ಕೆಪಿಎಸ್‌ಸಿ ನೇಮಕಾತಿ ಹಗರಣ : ಐಎಎಸ್ ಅಧಿಕಾರಿ, ಮಧ್ಯವರ್ತಿಯನ್ನು ವಶಕ್ಕೆ ಪಡೆದ ಇ.ಡಿ.

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪಶುವೈದ್ಯ ವೈದ್ಯರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಜಾರಿ ನಿರ್ದೇಶನಾಲಯ(EDವು, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರಾಗಿದ್ದ ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಹಾಗೂ ಪ್ರಮುಖ ಮಧ್ಯವರ್ತಿ ಬಸವರಾಜ ಕನ್ನಾಳೆ ಅವರನ್ನು ಬಂಧಿಸಿದೆ.
ನಾಲ್ಕು ದಿನಗಳ ವಿಚಾರಣೆ ಬಳಿಕ ಇಬ್ಬರನ್ನೂ ಇ.ಡಿ.( (ED) ಬಂಧಿಸಿದ್ದು, ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ. ಜ್ಞಾನೇಂದ್ರಕುಮಾರ ಅವರನ್ನು ಸೆಪ್ಟೆಂಬರ್ 18ರ ರಾತ್ರಿ ಜೈಲಿನಲ್ಲೇ ಬಂಧಿಸಲಾಗಿದ್ದು, ಮಧ್ಯವರ್ತಿ ಕನ್ನಾಳೆ ಅವರನ್ನು ಒಂದು ದಿನ ಮುನ್ನ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನೂ ಕರ್ನಾಟಕ ಅಪರಾಧ ತನಿಖಾ ದಳ (ಸಿಐಡಿ) ಈಗಾಗಲೇ ಬಂಧಿಸಿತ್ತು.
ಜ್ಞಾನೇಂದ್ರಕುಮಾರ ಅವರನ್ನು ಆಗಸ್ಟ್ 29ರಂದು ಸಿಐಡಿ ಬಂಧಿಸಿತ್ತು. ಬಳಿಕ ಆಗಸ್ಟ್ 30ರಂದು ದೆಹಲಿಯ ವಿಮಾನ ನಿಲ್ದಾಣದಲ್ಲಿ ಕನ್ನಾಳೆಯನ್ನು ಬಂಧಿಸಲಾಗಿತ್ತು. ಅವರು ಅಲ್ಮಾಟಿ ಮೂಲಕ ಕಜಕಿಸ್ತಾನಕ್ಕೆ ತೆರಳಿ ಅಲ್ಲಿಂದ ಉಜ್ಬೇಕಿಸ್ತಾನಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು ಎಂದು ತನಿಖಾ ಮೂಲಗಳು ತಿಳಿಸಿವೆ.
ಇದೀಗ ಇಬ್ಬರನ್ನೂ ತಮ್ಮ ವಶಕ್ಕೆ ಪಡೆಯಲು ಇ.ಡಿ. ಸೋಮವಾರ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಿದೆ ಎಂದು ಇ.ಡಿ. ಮೂಲಗಳು ತಿಳಿಸಿವೆ.

ಸಿಐಡಿ ತನಿಖೆಯ ಪ್ರಕಾರ, ರಾಜ್ಯ ಸರ್ಕಾರದ 400 ಪಶುವೈದ್ಯ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ 329 ಅಭ್ಯರ್ಥಿಗಳ ಪೈಕಿ 11 ಮಂದಿ ತಲಾ ₹35 ಲಕ್ಷದಿಂದ ₹80 ಲಕ್ಷದವರೆಗೆ ಹಣವನ್ನು ಮಧ್ಯವರ್ತಿ ಬಸವರಾಜ ಕನ್ನಾಳೆಗೆ ಪಾವತಿಸಿದ್ದರು ಎನ್ನಲಾಗಿದೆ. ಈ ಹಣದ ಮೂಲಕ ಕೆಪಿಎಸ್‌ಸಿ ನೇಮಕಾತಿ ಪಡೆಯಲು ಅಭ್ಯರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಕನ್ನಾಳೆ ಅಭ್ಯರ್ಥಿಗಳಿಂದ ಸಂಗ್ರಹಿಸಿದ್ದ ಸುಮಾರು ₹52 ಲಕ್ಷ ಹಣವನ್ನು 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ ಅವರು ಚಿನ್ನ ಮತ್ತು ವಜ್ರದ ಆಭರಣ ಖರೀದಿಸಲು ಬಳಸಿಕೊಂಡಿದ್ದಾರೆ ಎಂದು ಸಿಐಡಿ ತನಿಖೆ ತಿಳಿಸಿದೆ. ನಗರದ ಪ್ರಮುಖ ಆಭರಣ ಮಳಿಗೆಯೊಂದರಲ್ಲಿ ಈ ಹಣವನ್ನು ಬಳಸಲಾಗಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.
ಪಶುವೈದ್ಯರ ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಜ್ಞಾನೇಂದ್ರಕುಮಾರ ಮಧ್ಯವರ್ತಿ ಕನ್ನಾಳೆಗೆ ಸೋರಿಕೆ ಮಾಡಿದ್ದರು ಎಂಬ ಆರೋಪವೂ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಗೆ ಹಿಂದಿನ ರಾತ್ರಿ ಕನ್ನಾಳೆ ಹಣ ಪಾವತಿಸಿದ್ದ ಅಭ್ಯರ್ಥಿಗಳನ್ನು ಬಾಡಿಗೆ ಕಾರುಗಳಲ್ಲಿ ದೇವನಹಳ್ಳಿಯ ಆರ್ಕಿಡ್ ರೆಸಾರ್ಟ್‌ಗೆ ಕರೆದೊಯ್ದು ಪ್ರಶ್ನೆಪತ್ರಿಕೆ ಕುರಿತು ತರಬೇತಿ ನೀಡಿದ್ದ ಎನ್ನಲಾಗಿದೆ. ಮರುದಿನ ಅವರನ್ನು ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ದಿದ್ದಾನೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.
ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕರು ಸೋರಿಕೆ ಮಾಡಿದ್ದರೆನ್ನಲಾದ ಪ್ರಶ್ನೆಪತ್ರಿಕೆಗಳನ್ನು ಎನ್‌ಕ್ರಿಪ್ಟ್‌ ಮಾಡಲಾದ ಚಾನೆಲ್‌ಗಳ ಮೂಲಕ ಅಭ್ಯರ್ಥಿಗಳಿಗೆ ಕೈಬರಹ ಹಾಗೂ ಮುದ್ರಿತ ರೂಪದಲ್ಲಿ ಹಂಚಿಕೆ ಮಾಡಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಪಶುವೈದ್ಯರ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳು ಈ ವರ್ಷದ ಜನವರಿ 8 ಮತ್ತು 9ರಂದು ನಡೆದಿದ್ದವು.

ಪ್ರಮುಖ ಸುದ್ದಿ :-   ರಾಯಚೂರು : ಗಣೇಶ ವಿಸರ್ಜನೆ ವೇಳೆ ಟ್ರ್ಯಾಕ್ಟರ್‌ನಿಂದ ಬಿದ್ದು ಇಬ್ಬರು ಬಾಲಕರು ಸಾವು

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಇ.ಡಿ.ಯು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಕರ್ನಾಟಕದ ಬೆಂಗಳೂರು, ಹಾಸನ, ಚಿತ್ರದುರ್ಗ, ದಾವಣಗೆರೆ, ರಾಯಚೂರು, ಕಾರವಾರ, ಕಲಬುರಗಿ ಮತ್ತು ಬೆಳಗಾವಿ ಸೇರಿದಂತೆ ವಿವಿಧೆಡೆ ಹಾಗೂ ಗುಜರಾತ್‌ನ ಅಹಮದಾಬಾದ್‌ನಲ್ಲಿ ಒಟ್ಟು 21 ಸ್ಥಳಗಳಲ್ಲಿ ಶೋಧ ನಡೆಸಿತ್ತು.
ಇದೇ ವೇಳೆ, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಐಎಎಸ್ ಅಧಿಕಾರಿ ಜ್ಞಾನೇಂದ್ರಕುಮಾರ ಅವರನ್ನು ಇ.ಡಿ. ತನಿಖೆಯಿಂದ ರಕ್ಷಿಸುತ್ತಿದೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.
ಈ ಪ್ರಕರಣದ ತನಿಖೆಯ ವ್ಯಾಪ್ತಿಯಲ್ಲಿ ಅಮಾನತುಗೊಂಡಿರುವ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ಅವರ ಹೆಸರೂ ಕೇಳಿಬಂದಿದೆ. ತಮ್ಮ ಪುತ್ರಿಯ ಅಕ್ರಮ ನೇಮಕಾತಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣವೊಂದನ್ನು ಈಗಾಗಲೇ ಎದುರಿಸುತ್ತಿರುವ ಸಾಹುಕಾರ್ ಅವರಿಗೆ ಬಸವರಾಜ ಕನ್ನಾಳೆಯೊಂದಿಗೆ ಸಂಪರ್ಕವಿದ್ದಿರಬಹುದು ಎಂಬ ಶಂಕೆಯ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ. ಆದರೆ, ತನಿಖೆಗೆ ಸಹಕರಿಸುತ್ತಿರುವುದಾಗಿ ಹೇಳಿರುವ ಕಾರಣಕ್ಕೆ ಸಿಐಡಿ ಈವರೆಗೆ ಶಿವಶಂಕರಪ್ಪ ಸಾಹುಕಾರ ಅವರನ್ನು ಬಂಧಿಸಿಲ್ಲ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement