ಮರವಂತೆ : ಸಮುದ್ರಕ್ಕೆ ಉರುಳಿದ ಕಾರು- ಓರ್ವನ ಸಾವು, ಇನ್ನೋರ್ವ ನಾಪತ್ತೆ

ಉಡುಪಿ:ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಸಮುದ್ರಕ್ಕೆ ಕಾರೊಂದು ಉರುಳಿ ಬಿದ್ದು, ಓರ್ವ ಮೃತಪಟ್ಟಿದ್ದು, ಇನ್ನೋರ್ವ ಸಮುದ್ರದಲ್ಲಿ ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದವನಿಗೆ ಹುಡುಕಾಟ ನಡೆಯುತ್ತಿದೆ.
ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಕಳೆದ ರಾತ್ರಿ ರಾಷ್ಟ್ರೀಯ ಹೆದ್ದಾರಿ ಮೇಲಿನಿಂದ ಕಾರು ಸಮುದ್ರಕ್ಕೆ ಬಿದ್ದಿದೆ. ಆ ಕಾರಿನಲ್ಲಿ ನಾಲ್ವರಿದ್ದರು. ಓರ್ವ ಕಾರಿನೊಳಗೆ ಮೃತಪಟ್ಟಿದ್ದು, ಮತ್ತೊಬ್ಬರು ಸಮುದ್ರ ನೀರಲ್ಲಿ ನಾಪತ್ತೆಯಾಗಿದ್ದಾರೆ.

ಅವರಿಗಾಗಿ ಅಗ್ನಿಶಾಮಕದಳದವರು, ಮೀನುಗಾರರು ಶೋಧ ನಡೆಸುತ್ತಿದ್ದಾರೆ. ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರದ ಕೋಟೇಶ್ವರ ಬಳಿಯಿಂದ ಬೈಂದೂರು ಕಡೆಗೆ ಕಾರು ತೆರಳುತ್ತಿತ್ತು. ಕಾರಿನೊಳಗೆ ವೀರಜ್ ಆಚಾರ್ಯ (೨೮) ಎಂಬವರ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳ ಆಗಮಿಸಿ, ಕಾರನ್ನು ಮೇಲಕ್ಕೆತ್ತಿದೆ. ಜೋರಾದ ಗಾಳಿ ಮಳೆಗೆ ರಸ್ತೆ ಕಾಣದೆ ಕಾರು ರಸ್ತೆ ಬಿಟ್ಟು ಸಮುದ್ರಕ್ಕೆ ಉರುಳಿರಬಹುದು, ನಂತರ ಸಮುದ್ರದಲ್ಲಿ ತೇಲಿ ಹೋಗಿದೆ  ಎಂದು ಶಂಕಿಸಲಾಗಿದೆ.ಸಮುದ್ರದಲ್ಲಿ ತೆರೆಗಳ ಅಬ್ಬರ ಜೋರಾಗಿರುವುದರಿಂದ ಶೋಧ ಕಾರ್ಯಕ್ಕೆ ತೊಂದರೆಯಾಗುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement