ತಿರುವನಂತಪುರಂ : ತೃತೀಯ ಲಿಂಗಿಗೂ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಸೇರಲು ಹಕ್ಕಿದೆ ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತಿರುವನಂತಪುರದ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಹೀನಾ ಹನೀಫಾ ಅಲಿಯಾಸ್ ಮುಹಮ್ಮದ್ ಆಸಿಫ್ ಅವರು ತೃತೀಯ ಲಿಂಗಿಗಳ ಹಕ್ಕು ಬಾಧ್ಯತೆ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ಕ್ರಮವೇನು ಎಂದು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಪುರಸ್ಕರಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ
1948ರ ನ್ಯಾಷನಲ್ ಕೆಡೆಟ್ ಕೋರ್ ಕಾಯಿದೆಯ ಸೆಕ್ಷನ್ 6 ಅನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಅನು ಶಿವರಾಮನ್ ಅವರಿದ್ದ ಪೀಠವು ಕಾಯಿದೆಯ ಅನ್ವಯ ಕೇವಲ ಪುರುಷ ಅಥವಾ ಸ್ತ್ರೀಯರು ಮಾತ್ರವೇ ಎನ್ಸಿಸಿ ಸೇರಬಹುದಾಗಿದೆ. ಆದರೆ, ಅರ್ಜಿದಾರರು ತಮ್ಮ ಸ್ವಯಂ ಲಿಂಗತ್ವ ಸಮರ್ಥಿಸಲು ಲಿಂಗತ್ವ ಮಾರ್ಪಾಟು ಚಿಕಿತ್ಸೆಗೂ ಒಳಗಾಗಿದ್ದು ಅವರು ಖಂಡಿತವಾಗಿಯೂ ತೃತೀಯ ಲಿಂಗಿಯಾಗಿ ಹಾಗೂ ಸ್ತ್ರೀ ಎನ್ನುವ ತಮ್ಮ ಲಿಂಗತ್ವದ ಸ್ವಯಂ ಗ್ರಹಿಕೆಯ ಗುರುತಿನ ಆಧಾರದಲ್ಲಿ ಎನ್ಸಿಸಿಯಲ್ಲಿ ದಾಖಲಾಗುವ ಹಕ್ಕು ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.
ತೃತೀಯ ಲಿಂಗಿ ವ್ಯಕ್ತಿಗಳ (ರಕ್ಷಣೆ ಮತ್ತು ಹಕ್ಕುಗಳು) ಕಾಯಿದೆ, 2019 ಅನ್ನು ಎನ್ಸಿಸಿಯ ನಿಬಂಧನೆಯು ಮೀರುವಂತಿಲ್ಲ ಎಂದಿದೆ. 2019ರ ಕಾಯಿದೆಯು ತೃತೀಯ ಲಿಂಗಿಗಳ ವಿರುದ್ಧ ತಾರತಮ್ಯ ನಿಷೇಧಿಸುತ್ತದೆ, ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ನೋಡಬೇಕಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಎನ್ಸಿಸಿ ಕಾಯಿದೆಯು ತೃತೀಯ ಲಿಂಗಿಗಳನ್ನು ಗುರುತಿಸುವುದಿಲ್ಲ ಎನ್ನುವುದಾಗಲಿ, ಸೇನೆ ಅಥವಾ ಎನ್ಸಿಸಿಗೆ ತೃತೀಯ ಲಿಂಗಿಗಳ ಸೇರ್ಪಡೆಗೆ ವಿಸ್ತೃತವಾದ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ ಎಂಬ ಕಾರಣ ನೀಡಿ ಅವರ ಅರ್ಜಿಯನ್ನು ತಿರಸ್ಕರಿಸಲಾಗದು ಎಂದು ನ್ಯಾ. ಅನು ಅಭಿಪ್ರಾಯಪಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ