ನವದೆಹಲಿ: ಉತ್ತರ ಮುಂಬೈ ಕ್ಷೇತ್ರದಿಂದ 18ನೇ ಲೋಕಸಭೆಗೆ ಪ್ರವೇಶಿಸಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಬದಲಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ ನಡ್ಡಾ ಅವರನ್ನು ರಾಜ್ಯಸಭೆಯ ಸಭಾನಾಯಕರನ್ನಾಗಿ ನೇಮಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಫೆಬ್ರವರಿಯಲ್ಲಿ ಮೇಲ್ಮನೆಗೆ ಅವಿರೋಧವಾಗಿ ಆಯ್ಕೆಯಾದ 41 ಅಭ್ಯರ್ಥಿಗಳಲ್ಲಿ ಜೆ.ಪಿ. ನಡ್ಡಾ ಕೂಡ ಒಬ್ಬರು. ಗೋಯಲ್ ಅವರು ಜುಲೈ 5, 2010 ರಂದು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು ಮತ್ತು ಜುಲೈ 14, 2021 ರಂದು ಸಭಾನಾಯಕರಾಗಿ ನೇಮಕವಾದರು. ಅವರು ಜೂನ್ 4 ರಂದು ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು ಮತ್ತು ಜೂನ್ 24 ರಂದು ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೀಗಾಗಿ ಈಗ ಅವರ ಬದಲಿಗೆ ಜೆ.ಪಿ.ನಡ್ಡಾ ಅವರನ್ನು ರಾಜ್ಯಸಭಾ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಹೊಸ ಎನ್ಡಿಎ ಸರ್ಕಾರದಲ್ಲಿ ನಡ್ಡಾ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದಾರೆ. ನಡ್ಡಾ ಅವರಲ್ಲದೆ, ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯಸಭೆಯ 11 ಸದಸ್ಯರಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ