ನವದೆಹಲಿ: ನ್ಯಾಷನಲ್ ಅಕಾಡೆಮಿ ಆಫ್ ಲೆಟರ್ಸ್ 2024 ರ ಯುವ ಪುರಸ್ಕಾರ ಹಾಗೂ ಬಾಲ ಸಾಹಿತ್ಯ ಪುರಸ್ಕಾರ ವಿಜೇತರ ಹೆಸರನ್ನು ಸಹ ಪ್ರಕಟಿಸಿದ್ದು, ಕರ್ನಾಟಕದ ಶ್ರುತಿ ಬಿ.ಆರ್ ಯುವ ಪುರಸ್ಕಾರ ಹಾಗೂ ಕೃಷ್ಣಮೂರ್ತಿ ಬಿಳಿಗೆರೆ ಬಾಲ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಶ್ರುತಿ ಅವರ ಚೊಚ್ಚಲ ಕವನ ಸಂಕಲನ ‘ಜಿರೋ ಬ್ಯಾಲೆನ್ಸ್’ಗೆ ಪ್ರಶಸ್ತಿ ಲಭಿಸಿದೆ ಹಾಗೂ ಕೃಷ್ಣಮೂರ್ತಿ ಅವರ ‘ಛೂಮಂತ್ರಯ್ಯನ ಕಥೆಗಳು’ ಕಥಾ ಸಂಗ್ರಹಕ್ಕೆ ಬಾಲ ಸಾಹಿತ್ಯ ಪ್ರಶಸ್ತಿ ದೊರೆತಿದೆ.
ಇಂಗ್ಲಿಷ್ ಲೇಖಕಿ ಕೆ. ವೈಶಾಲಿ ಮತ್ತು ಹಿಂದಿ ಲೇಖಕ ಗೌರವ ಪಾಂಡೆ ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರತಿಷ್ಠಿತ ಯುವ ಪುರಸ್ಕಾರವನ್ನು ಸ್ವೀಕರಿಸುವ 23 ಬರಹಗಾರರಲ್ಲಿ ಸೇರಿದ್ದಾರೆ. ಸಂಸ್ಕೃತದಲ್ಲಿ ಯುವ ಪುರಸ್ಕಾರ ವಿಜೇತರನ್ನು ನಂತರದ ದಿನಾಂಕದಲ್ಲಿ ಪ್ರಕಟಿಸಲಾಗುವುದು ಎಂದು ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ. “ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಮಂಡಳಿಯು ಅದರ ಅಧ್ಯಕ್ಷ ಮಾಧವ್ ಕೌಶಿಕ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ 23 ಬರಹಗಾರರ ಆಯ್ಕೆಯನ್ನು ಅನುಮೋದಿಸಿತು ಎಂದು ಸಾಹಿತ್ಯ ಅಕಾಡೆಮಿ ಹೇಳಿಕೆಯಲ್ಲಿ ತಿಳಿಸಿದೆ. ನ್ಯಾಷನಲ್ ಅಕಾಡೆಮಿ ಆಫ್ ಲೆಟರ್ಸ್ 2024 ರ ಬಾಲ ಸಾಹಿತ್ಯ ಪುರಸ್ಕಾರದ 24 ವಿಜೇತರ ಹೆಸರನ್ನು ಸಹ ಪ್ರಕಟಿಸಿದೆ.
ಕೃಷ್ಣಮೂರ್ತಿ ಬಿಳಿಗೆರೆ
ಹುಳಿಯಾರಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಕೆಲಸ ಮಾಡುತ್ತಿರುವ ಕೃಷ್ಣಮೂರ್ತಿ ಅವರು ಕಣ್ಮುಚ್ಚಾಲೆ ಮಕ್ಕಳ ಗುಂಪು, ನಮ್ಮ ಪ್ರಕಾಶನ ಮತ್ತು ಸಿರಿಸಮೃದ್ಧಿ ಬಳಗ ಮುಂತಾದ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದಾರೆ. ಸಾವಯವ ಕೃಷಿ ಮತ್ತು ಮಳೆ ನೀರಿನ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಜಿಎಸ್ಎಸ್ ಕಾವ್ಯ ಪ್ರಶಸ್ತಿ, ಶಿಕ್ಷಣ ಸಿರಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಪುಸ್ತಕ ಸೊಗಸು ಪ್ರಶಸ್ತಿಗಳಿಗೆ ಕೃಷ್ಣಮೂರ್ತಿ ಬಿಳಿಗೆರೆ ಭಾಜನರಾಗಿದ್ದಾರೆ.
ಜೀರಿಂಬೆ ಹಾಡು, ಪದ್ಯದ ಮರ, ಡ್ರೂ ಡ್ರೂ ಡ್ರೂಟೆ, ಗುಡು ಗುಡು ಗುಡ್ಡ, ಹಾಡೆ ಸುವ್ವಿ ಹಾಡಿನ ಪುಸ್ತಕಗಳನ್ನು ಬರೆದಿದ್ದಾರೆ. ಛೂಮಂತ್ರಯ್ಯನ ಕತೆಗಳು,ಚಗಚೆ ಹೂವಿನ ಹುಡುಗಿ ಮಕ್ಕಳ ಕಥಾ ಪುಸ್ತಕಗಳಾಗಿದೆ. ಅಗಲ ಕಿವಿಯ ಅರಿವುಗಾರ, ನವಿಲೂರಿನ ಕತೆ, ಮಳೆ ಹುಚ್ಚ, ಅಂಗಭಂಗದ ರಾಜ್ಯದಲ್ಲಿ, ಕೇಡಾಳ ಕೆಪ್ಪರ್ಕ, ಕತ್ತೆ ಹಾಡು ಎಂಬ ಮಕ್ಕಳ ನಾಟಕಗಳನ್ನು ರಚಿಸಿದ್ದಾರೆ.
ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ ಇವರ ಕಾವ್ಯ ಕೃತಿಗಳಾಗಿದ್ದು, ಮಳೆ ನೀರ ಕೊಯ್ಲು ಕುರಿತ ಪುಸ್ತಕಗಳು ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ, ಬಿಸ್ಲುಬಾಳೆ ಹಣ್ಣು ಪುಸ್ತಕಗಳನ್ನು ರಚಿಸಿದ್ದಾರೆ.
ಶ್ರುತಿ ಬಿಆರ್…
ಯುವ ಪುರಸ್ಕಾರಕ್ಕೆ ಕವಯತ್ರಿ ಶ್ರುತಿ ಬಿಆರ್ ಆಯ್ಕೆಯಾಗಿದ್ದಾರೆ. ಶ್ರುತಿ ಅವರ ಚೊಚ್ಚಲ ಕವನ ಸಂಕಲನ ‘ಜಿರೋ ಬ್ಯಾಲೆನ್ಸ್’ಗೆ ಪ್ರಶಸ್ತಿ ಲಭಿಸಿದೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯವರಾದ ಶ್ರುತಿ ಬಿಆರ್, ಪ್ರಸ್ತುತ ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಶ್ರುತಿ ಅವರು ಮಾನಸ ಗಂಗೋತ್ರಿಯ ಮೈಸೂರು ವಿಶ್ವ ವಿದ್ಯಾನಿಲಯದಿಂದ ಪ್ರಥಮ ರ್ಯಾಂಕ್ ಮತ್ತು ಐದು ಚಿನ್ನದ ಪದಕಗಳೊಂದಿಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ 2017ರಲ್ಲಿ ಅರ್ಥಶಾಸ್ತ್ರದಲ್ಲಿ ಪಿಹೆಚ್ಡಿ ಪದವಿ ಪಡೆದಿದ್ದಾರೆ. ಇವರ ಹಲವಾರು ಲೇಖನಗಳು, ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಯುವ ಪುರಸ್ಕಾರ….
ಯುವ ಪುರಸ್ಕಾರವನ್ನು 10 ಕವನ ಪುಸ್ತಕಗಳು, ಏಳು ಸಣ್ಣ ಕಥೆಗಳ ಸಂಕಲನಗಳು, ಎರಡು ಲೇಖನಗಳ ಸಂಕಲನಗಳು ಮತ್ತು ಒಂದು ಪ್ರಬಂಧಗಳು, ಒಂದು ಕಾದಂಬರಿ, ಒಂದು ಗಜಲ್ಗಳ ಪುಸ್ತಕ ಮತ್ತು ಒಂದು ಸ್ಮರಣ ಸಂಚಿಕೆಗೆ ನೀಡಲಾಗಿದೆ.
ಕೆ ವೈಶಾಲಿ ಅವರ ಆತ್ಮಚರಿತ್ರೆ “ಹೋಮ್ಲೆಸ್: ಗ್ರೋಯಿಂಗ್ ಅಪ್ ಲೆಸ್ಬಿಯನ್ ಮತ್ತು ಡಿಸ್ಲೆಕ್ಸಿಕ್ ಇನ್ ಇಂಡಿಯಾ” ಕೃತಿಯನ್ನು ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಗೌರವ ಪಾಂಡೆ ಅವರ “ಸ್ಮೃತಿಯೋಂ ಕೆ ಬೀಚ್ ಗಿರಿ ಹೈ ಪೃಥ್ವಿ” ಕವನ ಸಂಕಲನಕ್ಕಾಗಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
ಉಳಿದಂತೆ ನಯನಜ್ಯೋತಿ ಶರ್ಮಾ (ಅಸ್ಸಾಮಿ), ಸುತಾಪ ಚಕ್ರವರ್ತಿ (ಬಂಗಾಳಿ), ರಾಣಿ ಬರೋ (ಬೋಡೋ) ಮತ್ತು ಹೀನಾ ಚೌಧರಿ (ಡೋಗ್ರಿ), ರಿಂಕು ರಾಥೋಡ (ಗುಜರಾತಿ), ಶ್ರುತಿ ಬಿ.ಆರ್. (ಕನ್ನಡ), ಮೊಹಮ್ಮದ್ ಅಶ್ರಫ್ ಜಿಯಾ (ಕಾಶ್ಮೀರಿ), ಅದ್ವೈತ ಸಲ್ಗಾಂವ್ಕರ (ಕೊಂಕಣಿ), ರಿಂಕಿ ಝಾ ರಿಷಿಕಾ (ಮೈಥಿಲಿ), ಮತ್ತು ಶ್ಯಾಮಕೃಷ್ಣನ್ ಆರ್ (ಮಲಯಾಳಂ), ವೈಖೋಮ್ ಚಿಂಗ್ಖೀಂಗನ್ಬಾ (ಮಣಿಪುರಿ), ದೇವಿದಾಸ ಸೌದಾಗರ (ಮರಾಠಿ), ಸೂರಜ ಚಾಪಗೈನ್ (ನೇಪಾಳಿ), ಸಂಜಯಕುಮಾರ ಪಾಂಡಾ (ಒಡಿಯಾ), ರಣಧೀರ (ಪಂಜಾಬಿ), ಸೋನಾಲಿ ಸುತಾರ (ರಾಜಸ್ಥಾನಿ), ಅಂಜನ ಕರ್ಮಾಕರ್ (ಸಂತಲಿ), ಗೀತಾ ಪ್ರದೀಪ್ ರೂಪಾನಿ (ಸಿಂಧಿ), ಲೋಕೇಶ ರಘುರಾಮನ್ (ತಮಿಳು), ರಮೇಶ ಕಾರ್ತಿಕ ನಾಯಕ (ತೆಲುಗು) ಮತ್ತು ಜಾವೇದ್ ಅಂಬರ್ ಮಿಸ್ಬಾಹಿ (ಉರ್ದು) ಅವರನ್ನು ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುವ ಪುರಸ್ಕಾರ ಪುರಸ್ಕೃತರಿಗೆ ಕೆತ್ತಿದ ತಾಮ್ರ ಫಲಕ ಮತ್ತು 50,000 ರೂ.ಗಳ ಚೆಕ್ ಅನ್ನು ಒಳಗೊಂಡ ಪೆಟ್ಟಿಗೆಯನ್ನು ಸ್ವೀಕರಿಸಲಿದ್ದಾರೆ.
ಬಾಲ ಸಾಹಿತ್ಯ ಪುರಸ್ಕಾರ
ಏಳು ಕಾದಂಬರಿಗಳು, ಆರು ಕವನಗಳು, ನಾಲ್ಕು ಕಥೆಗಳು, ಐದು ಸಣ್ಣ ಕಥೆಗಳು, ಒಂದು ನಾಟಕ ಮತ್ತು ಒಂದು ಐತಿಹಾಸಿಕ ಕಾದಂಬರಿಗೆ ಬಾಲ ಸಾಹಿತ್ಯ ಪುರಸ್ಕಾರವನ್ನು ನೀಡಲಾಗಿದೆ. ಸಾಹಿತ್ಯ ಅಕಾಡೆಮಿಯು ಇಂಗ್ಲಿಷ್ ಲೇಖಕಿ ನಂದಿನಿ ಸೇನ್ಗುಪ್ತಾ ಅವರನ್ನು ಅವರ ಐತಿಹಾಸಿಕ ಕಾದಂಬರಿ “ದಿ ಬ್ಲೂ ಹಾರ್ಸ್ ಅಂಡ್ ಅಮೇಜಿಂಗ್ ಅನಿಮಲ್ ಸ್ಟೋರೀಸ್ ಫ್ರಮ್ ಇಂಡಿಯನ್ ಹಿಸ್ಟರಿ” ಮತ್ತು ದೇವೆಂದರಕುಮಾರ ಅವರ ಮಕ್ಕಳ ಕಥೆಗಳ ಸಂಗ್ರಹ “51 ಬಾಲ್ ಕಹಾನಿಯನ್” ಆಯ್ಕೆ ಮಾಡಿದೆ. ರಂಜು ಹಜಾರಿಕಾ (ಅಸ್ಸಾಮಿ), ದೀಪನ್ವಿತಾ ರಾಯ್ (ಬಂಗಾಳಿ), ಬರ್ಗಿನ್ ಜೆಕೋವಾ ಮಚಹರಿ (ಬೋಡೋ), ಬಿಶನ್ ಸಿಂಗ್ ‘ದರ್ದಿ’ (ಡೋಗ್ರಿ), ಗಿರಾ ಪಿನಾಕಿನ್ ಭಟ್ (ಗುಜರಾತಿ) ಮತ್ತು ಕೃಷ್ಣಮೂರ್ತಿ ಬಿಳಿಗೆರೆ (ಕನ್ನಡ), ಮುಜಾಫರ್ ಹುಸೇನ್ ದಿಲ್ಬರ್ (ಕಾಶ್ಮೀರಿ), ಹರ್ಷ ಸದ್ಗುರು ಶೆಟ್ಯೆ (ಕೊಂಕಣಿ), ನಾರಾಯಣಗೀ (ಮೈಥಿಲಿ), ಉನ್ನಿ ಅಮ್ಮಾಯಂಬಲಂ (ಮಲಯಾಳಂ), ಕ್ಷೇತ್ರಿಮಯೂನ್ ಸುದಾನಿ (ಮಣಿಪುರಿ), ಭರತ ಸಸಾನೆ (ಮರಾಠಿ), ಬಸಂತ ಥಾಪಾ (ನೇಪಾಳಿ) ಮತ್ತು ಮಾನಸ ರಂಜನ್ ಸಮಲ್ (ಒಡಿಯಾ), ಕುಲದೀಪ್ ಸಿಂಗ್ ದೀಪ್ (ಪಂಜಾಬಿ), ಪ್ರಹ್ಲಾದ್ ಸಿಂಗ್ ‘ಜೋರ್ಡಾ’ (ರಾಜಸ್ಥಾನಿ), ಹರ್ಷದೇವ ಮಾಧವ (ಸಂಸ್ಕೃತ), ದುಗಲ್ ತುಡು (ಸಂತಾಲಿ), ಲಾಲ್ ಹೊತ್ಚಂದನಿ ‘ಲಾಚಾರ್’ (ಸಿಂಧಿ), ಯುವ ವಾಸುಕಿ (ತಮಿಳು), ಪಿ ಚಂದ್ರಶೇಖರ ಆಜಾದ್ (ತೆಲುಗು) ಮತ್ತು ಶಮ್ಸುಲ್ ಇಸ್ಲಾಂ ಫಾರೂಕಿ (ಉರ್ದು) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಾಲ ಸಾಹಿತ್ಯ ಪುರಸ್ಕಾರ ವಿಜೇತರಿಗೆ ಕೆತ್ತಿದ ತಾಮ್ರ ಫಲಕ ಮತ್ತು 50,000 ರೂ.ಗಳ ಚೆಕ್ ಅನ್ನು ಮುಂದಿನ ದಿನಗಳಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ನೀಡಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ