಿಂದ ಈಗಾಗಲೇ ಸಂಗ್ರಹದ ಮೇಲೆ ಭಾರೀ ಒತ್ತಡವಿದೆ ಎಂದು ಕರ್ನಾಟಕವು ವಾದಿಸಿತು.
ಇದಲ್ಲದೆ, ಬಿಳಿಗುಂಡ್ಲು ಬಳಿ 3,500 ಕ್ಯೂಸೆಕ್ ಹರಿವು ಖಚಿತಪಡಿಸಲು ಮೇಲ್ಭಾಗದ ಜಲಾಶಯಗಳಿಂದ ಇನ್ನೂ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಬೇಕಾಗುತ್ತದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಇದು ಇನ್ನಷ್ಟು ಕಷ್ಟಕರವಾಗಲಿದೆ ಎಂದು ಕರ್ನಾಟಕವು ಪ್ರಾಧಿಕಾರದ ಗಮನಕ್ಕೆ ತಂದಿತು.
ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಗೆ ತಮಿಳುನಾಡು ಒತ್ತಾಯ
ಇನ್ನೊಂದೆಡೆ, ತಮಿಳುನಾಡು ಕರ್ನಾಟಕದ ವಾದವನ್ನು ತೀವ್ರವಾಗಿ ವಿರೋಧಿಸಿತು. ಸಿಡಬ್ಲ್ಯೂಆರ್ಸಿ ಶಿಫಾರಸು ಮಾಡಿರುವ ಪ್ರಮಾಣವೇ ಕನಿಷ್ಠ ಪ್ರಮಾಣವಾಗಿದ್ದು, ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರಾಧಿಕಾರವನ್ನು ಒತ್ತಾಯಿಸಿತು.
ತಮಿಳುನಾಡಿನ ಅಧಿಕಾರಿಗಳ ಪ್ರಕಾರ, ಕರ್ನಾಟಕದ ಜಲಾಶಯಗಳಿಗೆ ಈಗಾಗಲೇ ಸುಮಾರು 36 ಟಿಎಂಸಿ ನೀರಿನ ಒಳಹರಿವು ಬಂದಿರುವುದರಿಂದ, ರಾಜ್ಯವು ನೀರು ಬಿಡುಗಡೆ ಮಾಡಲು ಸಾಕಷ್ಟು ಸಾಮರ್ಥ್ಯ ಹೊಂದಿದೆ ಎಂದು ವಾದಿಸಿತು. ಅಲ್ಲದೆ, ಸಾಮಾನ್ಯ ಪರಿಸ್ಥಿತಿಯಲ್ಲಿ ಈ ನೀರಿನ ವರ್ಷದಲ್ಲಿ ಈ ಹೊತ್ತಿಗೆ ಸುಮಾರು 40 ಟಿಎಂಸಿ ನೀರು ಕೆಳಹರಿವಿನತ್ತ ಬಿಡುಗಡೆ ಆಗಿರಬೇಕಾಗಿತ್ತು ಎಂದು ತಮಿಳುನಾಡು ತಿಳಿಸಿತು.
ಮಳೆಯ ಕೊರತೆಯ ವರ್ಷಗಳಲ್ಲಿ ಅನುಸರಿಸಬೇಕಾದ ‘ಡಿಸ್ಟ್ರೆಸ್ ಶೇರಿಂಗ್’ (ನೀರಿನ ಕೊರತೆ ಹಂಚಿಕೆ) ಸೂತ್ರವನ್ನು ಕರ್ನಾಟಕ ಸಮರ್ಪಕವಾಗಿ ಪಾಲಿಸಿಲ್ಲ ಎಂದು ತಮಿಳುನಾಡು ಆರೋಪಿಸಿತು. ತಮಿಳುನಾಡಿನ ಸಲ್ಲಿಕೆಯ ಪ್ರಕಾರ, ಕಳೆದ ಎರಡು ತಿಂಗಳಲ್ಲಿ ಬಿಳಿಗುಂಡ್ಲು ಬಳಿ ಕೇವಲ 3.5 ಟಿಎಂಸಿ ನೀರು ಮಾತ್ರ ಹರಿದಿದ್ದು, ಡಿಸ್ಟ್ರೆಸ್ ಶೇರಿಂಗ್ ಸೂತ್ರದ ಪ್ರಕಾರ 9.46 ಟಿಎಂಸಿ ನೀರಿನ ಕೊರತೆ ಉಂಟಾಗಿದೆ ಎಂದು ಪ್ರಾಧಿಕಾರಕ್ಕೆ ತಿಳಿಸಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ