ನವದೆಹಲಿ : ಉಪ್ಪು, ಸಕ್ಕರೆ ಮತ್ತು ಕೊಬ್ಬಿನ ಅಂಶ ಅಧಿಕವಾಗಿರುವ ಪ್ಯಾಕೆಟ್ ಆಹಾರಗಳ ಮೇಲೆ ಮುಂಭಾಗದಲ್ಲೇ (ಫ್ರಂಟ್-ಆಫ್-ಪ್ಯಾಕ್) ಎಚ್ಚರಿಕೆ ಲೇಬಲ್ಗಳನ್ನು ಕಡ್ಡಾಯಗೊಳಿಸುವ ವಿಚಾರವನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸಾರ್ವಜನಿಕ ಆರೋಗ್ಯದ ಬಗ್ಗೆ, ಅದರಲ್ಲೂ ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದಚಂದ್ರನ್ ಅವರಿದ್ದ ಪೀಠವು, ಆಹಾರ ಸುರಕ್ಷತೆಗೆ ಸಂಬಂಧಿಸಿದ ಎಲ್ಲ ಪಾಲುದಾರರು ಈ ವಿಷಯವನ್ನು “ರಾಷ್ಟ್ರೀಯ ಹಿತಾಸಕ್ತಿ”ಯ ದೃಷ್ಟಿಯಿಂದ ಪರಿಗಣಿಸಬೇಕು ಎಂದು ಸೂಚಿಸಿತು. ಇದು ಗಂಭೀರ ವಿಷಯವಾಗಿದ್ದು, ಸಂಬಂಧಪಟ್ಟ ಎಲ್ಲರಿಂದ ಹೆಚ್ಚಿನ ಮಾಹಿತಿಯನ್ನು ಕೋರಿ ವಿವರವಾದ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿತು.
“ನಮ್ಮ ಕಾಳಜಿ ಜನರ ಆರೋಗ್ಯ, ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಬಗ್ಗೆ. ಈ ವಿಚಾರವನ್ನು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಎಲ್ಲರೂ ಪರಿಗಣಿಸಬೇಕು ಎಂದು ನಾವು ಬಯಸುತ್ತೇವೆ” ಎಂದು ನ್ಯಾಯಪೀಠ ಹೇಳಿತು. ಶೀಘ್ರವೇ ತನ್ನ ಆದೇಶವನ್ನು ಪ್ರಕಟಿಸುವುದಾಗಿ ಸೂಚಿಸಿತು.
ಈ ವಿಷಯದ ಕುರಿತು ತಾವೂ ಸಾಕಷ್ಟು ಅಧ್ಯಯನ ನಡೆಸಿರುವುದಾಗಿ ತಿಳಿಸಿದ ಸುಪ್ರೀಂ ಕೋರ್ಟ್, ಆದೇಶ ಪ್ರಕಟವಾದ ಬಳಿಕ ಎಲ್ಲ ಪಕ್ಷಗಳು ಅದನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು ಎಂದು ಹೇಳಿತು.
ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ‘3ಎಸ್ ಅಂಡ್ ಅವರ್ ಹೆಲ್ತ್ ಸೊಸೈಟಿ’ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ, ಪ್ಯಾಕೆಟ್ ಆಹಾರಗಳಲ್ಲಿ ಸಕ್ಕರೆ, ಉಪ್ಪು ಅಥವಾ ಕೊಬ್ಬಿನ ಅಂಶ ಅಧಿಕವಾಗಿದೆಯೇ ಎಂಬುದನ್ನು ಗುರುತಿಸಲು ಎಫ್ಎಸ್ಎಸ್ಎಐ (ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ) ಯಾವ ಮಾರ್ಗಸೂಚಿಗಳನ್ನು ರೂಪಿಸಿದೆ ಎಂದು ನ್ಯಾಯಪೀಠ ಪ್ರಶ್ನಿಸಿತು.
ಪ್ರಸ್ತುತ ಪ್ಯಾಕೆಟ್ ಆಹಾರಗಳ ಪೌಷ್ಟಿಕಾಂಶ ವಿವರಗಳನ್ನು ಪ್ಯಾಕೆಟ್ನ ಹಿಂಭಾಗದಲ್ಲಿ ನೀಡಲಾಗುತ್ತಿದೆ ಎಂದು ಉಲ್ಲೇಖಿಸಿದ ನ್ಯಾಯಾಲಯ, ಯಾವ ಮಿತಿಯನ್ನು ಮೀರಿದರೆ ಆಹಾರವನ್ನು ‘ಹೆಚ್ಚಿನ ಸಕ್ಕರೆ’, ‘ಹೆಚ್ಚಿನ ಉಪ್ಪು’ ಅಥವಾ ‘ಹೆಚ್ಚಿನ ಕೊಬ್ಬು’ ಹೊಂದಿದೆ ಎಂದು ಪರಿಗಣಿಸಲಾಗುತ್ತದೆ ಎಂಬುದರ ಕುರಿತು ಎಫ್ಎಸ್ಎಸ್ಎಐ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸಿದೆಯೇ ಎಂದು ಕೇಳಿತು.
ಎಫ್ಎಸ್ಎಸ್ಎಐ ಪರ ಹಾಜರಾದ ಹಿರಿಯ ವಕೀಲ ಮಣಿಂದರ ಸಿಂಗ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾಕೆಟ್ನ ಹಿಂಭಾಗದಲ್ಲಿ ಎರಡು ರೀತಿಯ ಮಾಹಿತಿ ಪ್ರದರ್ಶಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದರು. 100 ಗ್ರಾಂ ಆಹಾರದಲ್ಲಿರುವ ಪೌಷ್ಟಿಕಾಂಶದ ಪ್ರಮಾಣ ಹಾಗೂ ಪ್ರತಿ ಸರ್ವಿಂಗ್ಗೆ ಇರುವ ಪ್ರಮಾಣ ಎರಡನ್ನೂ ತೋರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಮಧ್ಯಪ್ರವೇಶಕರ ಪರ ವಾದ ಮಂಡಿಸಿದ ಹಿರಿಯ ವಕೀಲ ದೇವದತ್ತ ಕಾಮತ್, ಸರ್ಕಾರವು ‘ಕುರ್ಕುರೆ’ಯಂತಹ ಅತಿ ಸಂಸ್ಕರಿತ (ಅಲ್ಟ್ರಾ-ಪ್ರೊಸೆಸ್ಡ್) ತಿಂಡಿಗಳನ್ನು ಮೊಟ್ಟೆ ಅಥವಾ ಉಪ್ಪು ಗೋಡಂಬಿಯಂತಹ ಪೌಷ್ಟಿಕ ಆಹಾರಗಳ ಸಮಾನ ಮಟ್ಟದಲ್ಲಿ ಪರಿಗಣಿಸುತ್ತಿದೆ ಎಂದು ಆಕ್ಷೇಪಿಸಿದರು. ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳಿಗೆ ಇನ್ನಷ್ಟು ಕಠಿಣ ಎಚ್ಚರಿಕೆ ಲೇಬಲ್ ಇರಬೇಕು ಎಂದು ಅವರು ವಾದಿಸಿದರು.
“ಕೆಂಪು ಬಣ್ಣವನ್ನು ಈಗಾಗಲೇ ಮಾಂಸಾಹಾರಿ ಆಹಾರಗಳಿಗೆ ಹಾಗೂ ಹಸಿರು ಬಣ್ಣವನ್ನು ಸಸ್ಯಾಹಾರಿ ಆಹಾರಗಳಿಗೆ ಬಳಸಲಾಗುತ್ತಿದೆ. ಹೀಗಾಗಿ ಅಲ್ಟ್ರಾ-ಪ್ರೊಸೆಸ್ಡ್ ಆಹಾರಗಳ ಎಚ್ಚರಿಕೆ ಲೇಬಲ್ಗೆ ಕೆಂಪಿನ ಬದಲು ಬೇರೆ ಬಣ್ಣ ಬಳಸುವ ಸಾಧ್ಯತೆಯನ್ನು ಪರಿಗಣಿಸಬಹುದು” ಎಂದು ಕಾಮತ್ ಸಲಹೆ ನೀಡಿದರು. ಈ ಎಲ್ಲ ಸಲಹೆಗಳನ್ನು ದಾಖಲಿಸಿಕೊಂಡ ನ್ಯಾಯಪೀಠ, ಶೀಘ್ರದಲ್ಲೇ ವಿವರವಾದ ಆದೇಶ ಹೊರಡಿಸುವುದಾಗಿ ತಿಳಿಸಿತು.
ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ಗೆ ಎಫ್ಎಸ್ಎಸ್ಎಐ ಪ್ರಸ್ತಾವನೆ
ಈ ಹಿಂದೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣಪತ್ರದಲ್ಲಿ ಎಫ್ಎಸ್ಎಸ್ಎಐ, ಹೆಚ್ಚುವರಿ ಸ್ಯಾಚುರೇಟೆಡ್ ಕೊಬ್ಬು, ಹೆಚ್ಚುವರಿ ಸಕ್ಕರೆ ಹಾಗೂ ಉಪ್ಪಿನ ಅಂಶ ಹೆಚ್ಚಿರುವ ಆಹಾರ ಉತ್ಪನ್ನಗಳ ಮೇಲೆ ಸ್ಪಷ್ಟವಾಗಿ ಕಾಣುವ ಕೆಂಪು ಬಣ್ಣದ ಎಚ್ಚರಿಕೆ ಲೇಬಲ್ ಅಳವಡಿಸಲು ಪ್ರಸ್ತಾವನೆ ಸಲ್ಲಿಸಿತ್ತು.
ಗ್ರಾಹಕರಿಗೆ ಸರಳ, ಸ್ಪಷ್ಟ ಹಾಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಎಚ್ಚರಿಕೆ ಮಾಹಿತಿ ನೀಡುವುದು ಇದರ ಉದ್ದೇಶ ಎಂದು ಪ್ರಾಧಿಕಾರ ಹೇಳಿತ್ತು. ಐಸಿಎಂಆರ್–ಎನ್ಐಎನ್ (ICMR-NIN) ಪ್ರಕಟಿಸಿರುವ ‘ಡಯಟರಿ ಗೈಡ್ಲೈನ್ಸ್ ಫಾರ್ ಇಂಡಿಯನ್ಸ್–2024’ ಮಾರ್ಗಸೂಚಿಗಳಲ್ಲಿ ನಿಗದಿಪಡಿಸಿರುವ ಮಿತಿಗಳ ಆಧಾರದ ಮೇಲೆ, ಹೆಚ್ಚುವರಿ ಸ್ಯಾಚುರೇಟೆಡ್ ಕೊಬ್ಬು, ಹೆಚ್ಚುವರಿ ಸಕ್ಕರೆ ಮತ್ತು ಉಪ್ಪು ಎಂಬ ಮೂರು ಅಂಶಗಳಲ್ಲಿ ಕನಿಷ್ಠ ಎರಡು ಅಥವಾ ಅದಕ್ಕಿಂತ ಹೆಚ್ಚು ಅಂಶಗಳ ಪ್ರಮಾಣ ಅಧಿಕವಾಗಿರುವ ಆಹಾರಗಳಿಗೆ ಕೆಂಪು ಬಣ್ಣದ ಷಡ್ಭುಜಾಕಾರದ (ಹೆಕ್ಸಾಗನ್) ಎಚ್ಚರಿಕೆ ಲೇಬಲ್ ಅಳವಡಿಸಲಾಗುವುದು ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿತ್ತು.
ಈ ಪ್ರಮಾಣಪತ್ರವು ಆಗಸ್ಟ್ 13ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಅನುಸರಣೆಯಾಗಿ ಸಲ್ಲಿಸಲಾಗಿತ್ತು. 3ಎಸ್ ಅಂಡ್ ಅವರ್ ಹೆಲ್ತ್ ಸೊಸೈಟಿ ಪರ ವಕೀಲ ರಾಜೀವ ಶಂಕರ ದ್ವಿವೇದಿ ಹಾಜರಾಗಿ, ಪ್ಯಾಕೆಟ್ ಆಹಾರಗಳ ಮೇಲೆ ಮುಂಭಾಗದಲ್ಲೇ ಕಡ್ಡಾಯ ಎಚ್ಚರಿಕೆ ಲೇಬಲ್ಗಳನ್ನು ಜಾರಿಗೆ ತರಲು ಕೇಂದ್ರ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.
ವಿಳಂಬದ ಬಗ್ಗೆ ಕೋರ್ಟ್ ಅಸಮಾಧಾನ
ಆಗಸ್ಟ್ 13ರಂದು ನಡೆದ ವಿಚಾರಣೆಯಲ್ಲಿ, ಪೂರ್ವ-ಪ್ಯಾಕೇಜ್ ಆಹಾರಗಳ ಮೇಲಿನ ಮುಂಭಾಗದ ಪೌಷ್ಟಿಕಾಂಶ ಮಾಹಿತಿ ಲೇಬಲ್ಗಳ (Front-of-Pack Labelling – FOPL) ದೃಶ್ಯ ವಿನ್ಯಾಸದ ಕುರಿತು ಕೇಂದ್ರ ಸರ್ಕಾರ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು.
ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಾನದಂಡಗಳನ್ನು ಅನುಸರಿಸುವುದು ಸಾಧ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ನಿಲುವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ್ದ ನ್ಯಾಯಾಲಯ, “ಭಾರತ ಅಭಿವೃದ್ಧಿಯಾಗದ ದೇಶವಾಗಿಯೇ ಉಳಿಯಬೇಕೇ?” ಎಂದು ಪ್ರಶ್ನಿಸಿತ್ತು.
FOPL ಎಂದರೆ ಗ್ರಾಹಕರು ಆಹಾರ ಖರೀದಿಸುವಾಗ ಸರಿಯಾದ ಮಾಹಿತಿ ಆಧರಿಸಿ ಆರೋಗ್ಯಕರ ಆಯ್ಕೆಗಳನ್ನು ಮಾಡಿಕೊಳ್ಳಲು ನೆರವಾಗುವ ಪೌಷ್ಟಿಕಾಂಶ ಮಾಹಿತಿ ಗ್ರಾಫಿಕ್ ಆಗಿದ್ದು, ಅದು ಆಹಾರ ಪ್ಯಾಕೆಟ್ನ ಮುಂಭಾಗದಲ್ಲೇ ಪ್ರದರ್ಶಿಸಲಾಗುತ್ತದೆ.
ಜಂಕ್ ಫುಡ್ಗಳತ್ತ ಹೆಚ್ಚುತ್ತಿರುವ ಮಕ್ಕಳ ಆಕರ್ಷಣೆಯನ್ನು ಉಲ್ಲೇಖಿಸಿದ್ದ ನ್ಯಾಯಾಲಯ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಇಂತಹ ಲೇಬಲ್ಗಳು ಅತ್ಯಗತ್ಯ ಎಂದು ಹೇಳಿತ್ತು. ಭಾರತದಲ್ಲಿ ಸ್ಥೂಲಕಾಯ (ಒಬೆಸಿಟಿ) ಸಮಸ್ಯೆ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲಾಗಿ ಗುರುತಿಸಲ್ಪಟ್ಟಿದ್ದರೂ, ಪ್ಯಾಕೆಟ್ ಆಹಾರಗಳ ಮೇಲೆ ಎಚ್ಚರಿಕೆ ಲೇಬಲ್ ಜಾರಿಗೆ ವಿಳಂಬವಾಗಿರುವುದಕ್ಕೆ ಎಫ್ಎಸ್ಎಸ್ಎಐ ಅನ್ನು ಕೋರ್ಟ್ ಟೀಕಿಸಿತ್ತು.
ಈ ಹಿನ್ನೆಲೆಯಲ್ಲಿ ತಜ್ಞರೊಂದಿಗೆ ಸಮಾಲೋಚನೆ ನಡೆಸಿ FOPLನ ದೃಶ್ಯ ವಿನ್ಯಾಸದ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿತ್ತು. “ಕೇಂದ್ರ ಸರ್ಕಾರ ಸ್ವಯಂಪ್ರೇರಿತವಾಗಿ ನಿರ್ಧಾರ ಕೈಗೊಂಡರೆ ಉತ್ತಮ. ಇಲ್ಲವಾದರೆ ನಾವು ಅಗತ್ಯ ನಿರ್ದೇಶನಗಳನ್ನು ನೀಡಬೇಕಾಗುತ್ತದೆ” ಎಂದು ಹೇಳಿದ್ದ ನ್ಯಾಯಪೀಠ, ಎರಡು ವಾರಗಳೊಳಗೆ ಅಂತಿಮ ನಿರ್ಧಾರವನ್ನು ದಾಖಲೆಗೆ ಸಲ್ಲಿಸುವಂತೆ ಸೂಚಿಸಿತ್ತು.
ಹಂತ ಹಂತವಾಗಿ ಜಾರಿಗೆ ಎಫ್ಎಸ್ಎಸ್ಎಐ ಯೋಜನೆ
ಗ್ರಾಹಕರ ಸ್ವೀಕಾರಾರ್ಹತೆ ಹೆಚ್ಚಿಸಲು ಹಾಗೂ ಆಹಾರ ಉದ್ಯಮಗಳಿಗೆ ಉತ್ಪನ್ನಗಳ ಸಂಯೋಜನೆಯಲ್ಲಿ ಬದಲಾವಣೆ ತರಲು ಸಾಕಷ್ಟು ಸಮಯ ನೀಡುವ ಉದ್ದೇಶದಿಂದ ಮುಂಭಾಗದ ಪೌಷ್ಟಿಕಾಂಶ ಲೇಬಲಿಂಗ್ ವ್ಯವಸ್ಥೆಯನ್ನು ಹಂತ ಹಂತವಾಗಿ ಜಾರಿಗೊಳಿಸುವುದಾಗಿ ಎಫ್ಎಸ್ಎಸ್ಎಐ ನಂತರ ನ್ಯಾಯಾಲಯಕ್ಕೆ ತಿಳಿಸಿತು.
ಪ್ರಸ್ತಾವನೆಯ ಮೊದಲ ಹಂತದಲ್ಲಿ ಹೆಚ್ಚುವರಿ ಕೊಬ್ಬು, ಹೆಚ್ಚುವರಿ ಸಕ್ಕರೆ ಮತ್ತು ಉಪ್ಪು ಸೇರಿದಂತೆ ನಿರ್ದಿಷ್ಟ ಪೌಷ್ಟಿಕಾಂಶಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಅಂಶಗಳ ಪ್ರಮಾಣ ಅಧಿಕವಾಗಿರುವ ಉತ್ಪನ್ನಗಳು ಹಾಗೂ ನಿರ್ದಿಷ್ಟ ಸಿಹಿ ಪಾನೀಯಗಳನ್ನು ಒಳಗೊಳಿಸಿಕೊಳ್ಳಲಾಗುತ್ತದೆ.
ಎರಡನೇ ಹಂತದಲ್ಲಿ ಈ ಮೂರು ಅಂಶಗಳಲ್ಲಿ ಯಾವುದಾದರೂ ಒಂದರ ಪ್ರಮಾಣ ಮಾತ್ರ ಅಧಿಕವಾಗಿರುವ ಉತ್ಪನ್ನಗಳಿಗೂ ಎಚ್ಚರಿಕೆ ಲೇಬಲ್ ಕಡ್ಡಾಯಗೊಳಿಸಲಾಗುವುದು ಎಂದು ಎಫ್ಎಸ್ಎಸ್ಎಐ ತನ್ನ ಯೋಜನೆಯಲ್ಲಿ ತಿಳಿಸಿದೆ.


ನಿಮ್ಮ ಕಾಮೆಂಟ್ ಬರೆಯಿರಿ