ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೊಂಕಣ ಶಿಕ್ಷಣ ಸಂಸ್ಥೆಯ ಸರಸ್ವತಿ ವಿದ್ಯಾ ಕೇಂದ್ರದ ವಿದ್ಯಾರ್ಥಿನಿ ಅದಿತಿ ಪ್ರಕಾಶ ವೈದ್ಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಗ್ರಾಮೀಣ ಪ್ರತಿಭೆಯಾದ ಈ ವಿದ್ಯಾರ್ಥಿನಿಯ ಸಾಧನೆಗೆ ಕುಮಟಾ -ಹೊನ್ನಾವರ ಶಾಸಕ ದಿನಕರ ಶೆಟ್ಟಿ ಅವರು ಹೊನ್ನಾವರದ ನವಿಲುಗೋಣದ ಗ್ರಾಮದ
ಭುವಿನಕೊಡ್ಲು ಎಂಬಲ್ಲಿರುವ ವಿದ್ಯಾರ್ಥಿನಿಯ ಮನೆಗೆ ತೆರಳಿ ಶಾಲು ಹೊದೆಸಿ ನಗದು ಬಹುಮಾನ ನೀಡಿ ಸನ್ಮಾನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ವಿದ್ಯಾರ್ಥಿನಿ ಅದಿತಿ ವೈದ್ಯ ಕೇವಲ ಗ್ರಾಮ ಹಾಗೂ ಕಲಿತ ಶಾಲೆಗಷ್ಟೇ ಅಲ್ಲ, ಇಡೀ ರಾಜ್ಯಕ್ಕೇ ಕೀರ್ತಿ ತಂದಿದ್ದಾರೆ ಎಂದು ಹೇಳಿದರು. ಆಧುನಿಕ ಸೌಲಭ್ಯ ಇಲ್ಲದೆ ರಸ್ತೆ, ಇಂಟೆರ್ನೆಟ್ ಸೌಲಭ್ಯ ಇಲ್ಲದೆ ಇದ್ದರೂ ಅದಿತಿ ವೈದ್ಯ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಅಪೂರ್ವ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿನಿ 2ಕಿಮೀ ಕಾಡಿನ ದಾರಿಯಲ್ಲಿ ನಡೆದುಕೊಂಡು ಹೋಗಿ ಬಸ್ಸಿನಲ್ಲಿ ಪ್ರತಿನಿತ್ಯ ೧೫-೨೦ ಕಿಮೀ ಪ್ರಯಾಣ ಮಾಡಿ ಈ ಸಾಧನೆ ಮಾಡಿದ್ದಾಳೆ ಎಂದ ಶಾಸಕರು ಶೀಘ್ರದಲ್ಲಿಯೇ ಈ ಭಾಗಕ್ಕೆ ರಸ್ತೆ ಸೌಲಭ್ಯ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕ, ವಿದ್ಯಾರ್ಥಿನಿಯ ತಾಯಿ ನಾಗರತ್ನ ಹಾಗೂ ತಂದೆ ಪ್ರಕಾಶ ವೈದ್ಯ ಇದ್ದರು.
ಈ ಸಂದರ್ಭದಲ್ಲಿ ಶಾಸಕರಾಗಿ ಪುನರಾಯ್ಕೆಯಾದ ದಿನಕರ ಶೆಟ್ಟಿ ಅವರನ್ನು ಹವ್ಯಕ ವಲಯದ ಪರವಾಗಿ ವಲಯ ಅಧ್ಯಕ್ಷರಾದ ಆರ್.ಆರ್.ಭಟ್ಟ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕೆಕ್ಕಾರು ಗ್ರಾಪಂ ಅಧ್ಯಕ್ಷ ಗೋವಿಂದ ನಾಯ್ಕ, ದುರ್ಗಾಂಬಾ ಸಂಘದ ಅಧ್ಯಕ್ಷ ಎಂ.ಎಂ., ಹೆಗಡೆ ಮೊದಲಾದವರಿದ್ದರು. ಉಪಸ್ಥಿತರಿದ್ದರು, ಕೃಷ್ಣನನಂದ್ ಭಟ್ಟ ಸ್ವಾಗತಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ