ಬಾಗಲಕೋಟೆ: ತಮಿಳುನಾಡಿನಿಂದ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣಕ್ಕೆ ಬಂದಿದ್ದ ಗ್ರಾನೈಟ್ ತುಂಬಿದ ಲಾರಿಯಲ್ಲಿ ಮಹಿಳೆಯ ರುಂಡ ಪತ್ತೆಯಾಗಿದ್ದು, ಮಹಿಳೆಯ ರುಂಡ ಕಂಡ ಲಾರಿ ಚಾಲಕ ಇಳಕಲ್ಲ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾನೆ.
ತಮಿಳುನಾಡಿನ ಮಧುರೈನಿಂದ ಇಳಕಲ್ಲ ಪಟ್ಟಣಕ್ಕೆ ಟಿಎನ್-೫೨ ಆರ್-೭೯೫೨ ಸಂಖ್ಯೆಯ ಲಾರಿ ಗ್ರಾನೈಟ್ ತುಂಬಿಕೊಂಡು ಬಂದಿದೆ. ಗ್ರಾನೈಟ್ ಇಳಿಸುವ ಸಂದರ್ಭದಲ್ಲಿ ಮಹಿಳೆಯ ರುಂಡ ಇರುವ ಚೀಲ ಪತ್ತೆಯಾಗಿದೆ.
ಅಂದಾಜು ೬೫ ರಿಂದ ೭೦ ವರ್ಷದ ಅಪರಿಚಿತ ಮಹಿಳೆಯ ರುಂಡ ಇದಾಗಿದ್ದು, ತಲೆ ಕತ್ತರಿಸಿ ಚೀಲದಲ್ಲಿ ತುಂಬಿ ಯಾರೋ ಲಾರಿಯಲ್ಲಿ ದುಷ್ಕರ್ಮಿಗಳು ಎಸೆದಿರಬಹುದು. ಇಲ್ಲವೇ ಕೊಲೆ ಮಾಡಿ ಸಾಕ್ಷಿ ನಾಶಪಡಿಸುವ ಹಿನ್ನೆಲೆಯಲ್ಲಿ ಲಾರಿಯಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಲಾರಿ ಚಾಲಕ ರಾಜಾ ಕಲ್ಯಾಣ ಸುಂದರ ನೀಡಿರುವ ದೂರಿನನ್ವಯ ಇಳಕಲ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ