
ನವದೆಹಲಿ: ಹಿಮಾಚಲ ಪ್ರದೇಶದ ಮಂಡಿಯಿಂದ ನೂತನವಾಗಿ ಆಯ್ಕೆಯಾದ ಸಂಸದೆ ಸಂಸದೆ ಮತ್ತು ನಟಿ ಕಂಗನಾ ರಣಾವತ್ ಅವರಿಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಕಾನ್ಸ್ಟೆಬಲ್ ಒಬ್ಬರು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಕಂಗನಾ ರಣಾವತ್ ಅವರು ಚಂಡೀಗಢ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ವಿಮಾನ ಹತ್ತಲು ಹೊರಟಿದ್ದಾಗ ಈ ಘಟನೆ ಸಂಭವಿಸಿದೆ.ಕಂಗನಾ ವಿಮಾನ ನಿಲ್ದಾಣದ ಫ್ರಿಸ್ಕಿಂಗ್ ಬೂತ್ನಲ್ಲಿದ್ದಾಗ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷದ ಘಟನೆ ನಡೆದಿದೆ. ಕಂಗನಾ “ರೈತರಿಗೆ ಅಗೌರವ ತೋರಿದ್ದಾರೆ” ಎಂದು ಕಪಾಳಮೋಕ್ಷ ಮಾಡಿದ್ದಾಗಿ ಹೇಳಲಾಗಿದೆ.
ನೂತನ ಸಂಸದರಿಗೆ ಕಪಾಳಮೋಕ್ಷ ಮಾಡಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಕಾನ್ಸ್ಟೆಬಲ್ ಅನ್ನು ಕುಲ್ವಿಂದರ್ ಕೌರ್ ಎಂದು ಗುರುತಿಸಲಾಗಿದೆ. ಆಕೆಯನ್ನು ಅಮಾನತುಗೊಳಿಸಲಾಗಿದ್ದು, ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

(ಈಗ ರದ್ದುಪಡಿಸಲಾಗಿದೆ) ಕೃಷಿ ಕಾನೂನುಗಳ ವಿರುದ್ಧ ರೈತರು 15 ತಿಂಗಳ ಕಾಲ ನಡೆಸುತ್ತಿದ್ದ ಪ್ರತಿಭಟನೆ ಕುರಿತು ಕಂಗನಾ ನೀಡಿದ ಹೇಳಿಕೆಯಿಂದ ಕುಲ್ವಿಂದರ್ ಕೌರ್ ಗೆ ಆಕ್ರೋಶವಿತ್ತು ಎಂದು ಹೇಳಲಾಗುತ್ತಿದೆ. ಆಕೆಯ ತಾಯಿ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂದು ಹೇಳಿದ್ದಾಳೆ. ಈ ಕಾರಣದಿಂದ ಇಂದು, ಗುರುವಾರ ಆ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಕೌರ್ ಅವರು ಬಿಜೆಪಿ ಸಂಸದರಿಗೆ ಕಪಾಳಮೋಕ್ಷ ಮಾಡಿದ್ದಾಳೆ.
ಮೊಹಾಲಿಯ ನಿವಾಸಿ ಕುಲ್ವಿಂದರ್ ಕೌರ್ ಕಳೆದ ಎರಡು ವರ್ಷಗಳಿಂದ ಚಂಡೀಗಢ ವಿಮಾನ ನಿಲ್ದಾಣದಲ್ಲಿ ನೇಮಕಗೊಂಡಿದ್ದಾರೆ. ದೆಹಲಿ, ಹರಿಯಾಣ ಮತ್ತು ಪಂಜಾಬ್ ನಡುವಿನ ವಿವಿಧ ಗಡಿಗಳಲ್ಲಿ ಪ್ರತಿಭಟನಾಕಾರರಿಗೆ ತಲಾ 200 ರೂಪಾಯಿ ಲಂಚ ನೀಡಲಾಗಿದೆ ಎಂದು ಕಂಗನಾ ಹೇಳಿಕೆ ನೀಡಿದ್ದರು. ಎರಡು ಮಕ್ಕಳ ತಾಯಿ ಕುಲ್ವಿಂದರ್ ತಮ್ಮ ತಾಯಿ ಕೂಡ ರೈತರ ಪ್ರತಿಭಟನೆಯಲ್ಲಿ ಕುಳಿತಿದ್ದರು ಎಂದು ಹೇಳಿದ್ದು, ಅದಕ್ಕಾಗಿ ಕಂಗನಾ ವಿರುದ್ಧ ಆಕ್ರೋಶವಿತ್ತು ಎನ್ನಲಾಗಿದೆ.
ದೆಹಲಿ ತಲುಪಿದ ಕೂಡಲೇ ಕಂಗನಾ ರಣಾವತ್ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಮಹಾ ನಿರ್ದೇಶಕರಾದ ನೀನಾ ಸಿಂಗ್ ಅವರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಚಂಡಿಗಢ ವಿಮಾನ ನಿಲ್ದಾಣದ ನಿರ್ಬಂಧಿತ ಸ್ಥಳದಲ್ಲಿ ತಾವು ನಿಂತಿದ್ದಾಗ ಸಿಐಎಸ್ಎಫ್ ಮಹಿಳಾ ಕಾನ್ಸ್ಟೇಬಲ್ ಬಂದು ಕಪಾಳಕ್ಕೆ ಹೊಡೆದರು ಎಂದು ಕಂಗನಾ ರಣಾವತ್ ಆರೋಪಿಸಿದ್ದಾರೆ. ಕುಲ್ವಿಂದರ್ ಕೌರ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು ಆಕೆಯನ್ನು ಸಿಐಎಸ್ಎಫ್ ಕಸ್ಟಡಿಗೆ ಒಳಪಡಿಸಲಾಗಿದೆ.
ಕುಲ್ವಿಂದರ್ ಕೌರ್ ಸಹೋದರ ಕಿಸಾನ್ ಮಜ್ದೂರ್ ಸಂಘರ್ಷ್ ಸಮಿತಿಯಲ್ಲಿ ಸಾಂಸ್ಥಿಕ ಕಾರ್ಯದರ್ಶಿಯಾಗಿದ್ದಾರೆ ಎನ್ನಲಾಗಿದೆ. ಕುಲ್ವಿಂದರ್ ಪತಿ ಕೂಡ CISF ನಲ್ಲಿ ಉದ್ಯೋಗಿಯಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ