ಕೋಲಾರ: ಮಾಜಿ ಸಭಾಪತಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ವಿ.ಆರ್ ಸುದರ್ಶನ್ (V.R Sudarshan) ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಇಂದು, ಶನಿವಾರ (ಏಪ್ರಿಲ್ 15) ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬೇಸರ ತರಿಸಿದೆ. ಹಾಗಾಗಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿರುವುದಾಗಿ ಪ್ರಕಟಿಸಿದ್ದಾರೆ.
1976 ರಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೆ. ಆದರೆ ಇನ್ನು ಮುಂದೆ ಜನಪರ ಹಾಗೂ ಸಂವಿಧಾನ ಬದ್ಧ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತೇನೆ. ರಾಜಕೀಯ ಕಾರ್ಯಕ್ರಮ ಹಾಗೂ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದರು.
ರಾಜಕೀಯ ನಿವೃತ್ತಿ ಹೊಂದಲು ಇದು ಒಳ್ಳೆಯ ಸಮಯ. ಮುಂದಿನ ಬೆಳವಣಿಗೆ ಕುರಿತು ಏಪ್ರಿಲ್ 25 ರ ನಂತರ ಮಾತನಾಡುತ್ತೇನೆ. ಸೆಲ್ಯೂಟ್ ಟು ಕಾಂಗ್ರೆಸ್, ಕರ್ನಾಟಕದ ಜನರಿಗೆ ಶುಭಾಷಯ ಎಂದು ಹೇಳಿದರು.
ವಿ. ಅರ್ ಸುದರ್ಶನ್ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದರೆ ಬೆಂಬಲಿಸುವುದಾಗಿ ಹೇಳಿದ್ದರು. ಒಂದು ವೇಳೆ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಿಲ್ಲವಾದರೆ ತಾವೂ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದರು. ಆದರೆ ಕಾಂಗ್ರೆಸ್ ಇಂದು ಶನಿವಾರ ಬಿಡುಗಡೆ ಮಾಡಿದ 3ನೇ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೋಲಾರಕ್ಕೆ ಕೊತ್ತನೂರು ಮಂಜುನಾಥ ಎಂಬವರಿಗೆ ಟಿಕೆಟ್ ನೀಡಿದೆ. ನಂತರದಲ್ಲಿ ಅವರು ರಾಜಕೀಯ ನಿವೃತ್ತಿ ಘೋಷಣೆ ಬಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ