ಕಾಂಗ್ರೆಸ್‌ ಐದನೇ ಗ್ಯಾರಂಟಿ ʼಯುವನಿಧಿʼ ಯೋಜನೆ ನೋಂದಣಿ ಪ್ರಕ್ರಿಯೆಗೆ ಸಿಎಂ ಸಿದ್ದರಾಮಯ್ಯ ಚಾಲನೆ

ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಯುವನಿಧಿ ನೋಂದಣಿ ಪ್ರಕ್ರಿಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಚಾಲನೆ ನೀಡಿದ್ದಾರೆ.
ವಿಧಾನಸೌಧದ ಬ್ವಾಂಕ್ವೆಟ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಶರಣ ಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಎಂ.ಸಿ. ಸುಧಾಕರ, ಬಿ. ನಾಗೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಇದು ಪದವೀಧರ, ಡಿಪ್ಲೊಮಾ ಪದವೀಧರ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದರೆ ಆರು ತಿಂಗಳು ನಿರುದ್ಯೋಗ ‌ಭತ್ಯೆ‌ ನೀಡುವ ಯೋಜನೆಯಾಗಿದೆ. 2023 ರಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ಫಲಾನುಭವಿ ಯುವಕ ಹಾಗೂ ಯುವತಿ ದೀಪ ಬೆಳಗಿಸುವ ಮೂಲಕ ಯುವನಿಧಿ ಯೋಜನೆ ಉದ್ಘಾಟಿಸಿದರು. ಉದ್ಘಾಟನೆ ಕಾರ್ಯಕ್ರಮ ಸಂದರ್ಭದಲ್ಲಿ ಡಿಕೆ ಶಿವಕುಮಾರ ವೇದಿಕೆ ಕೆಳಗಡೆ ಇದ್ದ ಓರ್ವ ಯುವಕ ಹಾಗೂ ಯುವತಿಗೆ ವೇದಿಕೆಗೆ ಬರುವಂತೆ ಆಹ್ವಾನಿಸಿದರು. ಅವರ ಮೂಲಕವೇ ದೀಪ ಬೆಳಗಿಸಿ ಯೋಜನೆ ನೋಂದಣಿಗೆ ಚಾಲನೆ ನೀಡಲಾಯಿತು.

ಕೌಶಲ್ಯಭಿವೃದ್ಧಿ ಸಚಿವ ಶರಣ ಪ್ರಕಾಶ ಪಾಟೀಲ ಮಾತನಾಡಿ, ಐದು ಗ್ಯಾರಂಟಿ ಜಾರಿಗೊಳಿಸಿ ಕಾಂಗ್ರೆಸ್ ಸರ್ಕಾರ‌ ನುಡಿದಂತೆ‌ ನಡೆದಿದೆ‌ ಎಂದರು.
ಗ್ಯಾರಂಟಿಗಳ ಬಗ್ಗೆ ವಿರೋಧ ಪಕ್ಷಗಳು ಟೀಕೆ ಮಾಡ್ತಿವೆ. ಆದರೆ ರಾಜ್ಯದ ಬಡವರ ಮನೆಬಾಗಿಲಿಗೆ ಸರ್ಕಾರದ ಬೊಕ್ಕಸದ ಸಿಂಹ ಪಾಲು ಕೊಡುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಯೋಜನೆ ವಿಳಂಬ ಆಗಿಲ್ಲ. 2022-23 ನೇ ಸಾಲಿನಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಡಿಸೆಂಬರ್ ತಿಂಗಳಲ್ಲಿ ಆರು ತಿಂಗಳು ಪೂರ್ಣಗೊಳ್ಳುತ್ತಿದೆ. ಈ‌ ಸಂದರ್ಭದಲ್ಲಿ ಯೋಜನೆಗೆ ಚಾಲನೆ‌ ನೀಡಿದ್ದೇವೆ ಎಂದರು.
ಯುವನಿಧಿ ಯೋಜನೆಗೆ ಜನವರಿ 12 ರಂದು ಶಿವಮೊಗ್ಗದಲ್ಲಿ ಅಧಿಕೃತ ಚಾಲನೆ ‌ನೀಡಲಾಗುವುದು. ಅದೇ ದಿನ ಫಲಾನಿಭವಿಗಳ ಖಾತೆಗೆ ಭತ್ಯೆ ಮೊತ್ತ ಪಾವತಿ ಆಗಲಿದೆ ಎಂದು ಅವರು ತಿಳಿಸಿದರು.

ಪ್ರಮುಖ ಸುದ್ದಿ :-   ರಸ್ತೆ ಅಪಘಾತದಲ್ಲಿ ಕನ್ನಡ ಕಿರುತೆರೆಯ ಜನಪ್ರಿಯ ನಟಿ ಪವಿತ್ರ ಜಯರಾಂ ಸಾವು

ಯೋಜನೆ ಬಗ್ಗೆ….
ಪದವಿ, ಡಿಪ್ಲೋಮಾ ಮುಗಿಸಿ 6 ತಿಂಗಳಾದರೂ ಉದ್ಯೋಗ ಸಿಗದಿರುವ ಹಾಗೂ ಕರ್ನಾಟಕದಲ್ಲಿ ವಾಸ ಇರುವವರಿಗೆ ಈ ಯೋಜನೆ ಅನ್ವಯವಾಗಲಿದೆ. ಈ‌ ಯೋಜನೆಯು ಅರ್ಹ ಫಲಾನಿಭವಿಗಳಿಗೆ 2 ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಈ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುತ್ತದೆ. ಅರ್ಜಿ ಸಲ್ಲಿಸುವವರು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement