ಲಕ್ನೋ: ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುಖೇಶ್ ಮಿಶ್ರಾ ಹಾಗೂ ಮತ್ತಿಬ್ಬರ ಜಾಮೀನು ಅರ್ಜಿ ವಜಾ ಮಾಡಿದ್ದಾರೆ.
ಪ್ರಕರಣ ತೀವ್ರ ಸ್ವರೂಪದಾಗಿದ್ದು, ಗಂಭೀರವಾಗಿದೆ. ಅಲ್ಲದೇ ತನಿಖೆ ಇನ್ನೂ ಚಾಲ್ತಿಯಲ್ಲಿದ್ದು ಈ ಹಂತದಲ್ಲಿ ಜಾಮೀನು ನೀಡದಂತೆ ಸರ್ಕಾರದ ಪರ ವಕೀಲ ಅರವಿಂದ್ ತ್ರಿಪಾಠಿ ವಾದ ಮಂಡಿಸಿದ್ದರು. ಕಳೆದ ತಿಂಗಳು ಮಿಶ್ರಾ ಹಾಗೂ ಮತ್ತಿಬ್ಬರ ಜಾಮೀನು ಅರ್ಜಿಯನ್ನು ಲಖೀಂಪುರ ಖೇರಿಯಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ತಿರಸ್ಕರಿಸಿತ್ತು.
ಕೇಂದ್ರ ಸರ್ಕಾರ ಜಾರಿ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಆಶಿಶ್ ಮಿಶ್ರಾಗೆ ಸಂಬಂಧಿಸಿದ ಕಾರನ್ನು ರೈತರು ಮೇಲೆ ಹರಿಸಲಾಗಿತ್ತು. ಪರಿಣಾಮ ಸ್ಥಳದಲ್ಲಿ ನಾಲ್ವರು ರೈತರು ಸೇರಿ ಹಿಂಸಾಚಾರದಲ್ಲಿ 8 ಮಂದಿ ಮೃತಪಟ್ಟಿದ್ದರು.
12 ಗಂಟೆಗಳ ವಿಚಾರಣೆಯ ಬಳಿಕ ವಿಶೇಷ ತನಿಖಾ ತಂಡ (ಎಸ್ಐಟಿ) ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾನನ್ನು ಬಂಧಿಸಿತು ಮತ್ತು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ನವೆಂಬರ್ 15 ರಂದು ಸುಪ್ರೀಂಕೋರ್ಟ್ ಎಸ್ಐಟಿ ತನಿಖೆಯನ್ನು ಬೇರೆ ರಾಜ್ಯದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಮೇಲ್ವಿಚಾರಣೆ ಮಾಡಬೇಕೆಂದು ಹೇಳಿತ್ತು. ಪ್ರಕರಣ ಸಂಬಂಧ ಈವರೆಗೂ ಮಿಶ್ರಾ ಸೇರಿದಂತೆ ಇದುವರೆಗೆ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ