ಬೆಂಗಳೂರು: ಸಚಿವ ಮಧು ಬಂಗಾರಪ್ಪ ಅವರಿಗೆ ಅಹಂ ಜಾಸ್ತಿ ಆಗಿದೆ, ಅಧಿಕಾರದ ಪಿತ್ತ ನೆತ್ತಿಗೆ ಏರಿದೆ ಎಂದು ಸಾಗರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮದೇ ಸರ್ಕಾರದ ಸಚಿವ ಮಧು ಬಂಗಾರಪ್ಪ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆದರೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಹಂ ಜಾಸ್ತಿ ಆಗಿದೆ. ಎಲ್ಲಾ ವಿಚಾರದಲ್ಲಿ ಮೂಗು ತೂರಿಸುತ್ತಾರೆ. ನಾವು ಶಾಸಕರು, ನಮ್ಮನ್ನು ಕರೆದುಕೊಂಡು ಸಭೆ ಮಾಡಬೇಕು, ನಮಗೂ ಜವಾಬ್ದಾರಿ ಇರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಅಹಂ ಜಾಸ್ತಿ ಆದಾಗ ಏನು ಮಾಡಲಿಕ್ಕೆ ಆಗುವುದಿಲ್ಲ. ಅಧಿಕಾರ ಬಂದ ಸಂದರ್ಭದಲ್ಲಿ ಪಿತ್ತ ನೆತ್ತಿಗೆರಿದಾಗ ಇವೆಲ್ಲವೂ ಆಗುತ್ತದೆ. ಸಚಿವರು ಕ್ಷೇತ್ರದ ಶಾಸಕರನ್ನ ಕರೆದುಕೊಂಡು ಹೋಗಬೇಕು. ಬೇರೆ ಸಚಿವರು ನೋಡಿ ಎಷ್ಟು ಚೆನ್ನಾಗಿ ಮಾತನಾಡುತ್ತಾರೆ. ಜನರ ಜೊತೆಗೆ ಹೇಗೆ ಇರುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಅವರು ಮುಖಮಂತ್ರಿಯಾಗಿದ್ದವರ ಮಗ, ಅವರು ಹೇಗೆ ನಡೆದುಕೊಳ್ಳಬೇಕಿತ್ತು. ನಾವೂ ಬಂಗಾರಪ್ಪ ಅವರ ಗರಡಿಯಲ್ಲೇ ಬೆಳೆದವರು. ಅವರು ಎಲ್ಲರನ್ನು ಒಗ್ಗೂಡಿಸಿ ಕರೆದುಕೋಡು ಹೋಗಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯಲ್ಲಿ ಪಕ್ಷ ಎರಡು ಭಾಗ ಆಗಿದೆ. ಅದನ್ನು ಸರಿಪಡಿಸಬೇಕು. ಮುಂದಿನ ಚುನಾವಣೆಯಲ್ಲಿ ಏನು ಮಾಡಬೇಕು ಎಂದು ಅವರು ನೋಡಬೇಕು. ನಮಗೂ ಜವಾಬ್ದಾರಿ ಇದೆ, ಅವರಿಗಿಂತ ಹೆಚ್ಚು ಜವಾಬ್ದಾರಿ ಇದೆ. ನಮ ಪಕ್ಷದಲ್ಲೇ ಇದ್ದು ಹುಳುಕು ಮಾಡುವುದಲ್ಲ, . ಯಡಿಯೂರಪ್ಪ ಅವರ ಮಕ್ಕಳನ್ನು ಸೋಲಿಸಬೇಕು ಎಂದು ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ