ಸಚಿವ ಸಂಪುಟ ವಿಸ್ತರಣೆ ; ಕೊನೆ ಕ್ಷಣದ ಬದಲಾವಣೆಗಳು, ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ, ರಾಜೀನಾಮೆ ಮಾತುಗಳು…ಪ್ರತಿಭಟನೆಗಳು

ಬೆಂಗಳೂರು: ಸುಮಾರು ಎರಡು ತಿಂಗಳುಗಳ ಕಾಲ ಎಐಸಿಸಿ ಮಟ್ಟದಲ್ಲಿ ನಡೆದ ಸುದೀರ್ಘ ಸಮಾಲೋಚನೆಗಳ ಬಳಿಕ ಅಂತಿಮಗೊಂಡಿದ್ದ ಕಾಂಗ್ರೆಸ್‌ನ ಬಹುನಿರೀಕ್ಷಿತ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ, ಕೊನೆಯ ಕ್ಷಣದ ಬದಲಾವಣೆಗಳು, ಆಂತರಿಕ ಅಸಮಾಧಾನ, ರಾಜೀನಾಮೆ ನೀಡುವುದಾಗಿ ಘೋಷಣೆ ಹಾಗೂ ಪ್ರತಿಭಟನೆಗಳಿಂದಾಗಿ ಭಾರೀ ಸುದ್ದಿಯಾಗಿದೆ
ಸೋಮವಾರ ಎಐಸಿಸಿ 20 ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದರೂ, ದಿನವಿಡೀ ಗೊಂದಲ ಮತ್ತು ರಾಜಕೀಯ ನಾಟಕೀಯ ಬೆಳವಣಿಗೆಗಳು ನಡೆದವು. ಮೊದಲಿಗೆ ಬಿಡುಗಡೆಯಾದ ಪಟ್ಟಿಯಲ್ಲಿ ಮಂಕಾಳ ವೈದ್ಯ ಅವರ ಹೆಸರು ಸೇರಿಸಲಾಗಿತ್ತು. ಆದರೆ ಕೆಲವೇ ಸಮಯದಲ್ಲಿ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಲಾಯಿತು. ಹಾಗೂ ಅದರಲ್ಲಿ ಮಂಕಾಳ ವೈದ್ಯ ಅವರ ಹೆಸರನ್ನು ಕೈಬಿಟ್ಟು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರದಲ್ಲಿ ಸಚಿವರಾಗಿದ್ದ ಹಿರಿಯ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರ ಹೆಸರನ್ನು ಸೇರಿಸಲಾಯಿತು.
ಇಷ್ಟಕ್ಕೆ ಗೊಂದಲ ಅಂತ್ಯವಾಗಲಿಲ್ಲ. ಪರಿಷ್ಕೃತ 20 ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಏಕೈಕ ಮಹಿಳಾ ಶಾಸಕಿ ಗಾಯತ್ರಿ ಶಾಂತೇಗೌಡ ಅವರು ಲೋಕಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಂದ ಸಮಾರಂಭಕ್ಕೆ ಹಾಜರಾಗುವಂತೆ ಕರೆ ಬಂದಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಪರಿಣಾಮವಾಗಿ ಅವರನ್ನು ಬದಲಿಸುವ ಸಾಧ್ಯತೆ ಇದ್ದು, ಸಚಿವ ಸಂಪುಟದ ಅಂತಿಮ ರೂಪುರೇಷೆಗಳ ಕುರಿತು ಹೊಸ ಪ್ರಶ್ನೆಗಳು ಉದ್ಭವಿಸಿವೆ.

ಕಾಂಗ್ರೆಸ್‌ನೊಳಗೆ ತೀವ್ರ ಅಸಮಾಧಾನ
ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕ ಯಶವಂತ ರಾಯಗೌಡ ಪಾಟೀಲ ಅವರು ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಇದೇ ವೇಳೆ, ಶಾಸಕ ಬೆಳೂರು ಗೋಪಾಲಕೃಷ್ಣ ಕೂಡ ಇದೇ ರೀತಿಯ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ, ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಶಾಸಕರಾದ ಪ್ರಿಯ ಕೃಷ್ಣ ಮತ್ತು ತನ್ವೀರ್ ಸೇಠ್‌ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿ ಪಕ್ಷದ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ದಿನೇಶ ಗುಂಡೂರಾವ್ ಕೂಡ ಸಚಿವ ಸಂಪುಟದಿಂದ ತಮ್ಮನ್ನು ಕೈಬಿಟ್ಟಿರುವುದಕ್ಕೆ ಬಹಿರಂಗವಾಗಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಅವರ ಹೊರತಾಗಿರುವುದು ವಿಶೇಷ ಮಹತ್ವ ಪಡೆದಿದ್ದು, ಡಿ.ಕೆ. ಶಿವಕುಮಾರ ನೇತೃತ್ವದ ಸಚಿವ ಸಂಪುಟದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಇಲ್ಲದಂತಾಗಿರುವುದು.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ದಿನೇಶ ಗುಂಡೂರಾವ್, “ರಾಜ್ಯ ಹಾಗೂ ಪಕ್ಷಕ್ಕಾಗಿ ಹಲವು ವರ್ಷಗಳ ಸೇವೆ ಸಲ್ಲಿಸಿದ್ದರೂ ಈ ಸಚಿವ ಸಂಪುಟದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡದಿರುವುದು ನಿರಾಶಾದಾಯಕ. ನನ್ನನ್ನು ಕೈಬಿಡಲು ಯಾವುದೇ ಕಾರಣವನ್ನೂ ತಿಳಿಸದೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೂ ನಾನು ನನ್ನ ಕ್ಷೇತ್ರದ ಜನರ ಹಾಗೂ ಕರ್ನಾಟಕದ ಅಭಿವೃದ್ಧಿಗಾಗಿ ಕೆಲಸ ಮುಂದುವರಿಸುತ್ತೇನೆ” ಎಂದು ಹೇಳಿದ್ದಾರೆ.
ಅವರ ಪತ್ನಿ ಟಬು ರಾವ್ ಪಕ್ಷದ ನಿರ್ಧಾರವನ್ನು ಇನ್ನಷ್ಟು ತೀವ್ರವಾಗಿ ಟೀಕಿಸಿ, “ಒಂದು ಕ್ಷಣದ ನಿರ್ಧಾರಕ್ಕೆ ಜನರನ್ನು ಬಲಿಕೊಡಲಾಗುತ್ತಿದೆ. ಕೊನೆಗೆ ಕೆಲಸಕ್ಕಿಂತ ಜಾತಿಯೇ ಮುಖ್ಯವಾಗುತ್ತಿದೆ. ವಿಷಾದಕರ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಮತ್ತೊಬ್ಬ ಪ್ರಮುಖ ನಾಯಕ ಎ.ಎಸ್. ಪೊನ್ನಣ್ಣ ಕೂಡ ಗಮನ ಸೆಳೆದಿದ್ದಾರೆ. ಕೊಡಗು ಜಿಲ್ಲೆಗೆ ಎರಡು ದಶಕಗಳಿಗೂ ಹೆಚ್ಚು ಅವಧಿಯ ಬಳಿಕ ಕೊಡವ ಸಮುದಾಯದ ಪ್ರತಿನಿಧಿಯಾಗಿ ಅವರು ಸಚಿವರಾಗುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ವ್ಯಕ್ತವಾಗಿತ್ತು.
ಹಿಂದೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಹಾಗೂ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದ ಪೊನ್ನಣ್ಣ ಅವರಿಗೆ ಸಚಿವ ಸ್ಥಾನ ನೀಡುವ ಬದಲು ಅವರನ್ನು ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಈ ನಿರ್ಧಾರದಿಂದ ಪೊನ್ನಣ್ಣ ಹಾಗೂ ಕೊಡವ ಸಮುದಾಯದ ಒಂದು ವರ್ಗದಲ್ಲಿ ಅಸಮಾಧಾನ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ವೇಳೆ, ಎಐಸಿಸಿ ಅಂತಿಮಗೊಳಿಸಿದ ಸಚಿವರ ಪಟ್ಟಿಯಲ್ಲಿರುವ ಕೆಲ ಹೆಸರುಗಳ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೂ ಅಸಮಾಧಾನವಿದೆ ಎಂದು ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೆಲವು ನಾಯಕರ ಸೇರ್ಪಡೆ ಹಾಗೂ ತಾವು ಬೆಂಬಲಿಸಿದ್ದ ಕೆಲವು ನಾಯಕರಿಗೆ ಅವಕಾಶ ಸಿಗದಿರುವುದರಿಂದ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಬೆಳವಣಿಗೆಗಳು, ಹಲವು ವಾರಗಳ ಸಮಾಲೋಚನೆ ಹಾಗೂ ತೀವ್ರ ಲಾಬಿಯ ನಂತರವೂ ಸಚಿವರ ಅಂತಿಮ ಪಟ್ಟಿಯನ್ನು ಕಾಂಗ್ರೆಸ್‌ನ ಕೇಂದ್ರ ನಾಯಕತ್ವವೇ ನಿರ್ಣಾಯಕವಾಗಿ ರೂಪಿಸಿರುವುದನ್ನು ಸೂಚಿಸುತ್ತವೆ.
ಸಚಿವ ಸಂಪುಟ ವಿಸ್ತರಣೆಯ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಪಟ್ಟಿಯಲ್ಲಿನ ಬದಲಾವಣೆ, ಗೊಂದಲ, ರಾಜೀನಾಮೆ ಘೋಷಣೆಗಳು, ಬಹಿರಂಗ ಅಸಮಾಧಾನ ಹಾಗೂ ಪ್ರತಿಭಟನೆಗಳು ಕಾಂಗ್ರೆಸ್‌ನಲ್ಲಿ ರಾಜಕೀಯ ಸಂಚಲನ ಮೂಡಿಸಿದ್ದು, ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ರಾಜಕೀಯ ಪರಿಣಾಮ ಇನ್ನೂ ಮುಂದುವರಿಯುವ ಸಾಧ್ಯತೆ ಇದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement