ಕರ್ನಾಟಕದ ಕಾಂಗ್ರೆಸ್ ಉಸ್ತುವಾರಿ ಭೇಟಿಯಾದ ವಿಧಾನಸಭೆ ಸ್ಪೀಕರ್ : ಬಿಜೆಪಿ ತೀವ್ರ ಆಕ್ರೋಶ

ಬೆಂಗಳೂರು: ಸಾಂವಿಧಾನಿಕ ಹುದ್ದೆಯ ಘನತೆಯನ್ನು ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ಕೇವಲ ಪಕ್ಷದ ಲೆಟರ್‌ಹೆಡ್‌ಗೆ ಸೀಮಿತಗೊಳಿಸಿದ್ದು, ಇದೀಗ ವಿಧಾನಸಭೆ ಸ್ಪೀಕರ್‌ ಹುದ್ದೆಯನ್ನೂ ರಾಜಕೀಯ ನೇಮಕಾತಿಯ ಮಟ್ಟಕ್ಕೆ ಇಳಿಸಿದೆ ಎಂದು ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ವಿ. ಸುನಿಲಕುಮಾರ ಆರೋಪಿಸಿದ್ದಾರೆ.
ಬುಧವಾರ (ಸೆಪ್ಟೆಂಬರ್‌ 2) ಹೇಳಿಕೆ ನೀಡಿದ ಅವರು, ಕರ್ನಾಟಕ ವಿಧಾನಸಭೆಯ ಸ್ಪೀಕರ್‌ ಜಿ.ಎಸ್‌. ಪಾಟೀಲ್‌ ಅವರು ಮಂಗಳವಾರ ನವದೆಹಲಿಯಲ್ಲಿ ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕರ್ನಾಟಕ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿಯಾಗಿ ನೂತನ ಹುದ್ದೆ ದೊರೆತಿದ್ದಕ್ಕೆ ಕೃತಜ್ಞತೆ ಸಲ್ಲಿಸಿರುವುದನ್ನು ಉಲ್ಲೇಖಿಸಿ ಅವರು ಈ ಟೀಕೆ ಮಾಡಿದ್ದಾರೆ.
ಮಂಗಳವಾರ ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಕರ್ನಾಟಕ ವಿಧಾನಸಭೆ ಸ್ಪೀಕರ್‌ ಜಿ.ಎಸ್‌. ಪಾಟೀಲ್‌ ಹಾಗೂ ವಿಧಾನ ಪರಿಷತ್‌ ಸಭಾಪತಿ ಸಲೀಂ ಅಹ್ಮದ್‌ ಅವರನ್ನು ಭೇಟಿಯಾದ ಫೋಟೋಗಳನ್ನು ಸುರ್ಜೇವಾಲಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸ್ಪೀಕರ್‌ ಹುದ್ದೆಯಲ್ಲಿರುವ ವ್ಯಕ್ತಿಯು ಮೊದಲಿಗೆ ತಾನು ಸದಸ್ಯನಾಗಿರುವ ರಾಜಕೀಯ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಹಾಗೂ ಸಂಪೂರ್ಣ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವುದು ಪದ್ಧತಿ ಹಾಗೂ ನಿರೀಕ್ಷೆಯಾಗಿದೆ. ಆದರೆ ಸ್ಪೀಕರ್‌ ಅವರೇ ಕಾಂಗ್ರೆಸ್‌ ರಾಜ್ಯ ಉಸ್ತುವಾರಿಯನ್ನು ಭೇಟಿಯಾಗಿ ‘ಕೃತಜ್ಞತೆ ಸಲ್ಲಿಸುವ’ ರೀತಿಯಲ್ಲಿ ನಡೆದುಕೊಂಡಿರುವುದು ಅವರ ಮುಂದಿನ ಕಾರ್ಯವೈಖರಿ ಹಾಗೂ ನಿಷ್ಪಕ್ಷಪಾತದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಈ ಭೇಟಿಯು ಇನ್ನು ಮುಂದೆ ವಿಧಾನಸಭೆಯ ಕಲಾಪಗಳು ಕಾಂಗ್ರೆಸ್‌ ಹೈಕಮಾಂಡ್‌ನ ನಿರ್ದೇಶನದಂತೆ ನಡೆಯಲಿವೆಯೇ ಎಂಬ ಆತಂಕಕಾರಿ ಸಂದೇಶವನ್ನು ನೀಡುತ್ತದೆ” ಎಂದು ಸುನಿಲಕುಮಾರ ಹೇಳಿದ್ದಾರೆ.
ವಿಧಾನಸಭೆಸ್ಪೀಕರ್‌ ಹಾಗೂ ವಿಧಾನ ಪರಿಷತ್‌ ಸಭಾಪತಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಅವರು ತಾವು ಮುನ್ನಡೆಸುವ ಸದನಗಳ ರಕ್ಷಕರು ಹಾಗೂ ಸಂರಕ್ಷಕರು. ಆದರೆ ಕಾಂಗ್ರೆಸ್‌ ಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾಗುವ ಮೂಲಕ ಅವರು ತಾವು ಹೊಂದಿರುವ ರಾಜಕೀಯೇತರ ಸ್ಥಾನಮಾನದ ಮೂಲ ಆಶಯವನ್ನೇ ಮರೆತಿದ್ದಾರೆ ಎಂದು ಬಿಜೆಪಿ ಕರ್ನಾಟಕ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸುನಿಲಕುಮಾರ ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಗೋಕರ್ಣ ಕಡಲ ತೀರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಎಐಸಿಸಿ (AICC) ಲೆಟರ್‌ಹೆಡ್‌ ಮೂಲಕ ಸ್ಪೀಕರ್‌ ಹುದ್ದೆಗೆ ಆಯ್ಕೆಯಾಗಿರುವ ಜಿ.ಎಸ್‌. ಪಾಟೀಲ್‌, ಈ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ ಹಿಂದಿನ ಸ್ಪೀಕರ್‌ಗಳ ಕಾರ್ಯವೈಖರಿಯನ್ನಾದರೂ ನೆನಪಿಸಿಕೊಳ್ಳಬೇಕಿತ್ತು ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಅವರ ನಡೆ ಉದಾಹರಣೆಯಾಗಿದೆ ಎಂದು ಸುನಿಲಕುಮಾರ ಹೇಳಿದ್ದಾರೆ. ಅಂದು ಕಾಂಗ್ರೆಸ್‌ನ ಕರ್ನಾಟಕ ಉಸ್ತುವಾರಿಯಾಗಿದ್ದ ದಿಗ್ವಿಜಯ ಸಿಂಗ್‌ ಅವರನ್ನು “ದಿಗ್ವಿಜಯ್‌ ಸಿಂಗ್‌ ಯಾರು?” ಎಂದು ಕಾಗೋಡು ತಿಮ್ಮಪ್ಪ ಪ್ರಶ್ನಿಸಿದ್ದನ್ನು ಸ್ಮರಿಸಿರುವ ಅವರು, ಸುರ್ಜೆವಾಲ ಅವರನ್ನು ಭೇಟಿಯಾಗುವ ಮುನ್ನ ಇವರಿಬ್ಬರು ಅದನ್ನು ನೆನಪಿಸಿಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.
ವಿಧಾನಸಭೆ ಸ್ಪೀಕರ್‌ ಹಾಗೂ ಪರಿಷತ್‌ ಸಭಾಪತಿಯವರು ಪಕ್ಷ ರಾಜಕೀಯದಿಂದ ದೂರವಿರುವುದು ಸಂಸದೀಯ ಪರಂಪರೆಯಾಗಿದೆ. ಆದರೆ ಸದನದ ಅಧ್ಯಕ್ಷ ಸ್ಥಾನದಲ್ಲಿರುವ ವ್ಯಕ್ತಿಯೇ ಯಾವುದಾದರೂ ರಾಜಕೀಯ ಪಕ್ಷದ ಕಾರ್ಯಕರ್ತನಂತೆ ಕಾಣಿಸಿಕೊಂಡರೆ, ಅಂತಹ ವ್ಯಕ್ತಿ ಕೈಗೊಳ್ಳುವ ನಿರ್ಧಾರಗಳು ಹಾಗೂ ಸದನದ ಕಲಾಪಗಳು ನಿಷ್ಪಕ್ಷಪಾತವಾಗಿವೆ ಎಂಬ ನಂಬಿಕೆ ಸಾರ್ವಜನಿಕರಲ್ಲಿ ಉಳಿಯುವುದಿಲ್ಲ. ಅವರ ನಿಷ್ಪಕ್ಷಪಾತ ಕಾರ್ಯನಿರ್ವಹಣೆಯ ಬಗ್ಗೆಯೇ ಗಂಭೀರ ಪ್ರಶ್ನೆ ಮೂಡಿಸುತ್ತದೆ ಎಂದು ಸುನಿಲಕುಮಾರ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಕಲಿ ಎನ್‌ಸಿಐಬಿ ಅಧಿಕಾರಿ ಸೋಗಿನಲ್ಲಿ ವಂಚನೆ: 8 ರಾಜ್ಯಗಳಿಗೆ ಬೇಕಾಗಿದ್ದ ಕುಖ್ಯಾತ ಆರೋಪಿ ಕೇರಳದಲ್ಲಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement