ಉಡುಪಿ : 12 ವರ್ಷದ ಏಳನೇ ತರಗತಿ ಓದುತ್ತಿರುವ ಬಾಲಕನೊಬ್ಬ ಬೃಹತ್ ಗಾತ್ರದ ಹೆಬ್ಬಾವು ಹಿಡಿದು ಎಲ್ಲರ ಗಮನ ಸೆಳೆದಿದ್ದಾನೆ.
ಈ ಬಾಲಕ ಈಗ ಹೆಬ್ಬಾವು ಹಿಡಿದಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉಡುಪಿ-ಕುಂದಾಪುರ ನಡುವಿನ ಸಾಲಿಗ್ರಾಮದ ದೇವಾಡಿಗರಬೆಟ್ಟು ಗ್ರಾಮದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಂಡು ಬಂದಿತ್ತು. ಹೆಬ್ಬಾವು ಬಂದ ಬಗ್ಗೆ ಮಾಹಿತಿ ಪಡೆದ ನಂತರ ಬಾಲಕ ಹಾಗೂ ಆತನ ತಂದೆ ಅಲ್ಲಿಗೆ ಹೋಗಿದ್ದಾರೆ.
ಹುಲ್ಲಿನ ಪೊದೆಯಲ್ಲಿ ಅಡಗಿದ್ದ ಬೃಹತ್ ಗಾತ್ರದ ಹೆಬ್ಬಾವನ್ನು ಆತನ ತಂದೆ ಹಿಡಿದು ಎಳೆದರೆ ಮಗ ಸ್ವಲ್ಪವೂ ಭಯಗೊಳ್ಳದೆ ಹೆಬ್ಬಾವಿನ ತಲೆಯನ್ನು ಗಟ್ಟಿಯಾಗಿ ಅದನ್ನು ತನ್ನ ಹತೋಟಿಗೆ ತೆಗೆದುಕೊಂಡಿದ್ದಾನೆ. ಈ ಸಾಹಸ ಮಾಡಿದ ಬಾಲಕನ ಹೆಸರು ಧೀರಜ. ಆತನ ತಂದೆ ಈ ಭಾಗದ ಖ್ಯಾತ ಉರಗ ತಜ್ಞ ಸುಧೀಂದ್ರ ಐತಾಳ. ಸಾಲಿಗ್ರಾಮ ಪರಿಸರದಲ್ಲಿ ವಿಷ ಜಂತುಗಳು ಹಾಗೂ ಹಾವುಗಳು ಕಂಡು ಬಂದರೆ ಜನ ಮೊದಲು ಕರೆ ಮಾಡುವುದೇ ಸುಧೀಂದ್ರ ಐತಾಳ ಅವರಿಗೆ.
ಹಲವಾರು ವರ್ಷಗಳಿಂದ ಅವರು ಹಾವುಗಳನ್ನು ಹಿಡಿದು ಅವುಗಳನ್ನು ಸುರಕ್ಷಿತ ಪ್ರದೇಶದಲ್ಲಿ ಬಿಟ್ಟು ಬರುತ್ತಿದ್ದಾರೆ. ತಂದೆ ಸುಧೀಂದ್ರ ಐತಾಳ ಅವರ ಹಾವು ಹಿಡಿಯುವುದನ್ನು ಗಮನಿಸಿದ ಮಗ ಧೀರಜ್ ಸಹ ಸಣ್ಣ ವಯಸ್ಸಿನಲ್ಲೇ ಯಾವುದೇ ಭಯವಿಲ್ಲದೆ ಹಾವು ಹಿಡಿಯುತ್ತಾನೆ. ತಂದೆ ಕೆಲವೊಮ್ಮೆ ಹಾವು ಹಿಡಿಯುವ ಸಂದರ್ಭದಲ್ಲಿ ಅವರ ಜೊತೆ ಹೋಗಿ ಯಾವ ರೀತಿಯಲ್ಲಿ ಹಾವು ಹಿಡಿಯಬೇಕು ಎಂಬ ಮಾಹಿತಿಯನ್ನು ಕರಗತ ಮಾಡಿಕೊಂಡಿದ್ದಾನೆ.
ದೇವಾಡಿಗರಬೆಟ್ಟಿನಲ್ಲೂ ಹಾವು ಕಂಡು ಬಂದ ನಂತರ ಸುಧೀಂದ್ರ ಅವರಿಗೆ ಫೋನ್ ಕರೆ ಮಾಹಿತಿ ನೀಡಲಾಗಿದೆ.
ಹೆಬ್ಬಾವು ಹಿಡಿಯಲು ಸುಧೀಂದ್ರ ಅವರು ಮಗನನ್ನು ಕರೆದುಕೊಂಡು ಹೋಗಿದ್ದಾರೆ. ಬೃಹತ್ ಗಾತ್ರದ ಹಾವಿನ ತೆರೆದ ಬಾಯಿಯನ್ನು ತಪ್ಪಿಸಿ ತಲೆಯನ್ನು ಹಿಡಿಯಲು ಸಾಕಷ್ಟು ಅನುಭವ ಬೇಕು ಬಳಿಕ ತಂದೆ- ಮಗ ಇಬ್ಬರೂ ಸೇರಿ ಹಾವನ್ನು ಪೊದೆಯಿಂದ ಹೊರಗೆಳೆದಿದ್ದಾರೆ. ಅವರು ಹೆಬ್ಬಾವನ್ನು ಬಾಲದಿಂದ ಹಿಡಿದು ಹಿಂದಕ್ಕೆ ಎಳೆಯುತ್ತಿದ್ದರೆ ಬೃಹತ್ ಗಾತ್ರದ ಆ ಹಾವು ಅವರನ್ನೇ ಮುಂದಕ್ಕೆ ಎಳೆಯುತ್ತಿತ್ತು. ಇದನ್ನೆಲ್ಲ ನೋಡುತ್ತಿದ್ದ ಧೀರಜ್ ತಂದೆಗೆ ಸಹಾಯ ಮಾಡಲು ಮುಂದಾದ. ಅಪ್ಪ ಹಾವಿನ ಬಾಲವನ್ನು ಎಳೆದರೆ ಧೀರಜ್ ಹಾವಿನ ತಲೆಯ ಭಾಗವನ್ನು ಹಿಡಿದು ಅದನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದಾನೆ.ಅದು ಆತನಿಗೆ ಸುರುಳಿ ಹಾಕಲು ಯತ್ನಿಸಿದೆ. ಹಾವನ್ನು ಹಿಡಿದಾಗ ಅದು ಸಾಕಷ್ಟು ಹೋರಾಟವನ್ನು ಮಾಡುತ್ತದೆ. ಹಿಡಿದವರ ಕೈ, ಮೈಯನ್ನು ಸುತ್ತಿ ಸುರುಳಿ ಹಾಕಿ ಅವರ ಉಸಿರುಗಟ್ಟಿಸಲು ಅದು ಯತ್ನಿಸುತ್ತದೆ. ಆದರೆ, ಬಾಲಕ ಅದಕ್ಕೆ ಅವಕಾಶ ಕೊಡದೆ ಬೃಹತ್ ಹೆಬ್ಬಾವಿನ ತಲೆ ಹಿಡಿದು ಹಬ್ಬಾವಿನ ಶಕ್ತಿ ಕುಗ್ಗುವಂತೆ ಮಾಡಿದ್ದಾನೆ.
ನಿಮ್ಮ ಕಾಮೆಂಟ್ ಬರೆಯಿರಿ