ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ ಅವರಿಗೆ ಜಾಮೀನು ನೀಡಲು ಪಿಎಂಎಲ್ಎ ವಿಶೇಷ ನ್ಯಾಯಾಲಯ ನಿರಾಕರಿಸಿದೆ.
ಜಾಮೀನು ಕೋರಿ ಅನಿಲ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಡಿಸೆಂಬರ್ನಲ್ಲಿ ಆದೇಶ ಕಾಯ್ದಿರಿಸಿದ್ದ ವಿಶೇಷ ನ್ಯಾಯಾಧೀಶ ಆರ್. ಎನ್. ರೋಕಡೆ ಇಂದು, ಸೋಮವಾರ ತೀರ್ಪು ಪ್ರಕಟಿಸಿದ್ದಾರೆ. ಸಾಕ್ಷಿಗಳ ಹೇಳಿಕೆಗಳಲ್ಲಿ ವಿರೋಧಾಭಾಸಗಳಿದ್ದರೂ ಈ ಹಂತದಲ್ಲಿ ನ್ಯಾಯಾಲಯ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಮುಖ್ಯವಾಗಿ ಅಕ್ರಮ ಹಣ ವರ್ಗಾವಣೆಯನ್ನು ಸಾಬೀತು ಪಡಿಸುವ ಪ್ರಾಥಮಿಕ ಸಾಕ್ಷ್ಯದ ಆಧಾರದ ಮೇಲೆ ಜಾಮೀನಿಗೆ ವಿಧಿಸಲಾಗಿದ್ದ ಎರಡು ಷರತ್ತುಗಳನ್ನು ಪೂರೈಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಹಿರಿಯ ವಕೀಲ ವಿಕ್ರಮ್ ಚೌಧರಿ ಮತ್ತು ವಕೀಲ ಅನಿಕೇತ್ ನಿಕಮ್ ದೇಶಮುಖ್ ಪರವಾಗಿ ವಾದ ಮಂಡಿಸಿದರು. ಹೆಚ್ಚುವರಿ ಸಾಲಿಸಿಟರ್ ಅನಿಲ್ ಸಿಂಗ್ ಮತ್ತು ವಕೀಲ ಶ್ರೀರಾಂ ಶಿರಸಾಟ್ ಅವರು ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ